ಬೆಂಗಳೂರು: `ನವೆಂಬರ್ ಕೊನೆ ವಾರ ಇಲ್ಲವೇ ಡಿಸೆಂಬರ್ ಮೊದಲ ವಾರದಲ್ಲಿ ಬೆಳಗಾವಿಯ ಸುವರ್ಣಸೌಧದಲ್ಲಿ ವಿಧಾನ ಮಂಡಲದ ಚಳಿಗಾಲದ ಅಧಿವೇಶನ ನಡೆಯಲಿದೆ~ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಬುಧವಾರ ಇಲ್ಲಿ ಹೇಳಿದರು.
ಕರ್ನಾಟಕ ಜ್ಞಾನ ಆಯೋಗ ಸಲ್ಲಿಸಿದ ಶಿಫಾರಸುಗಳನ್ನು ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ನನ್ನ ಅಧಿಕಾರ ಅವಧಿಯಲ್ಲಿ ಸುವರ್ಣಸೌಧ ಉದ್ಘಾಟನೆ ಆಗುತ್ತಿದೆ. ಇದು ನನ್ನ ಸೌಭಾಗ್ಯ. ಉತ್ತರ ಕರ್ನಾಟಕದ ಜನತೆಗೆ ಹೆಮ್ಮೆಯ ಸಂಗತಿ~ ಎಂದು ಹರ್ಷ ವ್ಯಕ್ತಪಡಿಸಿದರು.
`ಹಿಂದೆ ಸ್ಪೀಕರ್ ಆಗಿದ್ದಾಗ ನನ್ನ ಅಧ್ಯಕ್ಷತೆಯ ಸಮಿತಿ ಸುವರ್ಣಸೌಧಕ್ಕೆ ಜಾಗ ಗುರುತಿಸಿತು. ಉತ್ತರ ಕರ್ನಾಟಕ ಭಾಗದವರೇ ಮುಖ್ಯಮಂತ್ರಿ ಆಗಿರುವಾಗ ಸುವರ್ಣಸೌಧದ ಉದ್ಘಾಟನೆ ಆಗುತ್ತಿರುವುದು ಆ ಭಾಗದ ಜನರ ಖುಷಿಯನ್ನು ಇಮ್ಮಡಿಗೊಳಿಸಿದೆ~ ಎಂದರು.