ಕೊಲಂಬೊ (ಪಿಟಿಐ): ಎಲ್ಟಿಟಿಇ ನಾಯಕ ವೇಲುಪಿಳ್ಳೈ ಪ್ರಭಾಕರನ್ ಇನ್ನೂ ಬದುಕಿದ್ದಾರೆ ಎಂದು ಶ್ರೀಲಂಕಾ ತಮಿಳು ರಾಷ್ಟ್ರೀಯವಾದಿಗಳು ಭಾವಿಸಿದ್ದಾರೆ. ನಾಪತ್ತೆಯಾಗಿರುವ ವ್ಯಕ್ತಿಗಳ ಪತ್ತೆಗಾಗಿ ಹೊಸದಾಗಿ ಕಚೇರಿಯೊಂದನ್ನು ತೆರೆಯಲಾಗಿದ್ದು, ಪ್ರಭಾಕರನ್ ನಾಪತ್ತೆಯಾಗಿರುವ ಮಾಹಿತಿಯನ್ನು ಆ ಕಚೇರಿಗೆ ನೀಡುವುದಾಗಿ ತಮಿಳು ರಾಷ್ಟ್ರೀಯ ಮೈತ್ರಿಕೂಟದ ಮುಖಂಡ ಎಂ.ಶಿವಾಜಿಲಿಂಗಂ ಹೇಳಿದ್ದಾರೆ.
ಲಿಬರೇಷನ್ ಟೈಗರ್ಸ್ ಆಫ್ ತಮಿಳ್ ಈಳಂ (ಎಲ್ಟಿಟಿಇ) ಹೆಸರಿನಲ್ಲಿ ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಪ್ರತ್ಯೇಕ ಹೋರಾಟ ಕೈಗೊಂಡಿದ್ದ ಪ್ರಭಾಕರನ್ ಅವರನ್ನು 2009ರ ಮೇ 19ರಂದು ಮುಲ್ಲೈವೈಕ್ಕಲ್ನಲ್ಲಿ ಹತ್ಯೆ ಮಾಡಿದ್ದಾಗಿ ಶ್ರೀಲಂಕಾ ಸೇನೆ ಹೇಳಿಕೊಂಡಿತ್ತು.
ಬದುಕಿರುವ ನಂಬಿಕೆ: ಸರ್ಕಾರದ ವಾದವನ್ನು ಒಪ್ಪದ ಕೆಲವು ತಮಿಳು ರಾಷ್ಟ್ರೀಯವಾದಿಗಳು, ಪ್ರಭಾಕರನ್ ಈಗಲೂ ಬದುಕಿರುವ ಸಾಧ್ಯತೆ ಇದೆ ಎಂದೇ ನಂಬಿದ್ದಾರೆ. 2009ರ ಯುದ್ಧದಲ್ಲಿ ಅವರು ತಪ್ಪಿಸಿಕೊಂಡಿರಬಹುದು ಎಂದು ಭಾವಿಸಿದ್ದಾರೆ.
ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿಯ ನಿರ್ಣಯ ಜಾರಿಯ ಭಾಗವಾಗಿ ಶ್ರೀಲಂಕಾ ಸರ್ಕಾರವು ಹೊಸದಾಗಿ ಈ ಕಚೇರಿ ಆರಂಭಿಸಿದೆ.
ಅಂತರರಾಷ್ಟ್ರೀಯ ರೆಡ್ಕ್ರಾಸ್ ಸಂಸ್ಥೆಯು ನಡೆಸಿದ ಸಮೀಕ್ಷೆ ಪ್ರಕಾರ 2009ರಿಂದ ಈಚೆಗೆ 16 ಸಾವಿರ ಜನರು ನಾಪತ್ತೆಯಾಗಿದ್ದಾರೆ.