ಜೆರುಸಲೇಮ್: ಗಾಜಾದಲ್ಲಿ ಕದನ ವಿರಾಮ ಏರ್ಪಡುವ ಸಾಧ್ಯತೆಯನ್ನು ಇಸ್ರೇಲ್ ಮತ್ತು ಹಮಾಸ್ ಮಂಗಳವಾರ ತಳ್ಳಿಹಾಕಿವೆ.
‘ತಕ್ಷಣವೇ ಒಪ್ಪಂದಕ್ಕೆ ಬರಲು ಇಸ್ರೇಲ್ ಬಯಸಿದೆ. ಆದರೆ, ಹಮಾಸ್ ಬಂಡುಕೋರರು ಹೆಚ್ಚು ಬೇಡಿಕೆಗಳನ್ನು ಇಡುವ ಪ್ರವೃತ್ತಿ ಮುಂದುವರಿಸಿದ್ದಾರೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಇಸ್ರೇಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಒಪ್ಪಂದ ಕುರಿತ ಆಶಾವಾದವು ಬಹಳ ಆತುರದ ನಿರ್ಧಾರವಾಗಿದೆ. ಇಸ್ರೇಲ್ ತನ್ನ ಪಟ್ಟು ಸಡಿಲಿಸುತ್ತಿಲ್ಲ, ಯಾವುದೇ ಬೇಡಿಕೆಯನ್ನೂ ಕೈಬಿಡುತ್ತಿಲ್ಲ’ ಎಂದು ಹಮಾಸ್ ಅಧಿಕಾರಿ ಅಹ್ಮದ್ ಅಬ್ದೆಲ್–ಹಾದಿ ತಿಳಿಸಿದ್ದಾರೆ.
ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಕುರಿತು ಒಪ್ಪಂದ ಏರ್ಪಟ್ಟಲ್ಲಿ, ರಂಜಾನ್ ಸಂದರ್ಭದಲ್ಲಿ ದಾಳಿ ನಡೆಸದಿರಲು ಇಸ್ರೇಲ್ ಒಪ್ಪಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಮಂಗಳವಾರ ಹೇಳಿದ್ದರು.
ಅಕ್ಟೋಬರ್ 7ರಂದು ಹಮಾಸ್ ಬಂಡುಕೋರರು ಇಸ್ರೇಲ್ ಮೇಲೆ ಹಠಾತ್ ದಾಳಿ ನಡೆಸಿದ ನಂತರ, ಗಾಜಾಪಟ್ಟಿ ಮೇಲೆ ಇಸ್ರೇಲ್ ತೀವ್ರ ದಾಳಿ ನಡೆಸುತ್ತಿದೆ. ಇದರಿಂದಾಗಿ 10,000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.
ಗಾಜಾಪಟ್ಟಿಯ ಗಡಿಯನ್ನು ಇಸ್ರೇಲ್ ಮುಚ್ಚಿದ್ದು, ಆಹಾರ ಮತ್ತಿತರ ಸಾಮಗ್ರಿಗಳ ರವಾನೆಗೆ ಮಾತ್ರ ಅವಕಾಶ ನೀಡುತ್ತಿದೆ. ಇದರಿಂದಾಗಿ ಗಾಜಾದಲ್ಲಿ ಕ್ಷಾಮ ಸನ್ನಿಹಿತವಾಗಿದೆ ಎಂದು ವಿಶ್ವಸಂಸ್ಥೆ ಹೇಳಿದೆ.