ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ದಾನಗಳನ್ನೊಳಗೊಂಡ ಶ್ರೀಗಂಧದ ಪೆಟ್ಟಿಗೆ, ವಜ್ರ... ಬೈಡನ್ ದಂಪತಿಗೆ ಮೋದಿ ಉಡುಗೊರೆ

Published 22 ಜೂನ್ 2023, 11:33 IST
Last Updated 22 ಜೂನ್ 2023, 11:33 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರಿಗೆ ಮುಂದಿನ ತಿಂಗಳು 80 ವರ್ಷ ತುಂಬಲಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಬೈಡನ್ ದಂಪತಿಗೆ ಭಾರತೀಯ ಪರಂಪರೆಯನ್ನು ಸಾರುವ ವಿಶಿಷ್ಟ ಉಡುಗೊರೆಗಳನ್ನು ಬುಧವಾರ ನೀಡಿದ್ದಾರೆ.

ಶ್ರೀಗಂಧದಿಂದ ಮಾಡಿದ ಪೆಟ್ಟಿಗೆ, ಇಂಗ್ಲಿಷ್‌ಗೆ ಅನುವಾದಿತ ಉಪನಿಷತ್‌ನ ಪ್ರತಿಯನ್ನು ಬೈಡನ್‌ ಅವರಿಗೆ ನೀಡಿದ್ದಾರೆ. ಪ್ರಯೋಗಾಲಯದಲ್ಲಿ ವಿನ್ಯಾಸಗೊಳಿಸಿ, ಸಿದ್ಧಪಡಿಸಿರುವ 7.5 ಕ್ಯಾರೆಟ್ ಹಸಿರು ವಜ್ರವನ್ನು ಜಿಲ್‌ ಬೈಡನ್‌ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ.

ಶ್ರೀಗಂಧದ ಪೆಟ್ಟಿಗೆಯನ್ನು ಮೈಸೂರಿನಿಂದ ತರಿಸಲಾಗಿದೆ. ಜೈಪುರದ ಕುಶಲಕರ್ಮಿಗಳು ಮಾಡಿರುವ ಕೆತ್ತನೆಗಳು ಈ ಪೆಟ್ಟಿಗೆಯ ಸೌಂದರ್ಯ ಹೆಚ್ಚಿಸಿದ್ದು, ಹೂವು–ಪ್ರಾಣಿಗಳ ಚಿತ್ರಗಳು ಕಲಾವಿದರ ಕೈಚಳಕದಲ್ಲಿ ಚೆನ್ನಾಗಿ ಮೂಡಿಬಂದಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ದಿ ಟೆನ್‌ ಪ್ರಿನ್ಸಿಪಲ್ ಉಪನಿಷದ್ಸ್‌’  ಪುಸ್ತಕವನ್ನು ಲಂಡನ್‌ನ ಫೇಬರ್‌ ಅಂಡ್‌ ಫೇಬರ್ ಕಂಪನಿ 1937ರಲ್ಲಿ ಪ್ರಕಟಿಸಿತ್ತು. ಶ್ರೀ ಪುರೋಹಿತ ಸ್ವಾಮಿ ಹಾಗೂ ಹೆಸರಾಂತ ಐರಿಷ್ ಕವಿ ವಿಲಿಯಮ್ ಬಟ್ಲರ್‌ ಯೇಟ್ಸ್‌ ರಚಿಸಿದ್ದರು.

‘ವಯಸ್ಸು ಕಳೆದಂತೆ ವ್ಯಕ್ತಿಯ ಜೀವಾನುಭವವೂ ಹೆಚ್ಚುತ್ತದೆ. ಈ ಜೀವನಾನುಭವ, ನಡೆದು ಬಂದ ದಾರಿಯನ್ನು ಗೌರವಿಸುವುದು ಭಾರತೀಯ ಮೌಲ್ಯ ಮತ್ತು ಪರಂಪರೆ. ಇದಕ್ಕೆ ಅನುಗುಣವಾಗಿ ಮೋದಿ ಅವರು ಈ ಉಡುಗೊರೆ ನೀಡಿದ್ದಾರೆ’ ಎಂದು ತಿಳಿಸಿದ್ದಾರೆ.

80 ವರ್ಷ ಪೂರ್ಣಗೊಂಡವರು ಸಾವಿರ ಹುಣ್ಣಿಮೆಗಳನ್ನು ನೋಡಿರುತ್ತಾರೆ. ಇದೇ ಕಾರಣಕ್ಕೆ ‘ಸಹಸ್ರ ಚಂದ್ರ ದರ್ಶನ’ ಹೆಸರಿನಲ್ಲಿ ಸಂಭ್ರಮಾಚರಣೆಯೂ ನಡೆಯುತ್ತದೆ.

