ಮಾಲೆ: ಭಾರತದ ಯಾವೊಬ್ಬ ಸೇನಾ ಸಿಬ್ಬಂದಿಗೂ ತನ್ನ ದೇಶದ ನೆಲದಲ್ಲಿ ಇರಲು ಬಿಡುವುದಿಲ್ಲ ಎಂದು ಹೇಳಿದ್ದ ಮಾಲ್ದೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು ಅವರು, ಇದೀಗ ಜಲರಾಶಿ ಸಮೀಕ್ಷೆಗೆ ಭಾರತದ ಜೊತೆಗಿನ ಒಪ್ಪಂದವನ್ನು ಮುಂದುವರಿಸುವುದಿಲ್ಲ ಎಂದು ಹೇಳಿದ್ದಾರೆ.
ಜೊತೆಗೆ ಈ ಸಮೀಕ್ಷೆಗೆ ಅಗತ್ಯವಿರುವ ಎಲ್ಲ ಸಾಧನಗಳು ಮತ್ತು ಪರಿಕರಗಳನ್ನು ತಾನೇ ಖರೀದಿಸುವ ಯೋಜನೆಯನ್ನು ಸರ್ಕಾರ ಹೊಂದಿದೆ. ವಿಶೇಷ ಹಣಕಾಸು ವಲಯವನ್ನು ನಿಯಂತ್ರಿಸಲು ಮಾಲ್ದೀವ್ಸ್ ನೀರಿನ ಮೇಲೆ ದಿನದ 24 ಗಂಟೆಯೂ ನಿಗಾ ವಹಿಸುವ ವ್ಯವಸ್ಥೆಯನ್ನು ಈ ತಿಂಗಳಲ್ಲಿ ಸ್ಥಾಪಿಸಲು ಸರ್ಕಾರ ಕಾರ್ಯಪ್ರವೃತ್ತವಾಗಿದೆ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ್ದ ಮೊಹಮ್ಮದ್ ಮುಯಿಜು, ‘ಜಲರಾಶಿ ಸಮೀಕ್ಷೆಗೆ ಅಗತ್ಯವಿರುವ ವ್ಯವಸ್ಥೆಯನ್ನು ಸ್ಥಾಪಿಸಲು ದೇಶದ ಭದ್ರತಾ ಇಲಾಖೆ ಯತ್ನಿಸುತ್ತಿದೆ. ಇದರಿಂದ ನೀರಿನ ಒಳಗೆ ಸಮೀಕ್ಷೆಗಳನ್ನು ನಡೆಸಲು ಸಾಧ್ಯವಾಗಲಿದೆ’ ಎಂದು ಹೇಳಿದ್ದರು.
ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಸುಧಾರಿಸುವ ಪ್ರಕ್ರಿಯೆಯ ಭಾಗವಾಗಿ ಉಚಿತ ಸೇನಾ ಸಹಕಾರ ಒಪ್ಪಂದಕ್ಕೆ ಚೀನಾ ದೇಶದೊಂದಿಗೆ ಮಾಲ್ದೀವ್ಸ್ ಸರ್ಕಾರ ರಕ್ಷಣಾ ಸಹಕಾರಕ್ಕೆ ಸಹಿ ಹಾಕಿದ ಬೆನ್ನಲ್ಲೇ, ಮಾಲ್ದೀವ್ಸ್ ಅಧ್ಯಕ್ಷರ ಭಾರತ ವಿರೋಧಿ ಧೋರಣೆಯ ಹೇಳಿಕೆ ಹೊರಬಿದ್ದಿದೆ ಎನ್ನಲಾಗಿದೆ.
2023ರ ನವೆಂಬರ್ನಲ್ಲಿ ಮುಯಿಜು ಅವರು ದೇಶದ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ, ಭಾರತ–ಮಾಲ್ದೀವ್ಸ್ ನಡುವಿನ ಸಂಬಂಧದಲ್ಲಿ ಬಿರುಕು ಮೂಡತೊಡಗಿತ್ತು. ಮಾಲ್ದೀವ್ಸ್ನಲ್ಲಿರುವ ಭಾರತೀಯ ಸೇನಾಪಡೆಗಳನ್ನು ವಾಪಸ್ ಕರೆಸಿಕೊಳ್ಳಬೇಕು ಎಂದೂ ಭಾರತವನ್ನು ಒತ್ತಾಯಿಸಿದ್ದರು.