ಹರಾರೆ(ಜಿಂಬಾಬ್ವೆ): ಜಿಂಬಾಬ್ವೆ ಅಧ್ಯಕ್ಷ ಎಮ್ಮರ್ಸನ್ ನನ್ಗಾಗುವಾ ಅವರೊಂದಿಗೆಶನಿವಾರ ನಡೆಸಿದ ದ್ವಿಪಕ್ಷೀಯ ಮಾತುಕತೆ ಫಲಕಾರಿಯಾಗಿದೆ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಜಿಂಬಾಬ್ವೆ ವಿಭಜನೆ ಸಂದರ್ಭದಲ್ಲಿ ಭಾರತ ನೀಡಿದ ನೆರವಿನ ಬಗ್ಗೆಯೂ ನಾಯ್ಡು ಪ್ರಸ್ತಾಪಿಸಿದ್ದಾರೆ. ಈಸಂಬಂಧ ಉಪರಾಷ್ಟ್ರಪತಿಗಳ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಲಾಗಿದೆ.
ಜಿಂಬಾಬ್ವೆ ಚುನಾವಣೆ ಮುಗಿದ ಕೆಲವೇ ದಿನಗಳಲ್ಲಿ ನಾಯ್ಡು ಅವರು ಭೇಟಿ ನೀಡಿರುವ ಬಗ್ಗೆ ನನ್ಗಾಗುವಾ ಅವರೂ ಹರ್ಷ ವ್ಯಕ್ತಪಡಿಸಿದ್ದಾರೆ.
ರಾಜತಾಂತ್ರಿಕ ವ್ಯವಹಾರಗಳ ಸಂಬಂಧ ಉಭಯ ದೇಶಗಳಿಗೆ ಭೇಟಿ ನೀಡುವ ಅಧಿಕಾರಿಗಳಿಗೆ ಅಗತ್ಯವಿರುವ ವೀಸಾ ವಿಚಾರವಾಗಿ ಪರಸ್ಪರ ವಿನಾಯಿತಿ ನೀಡುವ ಒಪ್ಪಂದ ಮಾಡಿಕೊಳ್ಳಲಾಗಿದೆ.
ಆಯುರ್ವೇದ ಚಿಕಿತ್ಸಾ ಪದ್ದತಿ, ಗಣಿ, ಖನಿಜ ಸಂಪನ್ಮೂಲಗಳು, ಕಲೆ, ಪರಂಪರೆಗಳ ನಡುವಣ ಸಹಕಾರ ಕಾಯ್ದುಕೊಳ್ಳಲು ಒತ್ತು ನೀಡುವ ಸಂಬಂಧ ಚರ್ಚೆ ನಡೆದಿದ್ದು, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಕ್ಷೇತ್ರದಲ್ಲಿ ಉಭಯ ರಾಷ್ಟ್ರಗಳ ನಡುವಣ ಸಹಕಾರ ಕಾಯ್ದುಕೊಳ್ಳುವ ಕ್ರಿಯಾಯೋಜನೆಗೆ ಸಹಿ ಮಾಡಲಾಗಿದೆ.