ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಅಧಿವೇಶನಕ್ಕೆ ಕೊಕ್‌: ಜನಕ್ಕೆ ಕೋಪ

Last Updated 21 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಬೆಳಗಾವಿ: ಉತ್ತರ ಕರ್ನಾಟಕ ಭಾಗದ ಸಮಸ್ಯೆ­ಗಳ ಬಗ್ಗೆ ಚರ್ಚೆ ಹಾಗೂ ಅಭಿ­ವೃದ್ಧಿಗೆ ಪೂರಕವಾಗಲಿ ಎಂಬ ಉದ್ದೇ­ಶ­ದಿಂದ ನಿರ್ಮಿಸಲಾದ ಸುವರ್ಣ ವಿಧಾನ­ಸೌಧ­ದಲ್ಲಿ ಈ ಬಾರಿ ವಿಧಾನ ಮಂಡ­ಲದ ಚಳಿಗಾಲದ ಅಧಿವೇಶನ ನಡೆ­ಯು­ವು­ದಿಲ್ಲ ಎಂಬುದು ಇಲ್ಲಿನ ಜನರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಸುವರ್ಣ ವಿಧಾನಸೌಧ ಉದ್ಘಾಟನೆ­ಯಾದ ನಂತರ ಎರಡು ವರ್ಷ ಚಳಿ­ಗಾ­ಲದ ಅಧಿವೇಶನ ನಡೆಸುವಷ್ಟರಲ್ಲೇ ಈ ಭಾಗದ ಸಮಸ್ಯೆಗಳ ಮಹಾಪೂರದ ಸುಳಿಗೆ ಸಿಲುಕಿ ರಾಜ್ಯ ಸರ್ಕಾರ ನಲುಗಿ ಹೋಗಿದೆಯೇ ಎಂದು ಜನರು ಪ್ರಶ್ನೆ ಮಾಡುತ್ತಾರೆ.

ಚಳಿಗಾಲದ ಅಧಿವೇಶನ ಇಲ್ಲಿಯೇ ನಡೆಸಬೇಕು ಹಾಗೂ ಸರ್ಕಾರಿ ಕಚೇರಿ­ಗ­ಳನ್ನು ಇಲ್ಲಿಗೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿ ಅ. 31ರ  ಬೆಳಿಗ್ಗೆ 11ರಿಂದ ಸಂಜೆ 4ರ ವರೆಗೆ ಸುವರ್ಣ ವಿಧಾ­ನ­ಸೌಧದ ಎದುರು ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಲು ಮಂಗಳ­ವಾರ ನಡೆದ ವಿವಿಧ ಕನ್ನಡಪರ ಸಂಘಟ­ನೆ­­ಗಳ ಸಭೆಯಲ್ಲಿ ನಿರ್ಧರಿಸಲಾಯಿತು.

‘ರಾಜ್ಯ ಸರ್ಕಾರಕ್ಕೆ ಉತ್ತರ ಕರ್ನಾ­ಟಕದ ಬಗ್ಗೆ ತಾತ್ಸಾರ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳಗಾವಿಯಲ್ಲಿ ನಡೆ­ಯಬೇಕಿದ್ದ ವಿಧಾನಮಂಡಲ ಅಧಿ­ವೇ­ಶನ ರದ್ದುಗೊಳಿಸುವ ಹುನ್ನಾರ ಮಾಡಿ­­­ದ್ದಾರೆ’ ಎಂದು ಮಾಜಿ ಮೇಯರ್‌ ಸಿದ್ಧನಗೌಡ ಪಾಟೀಲ ಆರೋಪಿಸಿದರು.

‘ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಉತ್ತರ ಕರ್ನಾಟಕದ ಜನತೆ­ಯನ್ನು ಗುಲಾಮರಂತೆ ನೋಡುತ್ತಿದೆ. ಈ ಭಾಗದ ಅಭಿವೃದ್ಧಿ ದೃಷ್ಟಿಯಿಂದ ಬೆಳ­­ಗಾವಿ­ಯಲ್ಲಿ ಪ್ರತಿ ವರ್ಷ ಅಧಿ­ವೇಶನ ನಡೆ­ಯಲೇಬೇಕು. ಉತ್ತರ ಕರ್ನಾ­­ಟಕ­ವನ್ನು ಸಂಪೂರ್ಣ ಅಭಿವೃದ್ಧಿ ಮಾಡ­­ಬೇಕು. ಇಲ್ಲವಾದರೆ ಪ್ರತ್ಯೇಕ ರಾಜ್ಯ ರಚ­ನೆಗೆ ಹೋರಾಟ ಮಾಡ­­ಬೇಕಾ­ಗು­ತ್ತದೆ’ ಎಂದು ಜೆಡಿಎಸ್‌ ಮುಖಂಡ ಅಶೋಕ ಪೂಜಾರಿ ಎಚ್ಚರಿಸಿದರು.

