ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದ್ವಿಪಕ್ಷೀಯ ಒಪ್ಪಂದವು ಕೇವಲ ಗಡಿ ಸಮಸ್ಯೆಗೆ ಸಂಬಂಧಿಸಿದ್ದಲ್ಲ: ಚೀನಾ

Published 13 ಮಾರ್ಚ್ 2024, 23:54 IST
Last Updated 13 ಮಾರ್ಚ್ 2024, 23:54 IST
ಅಕ್ಷರ ಗಾತ್ರ

ಬೀಜಿಂಗ್: ಚೀನಾ–ಭಾರತ ದ್ವಿಪಕ್ಷೀಯ ಒಪ್ಪಂದವು ಕೇವಲ ಎರಡು ದೇಶಗಳ ನಡುವಿನ ಗಡಿ ವಿವಾದಕ್ಕೆ ಮಾತ್ರ ಸಂಬಂಧಿಸಿದ್ದಲ್ಲ ಎಂದು ಚೀನಾ ಬುಧವಾರ ಪ್ರತಿಪಾದಿಸಿದೆ.

ಎರಡು ದೇಶಗಳ ನಡುವೆ ತಪ್ಪು ತಿಳಿವಳಿಕೆ ಮತ್ತು ತಪ್ಪು ನಿರ್ಣಯಗಳನ್ನು ಹೋಗಲಾಡಿಸಲು ಪರಸ್ಪರ ವಿಶ್ವಾಸವನ್ನು ಹೆಚ್ಚಿಸಬೇಕು ಎಂದು ಚೀನಾ ಕರೆ ನೀಡಿದೆ.

2020ರ ಜೂನ್‌ನಲ್ಲಿ ಗಾಲ್ವನ್ ಕಣಿವೆಯಲ್ಲಿ ಎರಡೂ ದೇಶಗಳ ನಡುವೆ ನಾಲ್ಕು ದಶಕಗಳಲ್ಲಿಯೇ ಗಂಭೀರವಾದ ಸೇನಾ ಸಂಘರ್ಷ ನಡೆದಿತ್ತು. ಅದರ ನಂತರ ಗಡಿಯಲ್ಲಿ ಶಾಂತಿ ನೆಲಸದ ಹೊರತು ಚೀನಾದೊಂದಿಗಿನ ಒಪ್ಪಂದಕ್ಕೆ ಅರ್ಥವಿಲ್ಲ ಎಂದು ಭಾರತ ಪ್ರತಿಪಾದಿಸಿತ್ತು.  

ಸೋಮವಾರ, ಚೀನಾದ ರಾಜತಾಂತ್ರಿಕರ ಪ್ರಶ್ನೆಗೆ ಉತ್ತರಿಸುವ ವೇಳೆ ಭಾರತದ ವಿದೇಶಾಂಗ ಸಚಿವ ಜೈಶಂಕರ್ ‘ವಾಸ್ತವ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಹೆಚ್ಚು ಪಡೆಗಳನ್ನು ನಿಯೋಜಿಸದೇ ಇರುವುದು ಎರಡೂ ದೇಶಗಳ ಹಿತದೃಷ್ಟಿಯಿಂದ ಒಳ್ಳೆಯದು’ ಎಂದು ಹೇಳಿದ್ದರು.

‘ಸಮಾನ ಹಿತಾಸಕ್ತಿಗಾಗಿ ನಮ್ಮ ನಡುವೆ ಆಗಿರುವ ಒಪ್ಪಂದವನ್ನು ನಾವು ಗಮನಿಸಬೇಕಿದೆ. ಅದು ಕೇವಲ ನಮ್ಮ ಹಿತಾಸಕ್ತಿಗಾಗಿ ಮಾತ್ರವೇ ಆದದ್ದಲ್ಲ. ಚೀನಾದ ಹಿತಾಸಕ್ತಿಯೂ ಅದರಲ್ಲಿದೆ. ಕಳೆದ ನಾಲ್ಕು ವರ್ಷಗಳಿಂದ ಎರಡೂ ದೇಶಗಳು ಉದ್ವಿಗ್ನತೆ ಅನುಭವಿಸುತ್ತಿವೆ’ ಎಂದು ಜೈಶಂಕರ್ ಹೇಳಿದ್ದರು.

ಜೈಶಂಕರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್‌ಬಿನ್, ‘ದ್ವಿಪಕ್ಷೀಯ ಒಪ್ಪಂದದಲ್ಲಿ ಗಡಿ ಸಮಸ್ಯೆಯನ್ನು ಸೂಕ್ತವಾಗಿ ನಿರ್ವಹಿಸಬೇಕು’ ಎಂದು ಹೇಳಿದ್ದಾರೆ.

ಗಡಿಯಲ್ಲಿನ ವಿವಾದಕ್ಕೆ ಸಂಬಂಧಿಸಿದಂತೆ ತ್ವರಿತ ಒಪ್ಪಂದವು ಎರಡೂ ದೇಶಗಳ ಹಿತಾಸಕ್ತಿಗೆ ಪೂರಕ ಎಂದು ಚೀನಾ–ಭಾರತ ನಂಬಿರುವುದಾಗಿ ವಾಂಗ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT