ಬೆಂಗಳೂರು: ‘ಸಿಸಿಬಿ ಪೊಲೀಸರು ಪತ್ರಕರ್ತ ರವಿ ಬೆಳಗೆರೆ ಪ್ರಕರಣ ತನಿಖೆ ನಡೆಸುತ್ತಿದ್ದಾರೆ. ಎಲ್ಲವನ್ನೂ ಈಗಲೇ ಹೇಳಲು ಸಾಧ್ಯ ಇಲ್ಲ’ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು.
ಮಾಧ್ಯಮ ಪ್ರತಿನಿಧಿಗಳ ಜೊತೆ ಶುಕ್ರವಾರ ಮಾತನಾಡಿದ ಅವರು, ‘ಶಶಿಧರ್ ಮುಂಡೇವಾಡಿ ಸುಪಾರಿ ಕಿಲ್ಲರ್. ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ವೇಳೆ ಈ ವಿಷಯ ಗೊತ್ತಾಗಿದೆ. ತನಿಖೆ ವೇಳೆ ಬೆಳಗರೆ ಪ್ರಕರಣದ ಬಗ್ಗೆ ಶಶಿಧರ್ ಬಾಯಿಬಿಟ್ಟಿದ್ದಾನೆ’ ಎಂದರು.
‘ಪರವಾನಗಿ ಇಲ್ಲದೆ ಬಂದೂಕು ಮಾರಾಟ ಮಾಡುವ ತಾಹೀರ್ನನ್ನು ಸಿಸಿಬಿ ಪೊಲಿಸರು ಭಾನುವಾರ ಬಂಧಿಸಿದ್ದರು. ವಿಚಾರಣೆ ವೇಳೆ ಶಶಿಧರ್ ಮುಂಡೇವಾಡಿಗೆ ಬಂದೂಕು ನೀಡಿದ್ದನ್ನು ತಾಹಿರ್ ಹೇಳಿದ್ದಾನೆ. ಶಶಿಧರ್ ಮುಂಡೇವಾಡಿಯಿಂದ ವಶಪಡಿಸಿಕೊಂಡ ಬಂದೂಕನ್ನು ಫಾರೆನ್ಸಿಕ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ಬಂದೂಕು ಎಲ್ಲೆಲ್ಲಿ ಬಳಕೆಯಾಗಿದೆ ಎನ್ನುವುದು ಪ್ರಯೋಗಾಲಯದ ವರದಿಯಿಂದ ಗೊತ್ತಾಗಲಿದೆ’ ಎಂದರು.
‘ಬೆಳಗೆರೆ ಪ್ರಕರಣಕ್ಕೂ ಗೌರಿ ಲಂಕೇಶ್ ಹತ್ಯೆಗೂ ಸಂಬಂಧ ಇದೆಯೇ ಎಂದು ತಕ್ಷಣ ಹೇಳಲು ಸಾಧ್ಯ ಇಲ್ಲ’ ಎಂದ ಸಚಿವರು, ‘ಬೆಳಗರೆ ಪ್ರಕರಣದ ಬಗ್ಗೆ ಪೊಲೀಸ್ ಕಮಿಷನರ್ ಶನಿವಾರ ಹೆಚ್ಚಿನ ಮಾಹಿತಿ ನೀಡಲಿದ್ದಾರೆ’ ಎಂದರು.