ಬೆಂಗಳೂರು: ನಾಗರಿಕ ಸೇವಾ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಂಬಂಧ ಅಧ್ಯಯನಕ್ಕಾಗಿ ಬಿಹಾರಕ್ಕೆ ಅಧಿಕಾರಿಗಳ ತಂಡ ತೆರಳಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್.ಸುರೇಶ್ಕುಮಾರ್ ತಿಳಿಸಿದರು.
ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಶುಕ್ರವಾರ ವಿಡಿಯೊ ಸಂವಾದ ನಡೆಸಿದಾಗ ಸುರೇಶಕುಮಾರ್ ಈ ವಿಷಯ ತಿಳಿಸಿದರು. ಸೇವಾ ಖಾತರಿ ಯೋಜನೆ ಪ್ರಾಯೋಗಿಕವಾಗಿ ರಾಜ್ಯದ ನಾಲ್ಕು ವಿಭಾಗಗಳ ತಲಾ ಒಂದೊಂದು ತಾಲ್ಲೂಕುಗಳಲ್ಲಿ ಫೆಬ್ರುವರಿಯಲ್ಲಿ ಜಾರಿಗೆ ಬರಲಿದೆ. ಏಪ್ರಿಲ್ನಲ್ಲಿ ಎಲ್ಲ ಕಡೆ ಅನುಷ್ಠಾನಗೊಳ್ಳಲಿದೆ.
ಈ ಮಹತ್ವದ ಯೋಜನೆಅರ್ಥ ಮಾಡಿಕೊಂಡು, ಅನುಷ್ಠಾನಕ್ಕೆ ತರಲು ಸಜ್ಜಾಗಬೇಕು. ಜಿಲ್ಲೆಗಳಲ್ಲಿ ಯಾವ ರೀತಿ ಅನುಷ್ಠಾನವಾಗಿದೆ ಎಂದು ಸಮೀಕ್ಷೆ ನಡೆಸಿ ರ್ಯಾಂಕಿಂಗ್ ನೀಡಲಾಗುವುದು. ಬಿಹಾರ, ಮಧ್ಯಪ್ರದೇಶ, ಪಂಜಾಬ್ಗಿಂತ ಉತ್ತಮವಾಗಿ ಈ ಕಾಯ್ದೆ ರಾಜ್ಯದಲ್ಲಿ ಜಾರಿಗೊಳಿಸಬೇಕು ಎಂದು ಅಧಿಕಾರಿಗಳಿಗೆ ಮನವಿ ಮಾಡಿದರು.