ಬೀದರ್: ‘ವೀರಶೈವ–ಲಿಂಗಾಯತ ಎರಡೂ ಬೇರೆ ಬೇರೆಯಾಗಿವೆ. ಕೇಂದ್ರ ಸರ್ಕಾರವು ಸ್ವತಂತ್ರ ಧರ್ಮ ಮಾನ್ಯತೆಗೆ ಹಿಂದೇಟು ಹಾಕಿದರೆ ದೆಹಲಿ ಚಲೋ ರ್ಯಾಲಿ ನಡೆಸಲಾಗುವುದು’ ಎಂದು ಬೀದರ್ ಜಿಲ್ಲಾ ಲಿಂಗಾಯತ ಸಮನ್ವಯ ಸಮಿತಿ ಎಚ್ಚರಿಕೆ ನೀಡಿದೆ.
‘ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಯ ಪ್ರಸ್ತಾವವನ್ನು ಕೇಂದ್ರ ಸರ್ಕಾರವು ರಾಜ್ಯಕ್ಕೆ ವಾಪಸ್ ಕಳಿಸಿದೆ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಲಿಂಗಾಯತ ಧರ್ಮದ ವೈಶಿಷ್ಟ್ಯವನ್ನು ಮನವರಿಕೆ ಮಾಡಲು ಶೀಘ್ರದಲ್ಲೇ 30 ಮಠಾಧೀಶರನ್ನು ಒಳಗೊಂಡ ನಿಯೋಗವನ್ನು ದೆಹಲಿಗೆ ಒಯ್ಯಲಾಗುವುದು’ ಎಂದು ಲಿಂಗಾಯತ ಸಮನ್ವಯ ಸಮಿತಿಯ ಸಂಚಾಲಕ ಬಸವಲಿಂಗ ಪಟ್ಟದ್ದೇವರು ತಿಳಿಸಿದರು.
‘ಇದಕ್ಕೂ ಮೊದಲು ಬೆಂಗಳೂರಲ್ಲಿ ಮಠಾಧೀಶರ ಸಭೆ ಕರೆದು ಚರ್ಚಿಸಲಾಗುವುದು. ಮೋದಿ ಅವರ ಭೇಟಿಗೆ ಸಮಯ ನಿಗದಿಪಡಿಸಲಾಗುವುದು. ನಂತರ ದೆಹಲಿಗೆ ತೆರಳಿ ಜೈನ, ಬೌದ್ಧ ಧರ್ಮಗಳಿಗೆ ಸ್ವತಂತ್ರ ಧರ್ಮದ ಮಾನ್ಯತೆ ಕೊಡುವಂತೆ ಮನವಿ ಮಾಡಲಾಗುವುದು’ ಎಂದು ಹೇಳಿದರು.
‘ಲಿಂಗಾಯತ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಎಂ.ಬಿ.ಪಾಟೀಲರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಕೊಡದೆ ಅನ್ಯಾಯ ಮಾಡಲಾಗಿದೆ. ಕಾಂಗ್ರೆಸ್ ವರಿಷ್ಠರು ಎಚ್ಚರಗೊಳ್ಳದಿದ್ದರೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
‘ವೀರಶೈವ–ಲಿಂಗಾಯತ ಬಣಗಳು ಒಂದಾಗಲಿವೆ ಎನ್ನುವ ಸುದ್ದಿಯನ್ನು ಹರಿಯಬಿಡಲಾಗುತ್ತಿದೆ. ಎರಡು ಬಣಗಳ ಮಧ್ಯೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇದೆ. ಧರ್ಮ ಗುರು ಹಾಗೂ ಧರ್ಮ ಗ್ರಂಥ ಎರಡೂ ಬೇರೆ ಬೇರೆ ಇವೆ. ಈ ಬಣಗಳು ಎಂದಿಗೂ ಒಂದಾಗಲು ಸಾಧ್ಯವಿಲ್ಲ’ ಎಂದು ತಿಳಿಸಿದರು.
ಹುಲಸೂರಿನ ಶಿವಾನಂದ ಸ್ವಾಮೀಜಿ, ಬಸವ ಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣ, ಗಂಗಾಂಬಿಕೆ ಪಾಟೀಲ, ಮಹಾಲಿಂಗ ದೇವರು, ಘೋಡಚಿಂಚೊಳ್ಳಿಯ ರೇವಣಸಿದ್ಧ ಸ್ವಾಮೀಜಿ, ಉದ್ಯಮಿ ಬಸವರಾಜ ಧನ್ನೂರ್ ಇದ್ದರು.