ಕಠ್ಮಂಡು: ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್.ಜೈಶಂಕರ್ ಅವರು ನೇಪಾಳದ ಪ್ರಸಿದ್ಧ ಪಶುಪತಿನಾಥ ದೇವಾಲಯದ ಆವರಣದಲ್ಲಿ ಇಂದು (ಶುಕ್ರವಾರ) ರುದ್ರಾಕ್ಷಿ ಗಿಡ ನೆಟ್ಟು ಪ್ರಾರ್ಥನೆ ಸಲ್ಲಿಸಿದ್ದಾರೆ.
ಜೈಶಂಕರ್ ಅವರು ಈ ವರ್ಷ ಕೈಗೊಂಡಿರುವ ಮೊದಲ ವಿದೇಶ ಭೇಟಿ ಇದಾಗಿದೆ. ಅವರು ಗುರುವಾರವಷ್ಟೇ ಕಠ್ಮಂಡು ತಲುಪಿದ್ದಾರೆ.
ರಾಜತಾಂತ್ರಿಕ ಭೇಟಿಯ ನಿಗದಿತ ಕಾರ್ಯಕ್ರಮಗಳು ಪ್ರಾರಂಭವಾಗುವುದಕ್ಕೂ ಮುನ್ನ ದೇವಾಲಯಕ್ಕೆ ತೆರಳಿದ ಅವರು, ಎರಡೂ ದೇಶಗಳ ಜನರ ಶ್ರೇಯ ಮತ್ತು ಉಭಯ ರಾಷ್ಟ್ರಗಳ ಸಂಬಂಧ ವೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಹಿಂದೂ ದೈವವಾದ ಶಿವನು ಪ್ರಾಣಿಗಳ ರಕ್ಷಣೆಗಾಗಿ 'ಪಶುಪತಿ'ಯಾಗಿ ಅವತಾರವೆತ್ತಿದ ಎಂಬ ನಂಬಿಕೆ ಇದೆ. ಅದರಂತೆ ಪಶುಪತಿನಾಥನನ್ನು ಶತಮಾನಗಳಿಂದಲೂ ಆರಾಧಿಸಲಾಗುತ್ತಿದೆ.
ಕಠ್ಮಂಡು ಹೊರವಲಯದಲ್ಲಿ ಹರಿಯುವ ಬಾಗ್ಮತಿ ನದಿ ದಂಡೆಯಲ್ಲಿ ಈ ಹಿಂದೂ ದೇವಾಲಯವಿದೆ. ಪ್ರತಿವರ್ಷ ಲಕ್ಷಾಂತರ ಯಾತ್ರಿಕರು ಇಲ್ಲಿಗೆ ಭೇಟಿ ನೀಡುತ್ತಾರೆ.
ನೇಪಾಳ ಪ್ರಧಾನಿಯೊಂದಿಗೆ ಮಾತುಕತೆ
ನೇಪಾಳ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಅವರನ್ನು ಗುರುವಾರವೇ ಭೇಟಿಯಾದ ಜೈಶಂಕರ್, ಭಾರತ ಮತ್ತು ನೇಪಾಳ ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಸಂಬಂಧಿಸಿದಂತೆ ಮಾತುಕತೆ ನಡೆಸಿದರು. ದೇವುಬಾ ಜೊತೆಗಿನ ಚಿತ್ರವನ್ನು ತಮ್ಮ ಎಕ್ಸ್/ಟ್ವಿಟರ್ ಪುಟದಲ್ಲಿ ಹಂಚಿಕೊಂಡಿದ್ದಾರೆ.