ನವದೆಹಲಿ: ಹವಾಮಾನ ಬದಲಾವಣೆ ಎಂಬುದು ಎಲ್ಲ ದೇಶಗಳು ಎದುರಿಸಬೇಕಾದ ಸವಾಲು. ಅದಕ್ಕೆ ಅನುಗುಣವಾದ ಪ್ರತಿಕ್ರಿಯೆ ಜಾಗತಿಕ ಮಟ್ಟದಲ್ಲಿಯೇ ವ್ಯಕ್ತವಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.
ಹವಾಮಾನ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ದುಬೈಗೆ ಭೇಟಿ ನೀಡಿರುವ ಅವರು, ಯುಎಇ ಮೂಲದ ‘ಅಲ್–ಇತಿಹಾದ್’ ಪತ್ರಿಕೆಗೆ ಸಂದರ್ಶನ ನೀಡಿರುವ ಅವರು, ಹವಾಮಾನ ಬದಲಾವಣೆ ಒಡ್ಡಿರುವ ಸವಾಲುಗಳು, ಭಾರತ ಮತ್ತು ಯುಎಇ ದ್ವಿಪಕ್ಷೀಯ ಸಂಬಂಧ ಸೇರಿದಂತೆ ಹಲವು ವಿಷಯಗಳ ಕುರಿತು ಮಾತನಾಡಿದ್ದಾರೆ.
ಹವಾಮಾನ ಬದಲಾವಣೆಯಿಂದಾಗಿ ಉದ್ಭವಿಸಿರುವ ಸಮಸ್ಯೆಗಳಲ್ಲಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಪಾಲು ಕಡಿಮೆ. ಆದಾಗ್ಯೂ, ಈ ದೇಶಗಳು ಈ ಜಾಗತಿಕ ಸಂಕಷ್ಟದ ಪರಿಹಾರದ ಭಾಗವಾಗಲು ಬಯಸುತ್ತವೆ ಎಂಬುದನ್ನು ಶ್ರೀಮಂತ ರಾಷ್ಟ್ರಗಳು ಅರಿಯಬೇಕು ಎಂದು ಮೋದಿ ಪ್ರತಿಪಾದಿಸಿದರು.
ಹವಾಮಾನ ಬದಲಾವಣೆ ಪರಿಣಾಮಗಳನ್ನು ತಡೆಯುವ ಕಾರ್ಯಕ್ರಮಕ್ಕೆ ಅಂತರರಾಷ್ಟ್ರೀಯ ಸಹಕಾರ ಖಾತ್ರಿಪಡಿಸುವ ಪ್ರಯತ್ನಗಳಿಗೆ ದುಬೈನಲ್ಲಿ ನಡೆಯುತ್ತಿರುವ ‘ಸಿಒಪಿ28’ ಹವಾಮಾನ ಶೃಂಗಸಭೆಯು ಉತ್ತೇಜನ ನೀಡುತ್ತದೆ ಹಾಗೂ ಪ್ಯಾರಿಸ್ ಒಪ್ಪಂದ ಹಾಗೂ ಯುಎನ್ಎಫ್ಸಿಸಿಸಿ ಗುರಿಗಳ ಸಾಧನೆಗೆ ಮೆಟ್ಟಿಲಾಗುತ್ತದೆ ಎಂಬ ವಿಶ್ವಾಸವನ್ನು ಮೋದಿ ವ್ಯಕ್ತಪಡಿಸಿದರು.
ಬೈಡನ್, ಷಿ ಗೈರು: ಅಮೆರಿಕ ಅಧ್ಯಕ್ಷ ಜೋ ಬೈಡನ್, ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಶೃಂಗಸಭೆಗೆ ಗೈರಾಗಿದ್ದಾರೆ. ಸೌದಿ ಅರೇಬಿಯಾ ರಾಜ ಮೊಹಮ್ಮದ್ ಬಿನ್ ಸಲ್ಮಾನ್, ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್, ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಫೋಸಾ, ಈಜಿಪ್ಟ್ನ ಅಬ್ದೆಲ್ ಫತ್ಹಾ ಎಲ್–ಸಿಸಿ, ಟರ್ಕಿಯ ರಿಸೆಪ್ ತಯ್ಯಿಪ್ ಎರ್ಡೋಗನ್ ಪಾಲ್ಗೊಂಡಿದ್ದಾರೆ.
ಶೃಂಗಸಭೆಯ ಉಳಿದ ದಿನಗಳಲ್ಲಿ ನಡೆಯುವ ಗೋಷ್ಠಿಗಳನ್ನು ಉದ್ಧೇಶಿಸಿ ವಿವಿಧ ದೇಶಗಳ 130ಕ್ಕೂ ಅಧಿಕ ನಾಯಕರು ಮಾತನಾಡುವರು.
ರಾಜೀನಾಮೆ: ‘ಸಿಒಪಿ28’ ಅಧ್ಯಕ್ಷ ಸ್ಥಾನದಲ್ಲಿರುವ ಯುಎಇ ತೈಲ, ಅನಿಲ ವ್ಯಾಪಾರಕ್ಕಾಗಿ ಹವಾಮಾನ ಶೃಂಗಸಭೆಯನ್ನು ಬಳಸಿಕೊಂಡಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ‘ಸಿಒಪಿ28’ರ ಸಲಹಾ ಮಂಡಳಿ ಸದಸ್ಯೆ ಹಿಲ್ಡಾ ಹೀನೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
‘ನೈಸರ್ಗಿಕ ಅನಿಲ ಸೇರಿದಂತೆ ತನ್ನ ಇತರ ಉತ್ಪನ್ನಗಳ ಮಾರಾಟಕ್ಕೆ ಸಂಬಂಧಿಸಿ ಒಪ್ಪಂದ ಮಾಡಿಕೊಳ್ಳಲು ಯುಎಇ ಚರ್ಚೆಗೆ ಮುಂದಾಗಿತ್ತು ಎಂದು ತಿಳಿದು ನಿರಾಸೆಯಾಗಿದೆ. ಇದು ಬಹುಪಕ್ಷೀಯ ಒಪ್ಪಂದಗಳ ವಿಶ್ವಾಸಾರ್ಹತೆಗೆ ಧಕ್ಕೆ ತರುತ್ತದೆ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.