ಕಠ್ಮಂಡು (ಐಎಎನ್ಎಸ್): ಸಮುದ್ರ ಮಟ್ಟದಲ್ಲಿ ಕಂಡು ಬರುತ್ತಿರುವ ಹೆಚ್ಚಳದಿಂದಾಗಿ ವಿಶ್ವದಲ್ಲಿ ಹವಾಮಾನ ಬದಲಾವಣೆಯ ಆತಂಕ ಹೆಚ್ಚುತ್ತಿದೆ. ವಾತಾವರಣದಲ್ಲಿ ತಾಪಮಾನವನ್ನು ಕಡಿಮೆಗೊಳಿಸುವ ಪ್ರಯತ್ನಗಳನ್ನು ಮಾಡದೇ ಇದ್ದಲ್ಲಿ, ಇದರ ದುಷ್ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹೆಸರಾಂತ ಪರಿಸರವಾದಿ ರಾಜೇಂದ್ರ ಪಚೌರಿ ಎಚ್ಚರಿಕೆ ನೀಡಿದ್ದಾರೆ.
ಹವಾಮಾನ ಬದಲಾವಣೆಯ ಅಂತರ ಸರ್ಕಾರಗಳ ವಿಶ್ವಸಂಸ್ಥೆಯ ತಂಡ (ಐಪಿಸಿಸಿ)ದ ಮುಖ್ಯಸ್ಥರಾಗಿರುವ ಪಚೌರಿ ಭಾರತ, ಚೀನಾ, ನೇಪಾಳ, ಬಾಂಗ್ಲಾದೇಶ, ಪಾಕಿಸ್ತಾನ, ಆಫ್ಘಾನಿಸ್ತಾನ, ಮ್ಯಾನ್ಮಾರ್ ಮತ್ತು ಭೂತಾನ್ ದೇಶಗಳ ಅಂತರರಾಷ್ಟ್ರೀಯ ಪರ್ವತ ಅಭಿವೃದ್ಧಿ ಕೇಂದ್ರದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಪಚೌರಿ ಅವರು ಮಾತನಾಡುತ್ತಿದ್ದರು.
ಐಪಿಸಿಸಿಯ ಅಧ್ಯಯನದ ವರದಿಯಂತೆ ಈ ಶತಮಾನದ ಅಂತ್ಯದಲ್ಲಿ ಸಮುದ್ರ ಮಟ್ಟವು ಜಗತ್ತಿನಾದ್ಯಂತ ಸರಾಸರಿ 0.6ರಿಂದ 2 ಅಡಿಯಷ್ಟು ಹೆಚ್ಚಾಗಲಿದೆ.
ಪರಿಣಾಮವಾಗಿ ಸುಧಾರಿಸಲಾಗದಷ್ಟು, ಹಠಾತ್ ಬದಲಾವಣೆಗಳು ಕಂಡು ಬರುತ್ತವೆ. ಶೇ 20ರಿಂದ 30ರಷ್ಟು ಸಸ್ಯ ಹಾಗೂ ಪ್ರಾಣಿ ಪ್ರಭೇದಗಳು ನಿರ್ನಾಮವಾಗುವ ಸಾಧ್ಯತೆಗಳೂ ಇವೆ ಎಂದೂ ಪಚೌರಿ ಎಚ್ಚರಿಸಿದ್ದಾರೆ.
ಕಳೆದ ವಾರ ದಕ್ಷಿಣ ಭಾರತದ ರಾಮೇಶ್ವರಂಗೆ ಭೇಟಿ ನೀಡಿದಾಗ ಸಮುದ್ರ ತಟದ ಜನರು ಅಲ್ಲಿಂದ ಸ್ಥಳಾಂತರಗೊಳ್ಳುತ್ತಿರುವುದನ್ನು ಗಮನಿಸಿರುವುದಾಗಿ ಹೇಳಿದ್ದಾರೆ.