ರಾಮನಗರ: ತಾಲ್ಲೂಕಿನ ತಿಮ್ಮಸಂದ್ರ ಗ್ರಾಮದ ಬಳಿ ಹಳ್ಳದಲ್ಲಿ ಮಳೆ ನೀರು ಹರಿಯುವುದನ್ನು ಕಾಣಲು ಹೋಗಿದ್ದ ವೇಳೆ ಮಣ್ಣಿನ ದಿಬ್ಬ ಕುಸಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಅರಳೀಮರದ ದೊಡ್ಡಿ ಗ್ರಾಮದ ನಿವಾಸಿ ನಂದೀಶ್ (40) ಮೃತರು. ಅವರು ಭಾನುವಾರ ಬೆಳಿಗ್ಗೆ 9ರ ಸುಮಾರಿಗೆ ಮೊಬೈಲ್ನಲ್ಲಿ ಹಳ್ಳದ ಚಿತ್ರ ತೆಗೆಯುವಲ್ಲಿ ಮೈಮರೆತ ಸಂದರ್ಭ ಈ ಘಟನೆ ನಡೆಯಿತು ಎಂದು ಸ್ಥಳೀಯರು ತಿಳಿಸಿದರು. ಶವವನ್ನು ಹೊರಗೆ ತೆಗೆಯುವ ಕಾರ್ಯಾಚರಣೆ ನಡೆದಿದೆ.
ವಿದ್ಯುತ್ ತಗುಲಿ ಯುವಕ ಸಾವು
ಬಸವಕಲ್ಯಾಣ: ಶನಿವಾರ ಇಲ್ಲಿನ ಎಂಜಿನಿಯೆರಿಂಗ್ ಕಾಲೇಜಿನ ಕಟ್ಟಡದಲ್ಲಿ ನಿಂತಿದ್ದ ಮಳೆ ನೀರು ಖಾಲಿ ಮಾಡುವಾಗ ವಿದ್ಯುತ್ ಪ್ರವಹಿಸಿ ಯುವಕನೊಬ್ಬ ಮೃತಪಟ್ಟಿದ್ದಾನೆ.
ಕೌಡಿಯಾಳದ ಅವಿನಾಶಿ ಹಿರೊಳ್ಳೆ (23) ಸಾವಿಗೀಡಾಗಿದ್ದು, ಬಸವಕಲ್ಯಾಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಬ್ಬರು ಮೀನುಗಾರರು ನಾಪತ್ತೆ
ರಾಮನಗರ: ಬಿಡದಿಯ ನೆಲ್ಲಿಗುಡ್ಡ ಕೆರೆಯಲ್ಲಿ ಶನಿವಾರ ಸಂಜೆ ಮೀನಿನ ಬಲೆ ಹಾಕಲು ತೆರಳಿದ್ದ ಇಬ್ಬರು ಯುವಕರು ದೋಣಿ ಸಮೇತ ಕಾಣೆಯಾಗಿದ್ದಾರೆ.
ಅವರೆಗೆರೆ ಗ್ರಾಮದ ಉಮೇಶ(32) ಮತ್ತು ರವಿ(19) ಕಾಣೆಯಾದವರು. ಇತ್ತೀಚೆಗೆ ಕೋಡಿ ಹೊಡೆದಿದ್ದ ಕೆರೆಯ ನೀರಿನಲ್ಲಿ ಇಬ್ಬರೂ ಮುಳುಗಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶೋಧ ಕಾರ್ಯಾಚರಣೆ ನಡೆದಿದೆ.