ಡಮಾಸ್ಕಸ್ (ಎಎಫ್ಪಿ): ಗಲಭೆಗ್ರಸ್ಥ ಸಿರಿಯಾದಲ್ಲಿ ನಿಲ್ಲದ ಹಿಂಸಾಚಾರಕ್ಕೆ ಮತ್ತೆ ಶನಿವಾರ 70ಕ್ಕೂ ಹೆಚ್ಚು ನಾಗರಿಕರು ಬಲಿಯಾಗಿದ್ದು, ಗಲಭೆ ನಿಯಂತ್ರಿಸಲು ಸೇನೆಯನ್ನು ನಿಯೋಜಿಸಲಾಗಿದೆ.
ವಿಶ್ವಸಂಸ್ಥೆಯ ಮಾಜಿ ಮಹಾ ಕಾರ್ಯದರ್ಶಿ ಹಾಗೂ ವಿಶ್ವಸಂಸ್ಥೆ- ಅರಬ್ ರಾಷ್ಟ್ರಗಳ ಪ್ರತಿನಿಧಿ ಕೋಫಿ ಅನ್ನಾನ್ ಅವರು ಮುಂದಿನ ವಾರ ಸಿರಿಯಾಗೆ ಭೇಟಿ ನೀಡುವವರಿದ್ದು, ಅದಕ್ಕೂ ಮುನ್ನ ಈ ನರಮೇಧ ನಡೆದಿದೆ. ಒಂದು ವರ್ಷದಿಂದ ಸೇನೆ ಮತ್ತು ಆಡಳಿತ ವಿರೋಧಿಗಳ ಮಧ್ಯೆ ನಡೆದಿರುವ ನಿರಂತರ ಸಂಘರ್ಷವನ್ನು ನಿಲ್ಲಿಸುವ ಉದ್ದೇಶದಿಂದ ಅನ್ನಾನ್ ಇಲ್ಲಿಗೆ ಭೇಟಿ ನೀಡಲಿದ್ದಾರೆ.
ಒಂದು ವರ್ಷದಿಂದ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ಆಡಳಿತದ ವಿರುದ್ಧ ಬೀದಿಗಿಳಿದು ಹೋರಾಟ ನಡೆಸುತ್ತಿರುವ ಹತ್ತು ಸಾವಿರಕ್ಕೂ ನಾಗರಿಕರ ಮೇಲೆ ಹೆಲಿಕಾಪ್ಟರ್ನಿಂದ ಗುಂಡಿನ ದಾಳಿ ನಡೆಸಲಾಗಿದೆ. ಮೃತಪಟ್ಟವರಲ್ಲಿ 13 ಮಕ್ಕಳು ಮತ್ತು ಕನಿಷ್ಠ ನಾಲ್ವರು ಪೊಲೀಸರೂ ಸೇರಿದ್ದಾರೆ. 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಸಿರಿಯಾದಲ್ಲಿಯ ಸದ್ಯದ ಪರಿಸ್ಥಿತಿ ಒಟ್ಟಾರೆ ಗಂಭೀರವಾಗಿದೆ ಎಂದು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಕಳವಳ ವ್ಯಕ್ತಪಡಿಸಿದ್ದಾರೆ.