ಪೆಟ್ಟಿಗೆಯಲ್ಲಿದ್ದ 10 ದಾನಗಳು

  • ಪಶ್ಚಿಮ ಬಂಗಾಳದ ನುರಿತ ಕುಶಲಕರ್ಮಿಗಳು ತಯಾರಿಸಿದ ಬೆಳ್ಳಿಯ ತೆಂಗಿನಕಾಯಿಯು ಗಂಧದ ಪೆಟ್ಟಿಯಲ್ಲಿತ್ತು. ಇದು ಗೋದಾನವನ್ನು ಪ್ರತಿನಿಧಿಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

  • ಭೂದಾನಕ್ಕೆ ಬದಲಿಯಾಗಿ ಮೈಸೂರಿನಿಂದ ತರಸಿಕೊಳ್ಳಲಾದ ಪರಿಮಳಯುಕ್ತ ಶ್ರೀಗಂಧದ ಕೊರಡನ್ನು ನೀಡಲಾಗಿದೆ.

  • ತಮಿಳುನಾಡಿನಿಂದ ತರಸಿಕೊಳ್ಳಲಾದ ಬಿಳಿ ಎಳ್ಳನ್ನು ತಿಲದಾನವಾಗಿ ನೀಡಲಾಗಿದೆ.

  • ಹಿರಣ್ಯದಾನವಾಗಿ ರಾಜಸ್ಥಾನದಲ್ಲಿ ಕುಶಲಕರ್ಮಿಗಳಿಂದ ಮಾಡಿಸಲಾದ, 24-ಕ್ಯಾರೆಟ್‌ನ ಶುದ್ಧ ಮತ್ತು ಹಾಲ್‌ಮಾರ್ಕ್‌ವುಳ್ಳ ಚಿನ್ನದ ನಾಣ್ಯವನ್ನು ಕೊಡಲಾಗಿದೆ.

  • ಆಜ್ಯದಾನವಾಗಿ ಪಂಜಾಬಿನ ಶುದ್ಧ ತುಪ್ಪವನ್ನು ಪೆಟ್ಟಿಗೆಯಲ್ಲಿ ಇರಿಸಲಾಗಿತ್ತು.

  • ಜಾರ್ಖಂಡ್‌ನಲ್ಲಿ ಕೈನಿಂದ ನೇಯ್ದ ಟಸ್ಸಾರ್ ರೇಷ್ಮೆಯನ್ನು ವಸ್ತ್ರದಾನವಾಗಿ ನೀಡಲಾಗಿದೆ.

  • ಧಾನ್ಯ ದಾನಕ್ಕಾಗಿ ಉತ್ತರಾಖಂಡದ ಅಕ್ಕಿ ಕೊಡಲಾಗಿದೆ.

  • ಮಹಾರಾಷ್ಟ್ರದ ಬೆಲ್ಲವನ್ನು ಪೆಟ್ಟಿಗೆಯಲ್ಲಿ ದಾನವನ್ನಾಗಿ ಇರಿಸಿಕೊಡಲಾಗಿದೆ.

  • ರಾಜಸ್ಥಾನದ ಕುಶಲಕರ್ಮಿಗಳಿಂದ ತಯಾರಿಸಲಾದ 99.5 ಕ್ಯಾರೆಟ್‌ನ ಶುದ್ಧ ಬೆಳ್ಳಿಯ ನಾಣ್ಯವನ್ನು ರೌಪ್ಯಾದಾನವನ್ನಾಗಿ ನೀಡಲಾಯಿತು.

  • ಗುಜರಾತ್‌ನಿಂದ ತರಲಾದ ಉಪ್ಪನ್ನು ಲವಣದಾನವಾಗಿ ಕೊಡಲಾಗಿದೆ.

ಬೆಳ್ಳಿಯ ಗಣೇಶನ ವಿಗ್ರಹ, ದೀಪ

ಹತ್ತು ದಾನಗಳನ್ನು ಒಳಗೊಂಡಿದ್ದ ಪೆಟ್ಟಿಗೆಯಲ್ಲಿ ಗಣೇಶನ ವಿಗ್ರಹವನ್ನೂ ಪ್ರತ್ಯೇಕವಾಗಿ ಇರಿಸಿ ಕೊಡಲಾಗಿದೆ. ಹಿಂದೂ ಪರಂಪರೆಯಲ್ಲಿ ಗಣೇಶನನ್ನು ವಿಘ್ನನಿವಾರಕ ಎಂದೇ ಕರೆಯಲಾಗುತ್ತದೆ. ಎಲ್ಲಾ ದೇವರುಗಳಿಗಿಂತಲೂ ಮೊದಲು ಪೂಜೆ ಸ್ವೀಕರಿಸುವವನೂ ಕಣೇಶನೇ. ಕೋಲ್ಕತ್ತದಲ್ಲಿರುವ ಐದನೇ ತಲೆಮಾರಿನ ಅಕ್ಕಸಾಲಿಗರು ಈ ವಿಗ್ರಹವನ್ನು ಸಿದ್ಧಪಡಿಸಿದ್ದಾರೆ.

