ಮೈಸೂರು: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಗಿಮಿಕ್ ಕರ್ನಾಟಕದಲ್ಲಿ ನಡೆಯುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ತಿಳಿಸಿದರು.
ಮಾತಿನ ಮೋಡಿಯಿಂದ ಜನರನ್ನು ಹಿಡಿದಿಡಲು ಸಾಧ್ಯವಿಲ್ಲ. ಜನರಿಗೆ ಸತ್ಯದ ಅರಿವಾಗುತ್ತಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿಯೂ ಬಿಜೆಪಿ ಗೆಲ್ಲುವುದಿಲ್ಲ ಎಂದರು.
ಮುಂದಿನ ಮುಖ್ಯಮಂತ್ರಿಯ ಕುರಿತು ಹಲವರು ಆಶಾಗೋಪುರ ಕಟ್ಟಿಕೊಂಡಿದ್ದಾರೆ. ಭ್ರಮಾಲೋಕದಲ್ಲಿ ಇರಬೇಡಿ ಎಂದು ಹೇಳಲಾಗದು. ಯಡಿಯೂರಪ್ಪ ಅವರು ಉಪಚುನಾವಣೆಯ ಸಂದರ್ಭದಿಂದಲು ಭ್ರಮೆಯಲ್ಲಿ ಇದ್ದಾರೆ ಎಂದು ಹೇಳಿದರು.
ಮುಂದಿನ ಚುನಾವಣೆ ನನ್ನ ನೇತೃತ್ವದಲ್ಲಿ ನಡೆಯುತ್ತದೆ ಎಂದು ಹೈಕಮಾಂಡ್ ಹೇಳಿದೆ. ಮುಂದಿನ ದಸರಾದಲ್ಲಿಯೂ ನಾವೇ ನಂದಿ ಧ್ವಜ ಪೂಜೆ ಮಾಡುತ್ತೇವೆ ಅಂಥ ಹೇಳಿದ್ದೆ. ಇದನ್ನು ಕೆಲವರು ತಮ್ಮ ದೃಷ್ಟಿಕೋನದಲ್ಲಿ ವಿಶ್ಲೇಷಣೆ ಮಾಡಿಕೊಂಡಿದ್ದಾರೆ ಎಂದರು.