ಬರ್ಲಿನ್: ಭಾರತೀಯ ಮೂಲದ ಲೇಖಕ ಸಲ್ಮಾನ್ ರಶ್ದಿ ಅವರು ಸಾಹಿತ್ಯ ಕ್ಷೇತ್ರದಲ್ಲಿ ಮಾಡಿರುವ ಸೇವೆಯನ್ನು ಪರಿಗಣಿಸಿ ಜರ್ಮನಿಯ ಪ್ರತಿಷ್ಠಿತ ಶಾಂತಿ ಪ್ರಶಸ್ತಿ ನೀಡಲಾಗಿದೆ.
ನಿರಂತರವಾಗಿ ಅಪಾಯ ಎದುರಾದ ಸಂದರ್ಭದಲ್ಲೂ ರಶ್ದಿ ಅವರು ಸಾಹಿತ್ಯ ಕ್ಷೇತ್ರದಲ್ಲಿ ತೋರಿದ ದೃಢಸಂಕಲ್ಪ ಮತ್ತು ಸಕಾರಾತ್ಮಕ ಮನೋಭಾವಕ್ಕಾಗಿ ಈ ಪ್ರಶಸ್ತಿ ನೀಡಲಾಗಿದೆ ಎಂದು ಪ್ರಶಸ್ತಿಯ ಸಂಘಟಕ ಸಂಸ್ಥೆಯಾದ ಜರ್ಮನ್ ಬುಕ್ ಟ್ರೇಡ್ ಸೋಮವಾರ ತಿಳಿಸಿದೆ.
₹22.41 ಲಕ್ಷ ಮೊತ್ತದ ಪ್ರಶಸ್ತಿಯನ್ನು ಫ್ರಾಂಕ್ ಫರ್ಟ್ನಲ್ಲಿ ಅಕ್ಟೋಬರ್ 22ರಂದು ರಶ್ದಿ ಅವರು ಸ್ವೀಕರಿಸಲಿದ್ದಾರೆ ಎಂದು ಹೇಳಿದೆ. ಜರ್ಮನ್ ಬುಕ್ ಟ್ರೇಡ್ 1950ರಿಂದಲೂ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಪರಿಗಣಿಸಿ ಲೇಖಕರಿಗೆ ಜರ್ಮನಿ ಶಾಂತಿ ಪ್ರಶಸ್ತಿ ನೀಡುತ್ತಿದೆ.
ನ್ಯೂಯಾರ್ಕ್ನಲ್ಲಿ ಕಳೆದ ಆಗಸ್ಟ್ನಲ್ಲಿ ನಡೆದ ಸಾಹಿತ್ಯೋತ್ಸವದಲ್ಲಿ ರಶ್ದಿ ಅವರು ವೇದಿಕೆ ಮೇಲೆಯೇ ದುಷ್ಕರ್ಮಿಯಿಂದ ಹಲವು ಬಾರಿ ಚೂರಿ ಇರಿತಕ್ಕೆ ಒಳಗಾಗಿದ್ದರು.