ಇಸ್ಲಾಮಾಬಾದ್: ಪಂಜಾಬ್ ಪ್ರಾಂತ್ಯದ ವಿಧಾನಸಭೆ ಚುನಾವಣೆಯನ್ನು ಮೇ 14ರಂದು ನಡೆಸುವಂತೆ ನೀಡಿರುವ ತೀರ್ಪನ್ನು ಪುನರ್ ಪರಿಶೀಲಿಸಬೇಕು ಎಂದು ಅಧಿಕಾರಿಗಳು ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದ್ದಾರೆ. ಭದ್ರತೆ ಮತ್ತು ಆರ್ಥಿಕ ಕಾರಣಗಳನ್ನು ಉಲ್ಲೇಖಿಸಿ ನ್ಯಾಯಾಲಯಕ್ಕೆ ಈ ಮನವಿ ಮಾಡಲಾಗಿದೆ.
ಮೇ 14ರಂದು ಚುನಾವಣೆ ನಡೆಸಬೇಕು ಎಂದು ಈ ತಿಂಗಳ 4ರಂದು ನ್ಯಾಯಾಲಯ ತೀರ್ಪು ನೀಡಿತ್ತು. ಅಲ್ಲದೆ ಚುನಾವಣೆ ನಡೆಸಲು ಅಗತ್ಯವಿರುವ ಹಣವನ್ನು ಚುನಾವಣಾ ಆಯೋಗಕ್ಕೆ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಸೂಚಿಸಿತ್ತು. ಆದರೆ, ಗಡುವು ಮೀರಿದರೂ ಸರ್ಕಾರ ಆಯೋಗಕ್ಕೆ ಹಣ ಬಿಡುಗಡೆ ಮಾಡಿಲ್ಲ.
ಭದ್ರತೆ ಮತ್ತು ಆರ್ಥಿಕ ಕಾರಣಗಳನ್ನು ಮುಂದಿಟ್ಟಿರುವ ಸರ್ಕಾರವು ಸುಪ್ರೀಂ ಕೋರ್ಟ್ ತೀರ್ಪು ಪಾಲನೆಗೆ ನಿರಾಕರಿಸಿದೆ. ರಕ್ಷಣಾ ಸಚಿವಾಲಯವು ಮರುಪರಿಶೀಲಿಸುವಂತೆ ನ್ಯಾಯಾಲಯವನ್ನು ಕೋರಿದೆ ಎಂದು ಡಾನ್ ದಿನಪತ್ರಿಕೆ ವರದಿ ಮಾಡಿದೆ.