ಬೆಂಗಳೂರು: ಶಾಲೆಗಳ ಮಧ್ಯಾಹ್ನದ ಬಿಸಿಯೂಟದ ನಿರ್ವಹಣಾ ವ್ಯವಸ್ಥೆಯಲ್ಲಿ ಸುಧಾರಣೆ ತರಲು ನಿರ್ಧರಿಸಿರುವ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ, ನಿರ್ವಹಣಾ ಮೊತ್ತವನ್ನು ಈ ಮೊದಲಿದ್ದ ₨ 236 ಕೋಟಿ ಯಿಂದ ₨ 600 ಕೋಟಿಗೆ ಹೆಚ್ಚಿಸಿದೆ.
ಮಧ್ಯಾಹ್ನದ ಬಿಸಿಯೂಟಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಕೇಂದ್ರ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ನಿರ್ದೇಶಕ ಗಯಾ ಪ್ರಸಾದ್ ಮಾಧ್ಯಮ ಪ್ರತಿನಿಧಿಗಳಿಗೆ ಈ ಮಾಹಿತಿ ನೀಡಿದರು.
‘ಆಹಾರದ ಗುಣಮಟ್ಟ ಪರೀಕ್ಷಿಸಲು ಪ್ರತಿ ಶಾಲೆಗೊಂದು ಪ್ರಯೋಗಾಲಯದ ವ್ಯವಸ್ಥೆ ಮಾಡಲಾಗುತ್ತದೆ’ ಎಂದು ತಿಳಿಸಿದರು.
‘ಬಿಹಾರದಲ್ಲಿ ನಡೆದ ಶಾಲಾ ದುರಂತದಿಂದ ಇಲಾಖೆ ಎಚ್ಚೆತ್ತುಕೊಂಡಿದ್ದು ಮಧ್ಯಾಹ್ನದ ಬಿಸಿಯೂಟದ ಜತೆಗೆ ತುರ್ತು ವೈದ್ಯಕೀಯ ಸೇವೆಯನ್ನೂ ಒದಗಿಸಲು ನಿರ್ಧರಿಸಲಾಗಿದೆ. ಪ್ರತಿಶಾಲೆಗೆ ವೈದ್ಯಕೀಯ ಕಿಟ್ ಒದಗಿಸುವುದು, ಸಂಚಾರಿ ವೈದ್ಯಕೀಯ ತಂಡದ ವ್ಯವಸ್ಥೆ ಮಾಡುವುದು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಯಾವುದೇ ಪರಿಸ್ಥಿತಿ ನಿಭಾಯಿಸಲು ಸನ್ನದ್ಧವಾಗಿ ಇಡುವುದು – ಇವೇ ಮೊದಲಾದ ಸಂಗತಿಗಳು ಯೋಜನೆಯಲ್ಲಿ ಸೇರಿವೆ’ ಎಂದು ವಿವರಿಸಿದರು.
‘ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಡೆಯುವಂತೆಯೇ ಮಧ್ಯಾಹ್ನದ ಬಿಸಿಯೂಟ ಯೋಜನೆ ನಿರ್ವಹಣೆಯನ್ನೂ ಸಾಮಾಜಿಕ ಲೆಕ್ಕ ಪರಿಶೋಧನೆಗೆ ಒಪ್ಪಿಸಲಾಗುವುದು. ಇದಕ್ಕಾಗಿ ಖಾಸಗಿ ಸಂಸ್ಥೆಗಳ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗುತ್ತದೆ’ ಎಂದು ತಿಳಿಸಿದರು.
‘ಬಿಸಿಯೂಟದ ಅಕ್ಕಿ, ತರಕಾರಿ, ಎಣ್ಣೆ, ಉಪ್ಪು, ಸಿರಿಧಾನ್ಯಗಳ ಗುಣಮಟ್ಟವನ್ನು ಕಾಯ್ದುಕೊಳ್ಳಲು ಶಿಸ್ತುಬದ್ಧ ವಾದ ಒಂದು ವ್ಯವಸ್ಥೆಯನ್ನು ರೂಪಿಸುವ ಅಗತ್ಯ ಇಲಾಖೆಗೆ ಮನವರಿಕೆಯಾಗಿದೆ. ಆ ನಿಟ್ಟಿನಲ್ಲೂ ಪ್ರಯತ್ನಗಳು ಸಾಗಿವೆ’ ಎಂದು ಸ್ಪಷ್ಟಪಡಿಸಿದರು.
