ಬೆಂಗಳೂರು: ಅಕ್ರಮ ಎಸಗಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿದ ಆರೋಪ ಎದುರಿಸುತ್ತಿದ್ದ ಶಿರಸಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಹಾಯಕ ನಿರ್ದೇಶಕಿ ಸುಧಾತಾಯಿ ಎನ್.ಹಿರೇಮನಿ ಮತ್ತು ರಾಯಚೂರು ಜಿಲ್ಲಾ ಪಂಚಾಯಿತಿಯ ಕಿರಿಯ ಎಂಜಿನಿಯರ್ ಬಿ.ಎಂ.ಮಲ್ಲಣ್ಣ ಅವರನ್ನು ಸೇವೆಯಿಂದ ವಜಾ ಮಾಡಲು ಸಂಪುಟ ತೀರ್ಮಾನಿಸಿದೆ.
‘ಸುಧಾತಾಯಿ ಅವರು ಬಾಗಲಕೋಟೆಯ ಎಪಿಎಂಸಿ ಸಹಾಯಕ ನಿರ್ದೇಶಕಿ ಹುದ್ದೆಯಲ್ಲಿದ್ದರು. ಅಲ್ಲಿನ ಕೇಸನೂರು ಗ್ರಾಮದಲ್ಲಿ ಎಪಿಎಂಸಿ ಹೊಂದಿದ್ದ 30ಎಕರೆ ಜಮೀನನ್ನು 2009ರಲ್ಲಿ ರೂ 15 ಲಕ್ಷಕ್ಕೆ ತಿರುಪತಿ ಹಡಗಲಿ ಎಂಬುವರಿಗೆ ಮಾರಾಟ ಮಾಡಿದ್ದರು. ಆಗ ಈ ಜಮೀನಿನ ಮಾರ್ಗಸೂಚಿ ದರವೇ ರೂ 3.13 ಕೋಟಿ ಇತ್ತು. ಮಾರುಕಟ್ಟೆ ದರ ರೂ10ಕೋಟಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ’.
ಈ ಪ್ರಕರಣದ ಕುರಿತು ತನಿಖೆ ನಡೆಸಿದ ಲೋಕಾಯುಕ್ತರು, ಸುಧಾತಾಯಿ ಅವರನ್ನು ಸೇವೆಯಿಂದ ಕಡ್ಡಾಯ ನಿವೃತ್ತಿಗೊಳಿಸಲು ಶಿಫಾರಸು ಮಾಡಿದ್ದರು. ಆದರೆ, ಇನ್ನೂ ಕಠಿಣ ಕ್ರಮ ಅಗತ್ಯವೆಂದು ಭಾವಿಸಿರುವ ಸಂಪುಟವು, ವಜಾ ಮಾಡುವ ನಿರ್ಧಾರ ಕೈಗೊಂಡಿದೆ ಎಂದರು.
ಮಲ್ಲಣ್ಣ ಅವರು ರಾಯಚೂರು ಜಿಲ್ಲಾ ಪಂಚಾಯಿತಿಯು ಕೈಗೆತ್ತಿಕೊಂಡಿದ್ದ ರೂ 3.47 ಕೋಟಿ ವೆಚ್ಚದ ನೀರು ಸರಬರಾಜು ಯೋಜನೆ ಕಾಮಗಾರಿಯ ಉಸ್ತುವಾರಿ ವಹಿಸಿದ್ದರು. ಈ ಸಂದರ್ಭದಲ್ಲಿ ರೂ 1.64 ಕೋಟಿ ದುರ್ಬಳಕೆ ಮಾಡಿಕೊಂಡಿದ್ದರು. ಈ ಆರೋಪ ಸಾಬೀತಾದ ಕಾರಣದಿಂದ ಅವರನ್ನೂ ಕಡ್ಡಾಯ ನಿವೃತ್ತಿಗೊಳಿಸುವ ಪ್ರಸ್ತಾವ ಇತ್ತು. ಆದರೆ ಸೇವೆಯಿಂದ ವಜಾ ಮಾಡುವ ನಿರ್ಧಾರವನ್ನೇ ಕೈಗೊಳ್ಳಲಾಯಿತು ಎಂದು ಹೇಳಿದರು.
ಇಬ್ಬರಿಗೂ ನಿವೃತ್ತಿ ನಂತರದ ಸೌಲಭ್ಯಗಳು ದೊರೆಯುವುದಿಲ್ಲ. ಎರಡೂ ಪ್ರಕರಣಗಳಲ್ಲಿ ನಷ್ಟ ವಸೂಲಿಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ವಿವರಿಸಿದರು.