ಈ ಭಾಗದ ಸಮಸ್ಯೆಗಳಿಗೆ ಸಮರ್ಪಕ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಡೆಯಬೇಕಿದ್ದ ಚಳಿಗಾಲದ ಅಧಿ­ವೇಶನಕ್ಕೆ ಸರ್ಕಾರ ಆಸಕ್ತಿ ತೋರುತ್ತಿಲ್ಲ. ಅಧಿ­­ವೇಶನದ ಸಂದರ್ಭದಲ್ಲಿ ನಡೆಯ­ಬಹು­ದಾದ ಪ್ರತಿಭಟನೆಗಳ ಮುಜುಗರ ಅದನ್ನು ಕಾಡುತ್ತಿದೆ. ಅದಕ್ಕಾಗಿಯೇ  ಹಿಂದೇಟು ಹಾಕುತ್ತಿದೆ ಎಂದೂ ಅವರು ದೂರಿದರು.

ಕಳೆದ ಬಾರಿಯ ಅಧಿವೇಶನದ ಸಂದರ್ಭ­ದಲ್ಲಿ ಕಬ್ಬು ಬೆಲೆ ನಿಗದಿಗೆ ಒತ್ತಾ­ಯಿಸಿ ನಡೆದ ಪ್ರತಿಭಟನೆ
ಯಲ್ಲಿ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಬಳಿಕ ರೈತ ಸಂಘಟನೆಗಳ ಹಾಗೂ ಪ್ರತಿ­ಪಕ್ಷದ ಒತ್ತಡಕ್ಕೆ ಮಣಿದ ಸರ್ಕಾರವು, ಪ್ರತಿ ಟನ್‌ ಕಬ್ಬಿಗೆ ರೂ. 150 ಬೆಂಬಲ ಬೆಲೆ ಸೇರಿ ರೂ. 2,650 ಬೆಲೆಯನ್ನು ಘೋಷಿ­ಸಿತ್ತು. ಆದರೆ, ಆ ದರ ಕಬ್ಬು ಬೆಳೆಗಾ­ರ­ರಿಗೆ ಇನ್ನೂ ಸಿಕ್ಕಿಲ್ಲ. ಹೀಗಾಗಿ ಈ ಬಾರಿ ಅಧಿ­ವೇಶನದ ಸಂದರ್ಭದಲ್ಲಿ ದೊಡ್ಡ ಪ್ರಮಾಣ­ದಲ್ಲಿ ಪ್ರತಿಭಟನೆ ನಡೆಸಲು ರೈತ ಸಂಘಟನೆ ಸಿದ್ಧತೆ ನಡೆಸಿದೆ. ಜೊತೆಗೆ ನ್ಯಾಯ­ಮೂರ್ತಿ ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ಒತ್ತಾಯಿಸಿ ಒಳ ಮೀಸ­ಲಾತಿ ಹೋರಾಟ ಸಮಿತಿ ಸಹ ಉಗ್ರ ಪ್ರತಿಭಟನೆಗೆ ತಯಾರಿ ನಡೆಸಿದೆ. ಹೀಗಾಗಿ ಪ್ರತಿಭಟನೆಯ ಬಿಸಿ ತಪ್ಪಿಸಿ­ಕೊ­ಳ್ಳಲು ರಾಜ್ಯ ಸರ್ಕಾರ ಬೆಳ­ಗಾವಿ­ಯಲ್ಲಿ ಅಧಿವೇಶನ ನಡೆಸಲು ಹಿಂದೇಟು ಹಾಕುತ್ತಿದೆ.

ಖಾಲಿ ಇರುವ ಸುವರ್ಣ ಸೌಧ
ರೂ. 391 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಸುವರ್ಣ ವಿಧಾನಸೌಧವನ್ನು 2012ರ ಅಕ್ಟೋಬರ್‌ 11ರಂದು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಉದ್ಘಾಟಿಸಿದ್ದರು. ಈ ಕಟ್ಟಡದಲ್ಲಿ ಇದುವರೆಗೆ ಕೇವಲ ಎರಡು ಬಾರಿ ತಲಾ 10 ದಿನ ವಿಧಾನಮಂಡಲದ ಅಧಿವೇಶನ ನಡೆಸಲಾಗಿದೆ. ಮೂರನೇ ಅಧಿವೇಶನ ನಡೆಯುವುದು ಅನುಮಾನವಾಗಿದೆ.
ಸುವರ್ಣ ವಿಧಾನಸೌಧಕ್ಕೆ ಸರ್ಕಾರಿ ಕಚೇರಿಗಳನ್ನು ಸ್ಥಳಾಂತರ ಮಾಡುವ ವಿಚಾರ ಕೂಡ ನನೆಗುದಿಗೆ ಬಿದ್ದಿದೆ. ಈ ಸಂಬಂಧ ರಚಿಸಲಾಗಿದ್ದ ಸಮಿತಿಯನ್ನು ವಿಸರ್ಜನೆ ಮಾಡಲಾಗಿದೆ.