‘ಶಾಲೆಗೆ ಅಡುಗೆ ಪಾತ್ರೆಗಳನ್ನು ಕೊಂಡುಕೊಳ್ಳಲು ಈಗಿರುವ ಮಿತಿಯನ್ನು ₨5,000ದಿಂದ ₨ 25,000ಕ್ಕೆ ಹೆಚ್ಚಿಸಲಾಗಿದೆ. ಶಾಲೆಯಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಈ ಮೊತ್ತವನ್ನು ಬಿಡುಗಡೆ ಮಾಡಲಾಗುತ್ತದೆ’ ಎಂದರು.
ಕರ್ನಾಟಕ ಮುಂದು: ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು, ಉತ್ತರದ ಯಾವ ರಾಜ್ಯಗಳೊಂದಿಗೂ ಈ ರಾಜ್ಯವನ್ನು ಹೋಲಿಸುವಂತಿಲ್ಲ ಎಂದು ಗಯಾ ಪ್ರಸಾದ್ ಹೇಳಿದರು.
‘ದಕ್ಷಿಣದ ರಾಜ್ಯಗಳೆಲ್ಲ ಉತ್ತಮ ಸಾಧನೆಯನ್ನೇ ಮಾಡುತ್ತಿವೆ. ಅದ ರಲ್ಲೂ ತಮಿಳುನಾಡಿನ ನಂತರ ಕರ್ನಾ ಟಕ ಇದೆ’ ಎಂದು ತಿಳಿಸಿದರು.
‘ಎನ್ಜಿಒಗಳಿಗೆ ಅವಕಾಶವಿಲ್ಲ’
ಗ್ರಾಮಾಂತರ ಭಾಗದಲ್ಲಿರುವ ಶಾಲೆಗಳಲ್ಲಿ ಅಡುಗೆ ಕೋಣೆ ಹಾಗೂ ಪಾತ್ರೆಗಳು ಲಭ್ಯವಿದ್ದರೆ ಅಂತಹ ಶಾಲೆಗಳಿಗೆ ಆಹಾರ ಪೂರೈಸಲು ಸರ್ಕಾರೇತರ ಸಂಸ್ಥೆಗಳಿಗೆ (ಎನ್ಜಿಒ) ಗುತ್ತಿಗೆ ನೀಡಲು ಅವಕಾಶವಿಲ್ಲ ಎಂದು ಕೇಂದ್ರ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ನಿರ್ದೇಶಕರು ತಿಳಿಸಿದರು.
‘ಎನ್ಜಿಒಗಳು ದೂರಿದಂದ ಆಹಾರವನ್ನು ತರುವಾಗ ದಾರಿಯಲ್ಲಿ ಕೆಡುವ ಸಾಧ್ಯತೆ ಹೆಚ್ಚಾಗಿದ್ದು, ಇದೇ ಕಾರಣದಿಂದ ಗುತ್ತಿಗೆ ನೀಡದಿರಲು ನಿರ್ಧರಿಸಲಾಗಿದೆ’ ಎಂದು ಸ್ಪಷ್ಟಪಡಿಸಿದರು. ‘ಅಡುಗೆ ಸೌಲಭ್ಯಗಳು ಇಲ್ಲದ ಶಾಲೆಗಳಿಗೆ ಆಹಾರ ಪೂರೈಸಲು 10 ಕಿ.ಮೀ. ವ್ಯಾಪ್ತಿಯೊಳಗೆ ಇರುವ ಎನ್ಜಿಒಗಳು ಗುತ್ತಿಗೆ ನೀಡಲು ಅವಕಾಶ ಇದೆ’ ಎಂದು ಹೇಳಿದರು.
ಗೌರವಧನ ಹೆಚ್ಚಳ
‘ಅಡುಗೆ ಸಿದ್ಧಪಡಿಸುವವರು ಮತ್ತು ಸಹಾಯಕರಿಗೆ ನೀಡುತ್ತಿದ್ದ ಗೌರವಧನವನ್ನು ₨ 1,000ದಿಂದ ₨ 2,000ಕ್ಕೆ ಹೆಚ್ಚಿಸಲು ನಿರ್ಧರಿ ಸಲಾಗಿದೆ.
ಯೋಜನೆ ನಿರ್ವಹಣಾ ಸಮಿತಿಯ ಈ ನಿರ್ಧಾರವನ್ನು ಸಂಪುಟದ ಒಪ್ಪಿಗೆಗಾಗಿ ಕಳುಹಿಸಲಾಗಿದೆ’ ಎಂದು ಗಯಾ ಪ್ರಸಾದ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.