ಭಾರತ ಭೇಟಿಗೆ ಮಲಿಕ್ ಒಪ್ಪಿಗೆ
ಇಸ್ಲಾಮಾಬಾದ್(ಐಎಎನ್ಎಸ್): ಪಾಕಿಸ್ತಾನಕ್ಕೆ ತೆರಳಿದ್ದ ಅಖಿಲ ಭಾರತ ವಕೀಲರ ಸಂಘದ 25 ಸದಸ್ಯರನ್ನು ಒಳಗೊಂಡ ನಿಯೋಗ, ಭಾರತಕ್ಕೆ ಬಂದು ತಮ್ಮನ್ನು ಉದ್ದೇಶಿಸಿ ಮಾತನಾಡುವಂತೆ ನೀಡಿದ ಆಹ್ವಾನವನ್ನು ಒಳಾಡಳಿತ ಸಚಿವ ರೆಹಮಾನ್ ಮಲಿಕ್ ಒಪ್ಪಿಕೊಂಡಿದ್ದಾರೆ.
ಕಾರು ಕಳ್ಳರಿಂದ ಭಾರತೀಯನ ಕೊಲೆ
ಲಂಡನ್, (ಪಿಟಿಐ): ಕಾರು ಕಳ್ಳರ ದಾಳಿಯಿಂದ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಸಾವಿಗೀಡಾದ ದುರ್ಘಟನೆ ಇಲ್ಲಿನ ಸ್ಕಾಟ್ಲೆಂಡ್ ಯಾರ್ಡ್ನಲ್ಲಿ ನಡೆದಿದೆ. ಕಳ್ಳರು ಕಾರಿನ ಕೀಲಿಕೈ ಕೇಳಿದಾಗ ಕೊಡಲು ನಿರಾಕರಿಸಿದ ಹರ್ಜಿಂದರ್ ಸಿಂಗ್ ಅವರ ಎದೆಗೆ ಕಳ್ಳರು ಚೂರಿಯಿಂದ ತಿವಿದರು. ಬಳಿಕ ಕೀಲಿಕೈಯನ್ನು ಕಸಿದುಕೊಂಡು ಕಾರಿನೊಂದಿಗೆ ಪರಾರಿಯಾದರು ಎಂದು ವರದಿ ತಿಳಿಸಿದೆ.
ಕೊನೆಗೊಂಡ ಉಗ್ರರ ದಾಳಿ: 27 ಬಲಿ
ಕಾಬೂಲ್, (ಎಎಫ್ಪಿ): ಅಮೆರಿಕದ ರಾಯಭಾರ ಕಚೇರಿ ಸಮೀಪ ಇರುವ ನ್ಯಾಟೊ ಕಚೇರಿ ಮೇಲೆ ತಾಲಿಬಾನ್ ಉಗ್ರರು ನಡೆಸಿದ ದಾಳಿ ಹಾಗೂ ಭದ್ರತಾಪಡೆಗಳ ಪ್ರತಿದಾಳಿಯಲ್ಲಿ 27 ಮಂದಿ ಸಾವಿಗೀಡಾಗಿದ್ದಾರೆ. ಮಂಗಳವಾರದಿಂದ ಆರಂಭವಾಗಿ ಸುಮಾರು 20 ಗಂಟೆಗಳ ಕಾಲ ಈ ಕಾಳಗ ನಡೆಯಿತು.