ಮರೆತ ವಾಗ್ದಾನ
ರಾಜ್ಯ ಸರ್ಕಾರ ಪ್ರತಿ ಟನ್‌ ಕಬ್ಬಿಗೆ ರೂ. 2,650 ನೀಡುವುದಾಗಿ ರೈತ­ರಿಗೆ ಭರವಸೆ ಕೊಟ್ಟಿತ್ತು. ಆದರೆ, ಭರವಸೆಯನ್ನು ಈವರೆಗೂ ಈಡೇ­ರಿಸಿಲ್ಲ. ಈ ಆತಂಕ ಸರ್ಕಾರಕ್ಕೆ ಕಾಡು­­ತ್ತಿದೆ. ಹೀಗಾಗಿ ಮುಖ್ಯ­ಮಂತ್ರಿ­ಗಳು ಬೆಳಗಾವಿಯಲ್ಲಿ ಅಧಿವೇಶನ ನಡೆ­­ಸಲು ಹಿಂಜರಿಯುತ್ತಿದ್ದಾರೆ.
–ಅಶೋಕ ಪೂಜಾರಿ, ಜೆಡಿಎಸ್‌ ಮುಖಂಡ

ವಾಡಿಕೆ ಪ್ರಕಾರ ಚಳಿ­ಗಾ­ಲದ ಅಧಿವೇಶನ ಬೆಳ­ಗಾವಿ­ಯಲ್ಲಿ ನಡೆ­ಯ­ಬೇಕು. ಇದಕ್ಕೆ ದಿನಾಂಕ ನಿಗದಿ ಮಾಡುವಂತೆ ಮುಖ್ಯ­ಮಂತ್ರಿ­ಗ­ಳನ್ನು ಕೇಳಿ­ದ್ದೇನೆ. ಈ ಬಗ್ಗೆ ರಾಜ್ಯ ಸಚಿವ ಸಂಪುಟ ತೀರ್ಮಾನ ಕೈ­ಗೊಳ್ಳ­­ಬೇಕು.
–ಕಾಗೋಡು ತಿಮ್ಮಪ್ಪ

ಜಂಟಿ ಅಧಿವೇಶನ ನಡೆಸಲಿ
ತಾಂತ್ರಿಕ ಕಾರಣಗಳಿಂದಾಗಿ ನವೆಂ­ಬರ್‌­ನಲ್ಲಿ ಅಧಿವೇಶನ ನಡೆ­ಸಲು ಸಾಧ್ಯವಾಗದಿದ್ದರೆ ಅದನ್ನು ಒಪ್ಪಿಕೊಳ್ಳಬಹುದು. ಆದರೆ, ಜನವರಿಯಲ್ಲಿ ಬೆಳಗಾವಿಯಲ್ಲೇ ವಿಧಾ­ನ­ಮಂಡ­ಲದ ಜಂಟಿ ಅಧಿ­ವೇಶನವನ್ನು ನಡೆಯಬೇಕು.

–ಅಶೋಕ ಚಂದರಗಿ, ಅಧ್ಯಕ್ಷರು, ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ

ಪ್ರಾದೇಶಿಕ ಅಸಮತೋಲನಕ್ಕೆ ನಾಂದಿ
ನಮ್ಮ ಸಮಸ್ಯೆಗಳನ್ನು ಸರ್ಕಾರದ ಬದಲು ಮತ್ತೆ ಯಾರ ಬಳಿ ಹೇಳಿಕೊಳ್ಳಬೇಕು? ಜನರ ಸಮಸ್ಯೆಗಳನ್ನು ಪರಿಹರಿಸುವುದು ಸರ್ಕಾ­ರದ ಕರ್ತವ್ಯ. ಜನರು ಪ್ರತಿಭಟನೆ ನಡೆಸು­ತ್ತಾರೆ ಎಂದು ಬೆಂಗಳೂರಿನಲ್ಲೇ ವಿಧಾ­ನ­ಮಂಡ­ಲದ ಅಧಿವೇಶನ ನಡೆಸಿದರೆ, ಪ್ರಾದೇಶಿಕ ಅಸಮ­ತೋಲ­ನಕ್ಕೆ ಎಡೆ ಮಾಡಿ­ಕೊಟ್ಟಂ­ತಾ­ಗು­ತ್ತದೆ.

– ಸಿದ್ದಗೌಡ ಮೋದಗಿ, ಪ್ರಧಾನ ಕಾರ್ಯದರ್ಶಿ, ಭಾರತೀಯ ಕೃಷಿಕ ಸಮಾಜ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT