ಬೆಂಗಳೂರು: ಈ ಮುಂಗಾರು ಹಂಗಾಮಿನಲ್ಲಿ ಮಳೆಯ ತೀವ್ರ ಕೊರತೆಯಿಂದ ಬಿತ್ತನೆ ಪ್ರಮಾಣವೂ ಕುಸಿತವಾಗಿದೆ ಎಂದು ಕೃಷಿ ಸಚಿವ ಎನ್.ಎಚ್. ಶಿವಶಂಕರರೆಡ್ಡಿ ತಿಳಿಸಿದರು.
ಈ ಬಾರಿ 76.69 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಇತ್ತು. ಆದರೆ, ಜೂನ್ 13 ರವರೆಗೆ 6.17 ಲಕ್ಷ ಹೆಕ್ಟೇರ್ ಬಿತ್ತನೆಯಾಗಿದೆ. ಅಂದರೆ ಶೇ 8 ರಷ್ಟು ಮಾತ್ರ ಬಿತ್ತನೆ ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 10.99 ಲಕ್ಷ ಹೆಕ್ಟೇರ್ ಬಿತ್ತನೆಯಾಗಿತ್ತು (ಶೇ 13.43) ಎಂದು ಅವರು ಹೇಳಿದರು.
ಮುಂಗಾರು ಹಂಗಾಮಿಗೆ 6.29 ಲಕ್ಷ ಕ್ವಿಂಟಲ್ ಬಿತ್ತನೆ ಬೀಜದಬೇಡಿಕೆ ಇದ್ದು, 10.82 ಲಕ್ಷ ಕ್ವಿಂಟಲ್ ಲಭ್ಯತೆ ಇದೆ. ಇದುವರೆಗೆ 36,065 ಕ್ವಿಂಟಲ್ ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ. ಇನ್ನೂ 10.46 ಲಕ್ಷ ಕ್ವಿಂಟಲ್ ದಾಸ್ತಾನು ಇದೆ ಎಂದರು.
ಈ ಬಾರಿ 22.45 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರಗಳ ಬೇಡಿಕೆ ಇದ್ದು, ಜೂನ್ ಅಂತ್ಯದವರೆಗೆ 6.38 ಲಕ್ಷ ಮೆಟ್ರಿಕ್ ಟನ್ಗಳಷ್ಟು ಸರಬರಾಜು ಆಗಿದ್ದು, ವಿವಿಧ ಜಿಲ್ಲೆಗಳಲ್ಲಿ 7.94 ಲಕ್ಷ ಮೆಟ್ರಿಕ್ ಟನ್ ದಾಸ್ತಾನು ಇದೆ ಎಂದು ರೆಡ್ಡಿ ತಿಳಿಸಿದರು.