ಬೆಂಗಳೂರು (ಪಿಟಿಐ): ಪಕ್ಷದ ವರಿಷ್ಠ ಮಂಡಳಿಯು ತಮ್ಮನ್ನು ಬದಿಗೊತ್ತಿದ್ದರಿಂದ ಅಸಮಾಧಾನಗೊಂಡಿರುವ ಬಿಜೆಪಿ ಧುರೀಣ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮುಂಬೈಯಲ್ಲಿ ಮೇ 25ರಿಂದ ನಡೆಯಲಿರುವ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ತಾವು ಪಾಲ್ಗೊಳ್ಳುವುದಿಲ್ಲ ಎಂದು ಶನಿವಾರ ಇಲ್ಲಿ ಹೇಳಿದರು.
~ನಾನು ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ~ ಎಂದು ಯಡಿಯೂರಪ್ಪ ಇಲ್ಲಿ ವರದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.
ಏನಿದ್ದರೂ ~ಕಾಂಗ್ರೆಸ್ ಸೇರಿದಂತೆ ಯಾವುದೇ ರಾಜಕೀಯ ಪಕ್ಷವನ್ನು ತಾವು ಸೇರುವುದಿಲ್ಲ ಎಂದು ಹೇಳುವ ತಮ್ಮ ಭವಿಷ್ಯದ ರಾಜಕೀಯ ನಿಲುವುಗಳಿಗೆ ಸಂಬಂಧಿಸಿದ ಎಲ್ಲ ಗೊಂದಲಗಳಿಗೆ ಅವರು ತೆರೆ ಎಳೆದರು.
~ನಾನು ಕಾಂಗ್ರೆಸ್ ಸೇರಲಿದ್ದೇನೆ ಎಂಬ ಊಹಾಪೋಹ ಇದೆ. ಇದು ಸತ್ಯ ದೂರ ವಿಚಾರ. ಯಾವುದೇ ರಾಜಕೀಯ ಪಕ್ಷವನ್ನು ಸೇರುವ ಪ್ರಶ್ನೆ ಇಲ್ಲ~ ಎಂದು ತಮ್ಮ ನೂತನ ಜನ ಸಂಪರ್ಕ ಕಚೇರಿಯಲ್ಲಿ ಜನರ ಜೊತೆ ಮಾತನಾಡಿದ ಬಳಿಕ ಯಡಿಯೂರಪ್ಪ ಹೇಳಿದರು.
ಕೆಲವು ಕಾಂಗ್ರೆಸ್ ನಾಯಕರು ಮಾಜಿ ಮುಖ್ಯಮಂತ್ರಿ ಪಕ್ಷ ಸೇರುವ ಸಾಧ್ಯತೆಗಳು ಇವೆ ಎಂದು ಹೇಳಿದ್ದಕ್ಕೆ ಪ್ರತಿಕ್ರಿಯೆಯಾಗಿ ಯಡಿಯೂರಪ್ಪ ಈ ಸ್ಪಷ್ಟನೆ ನೀಡಿದರು.
ಜನರ ನಾಡಿಮಿಡಿತ ತಿಳಿಯುವ ಸಲುವಾಗಿ ಮೇ 30ರಿಂದ ರಾಜ್ಯದಾದ್ಯಂತ ಪ್ರವಾಸ ಮಾಡುವೆ. ನಂತರ ಭವಿಷ್ಯದ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವೆ ಎಂದು ಅವರು ಹೇಳಿದರು.