ಇದರ ಜತೆಗೆ, ದೀಪ (ಎಣ್ಣೆ ದೀಪ)ವನ್ನೂ ಪೆಟ್ಟಿಗೆ ಇರಿಸಲಾಗಿದೆ. ಈ ಬೆಳ್ಳಿ ದೀಪವನ್ನು ಕೋಲ್ಕತ್ತಾದ ಅಕ್ಕಸಾಲಿಗರೇ ತಯಾರಿಸಿಕೊಟ್ಟಿದ್ದಾರೆ.

ಜಿಲ್‌ ಬೈಡನ್‌ಗೆ ವಜ್ರದ ಉಡುಗೊರೆ

ಪ್ರಯೋಗಾಲಯದಲ್ಲಿ ಸೃಷ್ಟಿಸಿದ 7.5 ಕ್ಯಾರೆಟ್‌ನ ವಜ್ರವನ್ನು ಬೈಡನ್‌ ಪತ್ನಿ ಜಿಲ್‌ ಬೈಡನ್‌ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಉಡುಗೊರೆಯಾಗಿ ನೀಡಿದರು.

ಪ್ರಯೋಗಾಲಯದಲ್ಲಿ ಸಿದ್ಧಪಡಿಸಲಾಗಿರುವ ಈ ವಜ್ರದ ಹರಳು, ಗಣಿಯಲ್ಲಿ ತೆಗೆದ ವಜ್ರವನ್ನೇ ಹೋಲುತ್ತದೆ. ನೈಸರ್ಗಿಕ ವಜ್ರ ಹೊಂದಿರುವ ರಾಸಾಯನಿಕ ಸಂಯೋಜನೆ ಹಾಗೂ ಇತರ ಗುಣಲಕ್ಷಣಗಳನ್ನು ಹೊಂದಿದೆ.  ಭಾರತ 75ನೇ ಸ್ವಾತಂತ್ರ್ಯೋತ್ಸವ ಆಚರಿಸಿಕೊಳ್ಳುತ್ತಿರುವುದರ ಸಂಕೇತವಾಗಿಯೂ ಈ ವಜ್ರದ ಹರಳನ್ನು ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಧ್ಯಕ್ಷ ಜೋ ಬೈಡೆನ್ ಮತ್ತು ಜಿಲ್ ಬಿಡೆನ್ ಅವರು ಶ್ವೇತಭವನದಲ್ಲಿ ಪ್ರಧಾನ ಮಂತ್ರಿಯವರಿಗೆ ಆತ್ಮೀಯ ಭೋಜನ ಕೂಟ ಏರ್ಪಡಿಸಿದ್ದರು. ಈ ಸಮಯದಲ್ಲಿ ಅವರು ಹಲವಾರು ವಿಷಯಗಳ ಬಗ್ಗೆ ಚರ್ಚಿಸಿದರು. ಉಡುಗೊರೆಗಳನ್ನು ವಿನಿಮಯ ಮಾಡಿಕೊಂಡರು.

ಮೋದಿಗೆ ಉಡುಗೊರೆ

20ನೇ ಶತಮಾನದಲ್ಲಿ ತಯಾರಿಸಿರುವ ಪುಸ್ತಕದ ಗ್ಯಾಲರಿಯನ್ನು ಬೈಡನ್‌ ದಂಪತಿ ಮೋದಿ ಅವರಿಗೆ ಉಡಗೊರೆಯಾಗಿ ನೀಡಿದ್ದಾರೆ.

ಹಳೆಯ ಅಮೆರಿಕನ್ ಕ್ಯಾಮೆರಾ, ವನ್ಯಜೀವಿ ಛಾಯಾಗ್ರಹಣ ಕುರಿತ ಪುಸ್ತಕ ಹಾಗೂ ‘ಕಲೆಕ್ಟೆಡ್ ಪೊಯೆಮ್ಸ್‌ ಆಫ್‌ ರಾಬರ್ಟ್‌ ಫ್ರಾಸ್ಟ್‌’ ಕೃತಿಯನ್ನು ಸಹ ಅವರು ಮೋದಿ ಅವರಿಗೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT