ಮಾಲೆ: ಮಾಲ್ಡೀವ್ಸ್ನಲ್ಲಿ ನಿಯೋಜಿಸಿರುವ ಸೇನೆಯ ಸಣ್ಣ ತುಕಡಿಯನ್ನು ವಾಪಸ್ ಕರೆಯಿಸಿಕೊಳ್ಳುವಂತೆ ಮಾಲ್ಡೀವ್ಸ್ನ ಹೊಸ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರು, ಭಾರತಕ್ಕೆ ಒತ್ತಾಯಿಸಿದ್ದಾರೆ.
ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಭಾರತದ ಪರ ಹಾಜರಾಗಿದ್ದ ಕೇಂದ್ರ ಭೂ ವಿಜ್ಞಾನ ಸಚಿವ ಕಿರಣ್ ರಿಜಿಜು ಅವರಿಗೆ, ಮುಯಿಝು ಈ ಮನವಿ ಮಾಡಿದ್ದಾರೆ.
ವಿಶಾಲ ಕಡಲು ಪ್ರದೇಶದಲ್ಲಿ ಗಸ್ತು ತಿರುಗಲು ಮಾಲ್ಡೀವ್ಸ್ಗೆ ಉಡುಗೊರೆಯಾಗಿ ನೀಡಿದ ನಾಲ್ಕು ಬೇಹುಗಾರಿಕಾ ವಿಮಾನಗಳ ನಿರ್ವಹಣೆಗಾಗಿ ಭಾರತವು ಭದ್ರತಾ ಸಿಬ್ಬಂದಿಯ ಘಟಕವೊಂದನ್ನು ಅಲ್ಲಿ ನಿಯೋಜಿಸಿದೆ. ಒಟ್ಟು 75 ಭಾರತೀಯ ಸೈನಿಕರು ಈ ದ್ವೀಪ ರಾಷ್ಟ್ರದಲ್ಲಿದ್ದಾರೆ.
ಸೆಪ್ಟೆಂಬರ್ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಮುಯಿಝು ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಮತ್ತೊಂದೆಡೆ ದ್ವೀಪ ರಾಷ್ಟ್ರದ ಮೇಲೆ ಭಾರತ ಮತ್ತು ಚೀನಾ ಪ್ರಭಾವ ಬೀರಲು ಪ್ರಯತ್ನಿಸುತ್ತಿವೆ. ಆದರೆ ಹೊಸ ಅಧ್ಯಕ್ಷರು, ಚೀನಾ ಪರ ಹೆಚ್ಚು ಒಲವು ಹೊಂದಿದ್ದಾರೆ.
‘ಮುಯಿಝು ಅವರಿಗೆ ಸ್ಪಷ್ಟ ಜನಾದೇಶ ಸಿಕ್ಕಿದೆ. ಹಾಗಾಗಿ, ಮಾಲ್ಡೀವ್ಸ್ ಜನರ ಪ್ರಜಾಸತ್ತಾತ್ಮಕ ಇಚ್ಛೆಗಳನ್ನು ಭಾರತ ಗೌರವಿಸುತ್ತದೆಂದು ಭಾವಿಸಿದ್ದೇವೆ’ ಎಂದು ಅಧ್ಯಕ್ಷರ ಕಚೇರಿಯು ಶನಿವಾರ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಹೇಳಿದೆ.
ಆದರೆ, ಭಾರತದ ರಕ್ಷಣಾ ಸಚಿವಾಲಯವು ಈ ಕುರಿತು ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.