ಬೆಂಗಳೂರು: ಚುನಾವಣೆಗೆ ತಯಾರಿ ನಡೆಸಿರುವ ಬೆಂಗಳೂರು ನಗರ ಜಿಲ್ಲಾಡಳಿತವು ಚುನಾವಣೆಗೆ ಸಂಬಂಧಿಸಿದ ಎಲ್ಲ ಮಾಹಿತಿ ಪಡೆಯಲು ಹಾಗೂ ದೂರುಗಳನ್ನು ಸಲ್ಲಿಸಲು ಸಹಾಯವಾಣಿ ಕೇಂದ್ರ ಆರಂಭಿಸಿದೆ.
ಜಿಲ್ಲಾಧಿಕಾರಿ ದಯಾನಂದ್ ಹಾಗೂ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ನಗರದಲ್ಲಿ ಸಂಜೆಯ ವೇಳೆಗೆ ಸಹಾಯವಾಣಿ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ.
ಈ ಕೇಂದ್ರದಲ್ಲಿ ಆನೇಕಲ್, ಬೆಂಗಳೂರು ದಕ್ಷಿಣ, ಮಹದೇವಪುರ, ಬ್ಯಾಟರಾಯನಪುರ, ಯಲಹಂಕ, ದಾಸರಹಳ್ಳಿ ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಪಟ್ಟ ಚುನಾವಣಾ ದೂರುಗಳು ಹಾಗೂ ವಿಚಾರಣೆಯನ್ನು ಮಾಡಬಹುದಾಗಿದೆ.
ಸಹಾಯವಾಣಿ ಸಂಖ್ಯೆ:18004250138. ಮುಂದಿನ 24 ಗಂಟೆಗಳಲ್ಲಿ ಈ ಸಂಖ್ಯೆಯು ಕಾರ್ಯನಿರ್ವಹಿಸಲಿದೆ ಎಂದು ಚುನಾವಣಾ ಅಧಿಕಾರಿಗಳು ಮಾಹಿತಿ ನೀಡಿದರು.