ಇಸ್ಲಾಮಾಬಾದ್: ಮುಂಬೈನಲ್ಲಿ 2008ರ ನವೆಂಬರ್ 26ರಂದು ನಡೆದಿದ್ದ ಭಯೋತ್ಪಾದಕ ದಾಳಿಗೆ ಸಂಬಂಧಿಸಿ ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್ ಷರೀಫ್ ನೀಡಿದ್ದ ಹೇಳಿಕೆಯನ್ನು ಭಾರತದ ಮಾಧ್ಯಮಗಳು ತಪ್ಪಾಗಿ ಬಿಂಬಿಸಿವೆ ಎಂದು ಅವರ ವಕ್ತಾರರು ಆರೋಪಿಸಿದ್ದಾರೆ.
‘ಹೇಳಿಕೆಯನ್ನು ಭಾರತೀಯ ಮಾಧ್ಯಮಗಳು ತಪ್ಪಾಗಿ ಬಿಂಬಿಸಿವೆ. ದುರದೃಷ್ಟವಶಾತ್, ಅದನ್ನು ನಂಬಿ ಪಾಕಿಸ್ತಾನದ ವಿದ್ಯುನ್ಮಾನ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿಯೂ ಅದೇ ಸುದ್ದಿಯನ್ನು ಹರಡಲಾಗಿದೆ’ ಎಂದು ವಕ್ತಾರರು ಹೇಳಿದ್ದಾರೆ.
ಈ ಮಧ್ಯೆ, ಮುಂಬೈ ದಾಳಿಗೆ ಸಂಬಂಧಿಸಿ ಷರೀಫ್ ತಪ್ಪೊಪ್ಪಿಕೊಂಡಿದ್ದಾರೆ ಎಂಬ ವರದಿಗಳು ಪ್ರಕಟವಾದ ಹಿನ್ನೆಲೆಯಲ್ಲಿ ಆ ಕುರಿತು ಚರ್ಚೆ ನಡೆಸಲು ಪಾಕಿಸ್ತಾನ ಸೇನೆ ಉನ್ನತಮಟ್ಟದ ಸಭೆ ಕರೆದಿದೆ.
‘ಸರ್ಕಾರೇತರ ಶಕ್ತಿಗಳು ಎಂದು ಕರೆಯಬಹುದಾದ ಭಯೋತ್ಪಾದಕ ಸಂಘಟನೆಗಳು ಗಡಿ ದಾಟಿ ಮುಂಬೈನಲ್ಲಿ ಸುಮಾರು 150 ಮಂದಿಯನ್ನು ಹತ್ಯೆ ಮಾಡಬಹುದೇ? ಇಂತಹ ನೀತಿಗೆ ಅವಕಾಶ ನೀಡಿರುವುದು ಸರಿಯೇ? ಈ ಬಗ್ಗೆ ನನಗೆ ವಿವರ ನೀಡಿ. ನಾವು ಈ ಪ್ರಕರಣದ ವಿಚಾರಣೆಯನ್ನು ಏಕೆ ಮುಕ್ತಾಯಗೊಳಿಸುತ್ತಿಲ್ಲ’ ಎಂದು ಷರೀಫ್ ಪ್ರಶ್ನಿಸಿದ ಬಗ್ಗೆ ಶನಿವಾರ ವರದಿಯಾಗಿತ್ತು.