ಇಸ್ಲಾಮಾಬಾದ್: ಪಾಕಿಸ್ತಾನದ ಟಿವಿ ಕಾರ್ಯಕ್ರಮವೊಂದರಲ್ಲಿ ಸಂಸದ ಮಣಿ ಶಂಕರ್ ಅಯ್ಯರ್ ಹಾಗೂ ಮುಂಬೈ ದಾಳಿಯಲ್ಲಿ ಆರೋಪಿಯಾಗಿರುವ ಜಮಾತ್- ಉದ್- ದವಾ ಮುಖ್ಯಸ್ಥ ಹಫೀಜ್ ಮಹಮ್ಮದ್ ಸಯೀದ್ ನಡುವೆ ವಾಗ್ವಾದ ನಡೆದಿರುವ ಘಟನೆ ವರದಿಯಾಗಿದೆ.
ವಾಣಿಜ್ಯ ವ್ಯವಹಾರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಭಾರತಕ್ಕೆ `ಪರಮಾಪ್ತ~ ದೇಶದ ಸ್ಥಾನಮಾನ ನೀಡಿರುವುದರ ಕುರಿತು ಟಿವಿಯಲ್ಲಿ ಚರ್ಚೆ ನಡೆಯುತ್ತಿತ್ತು.
ಮಣಿಶಂಕರ್ ಅಯ್ಯರ್ ಮತ್ತು ಇನ್ನೊಬ್ಬ ತಜ್ಞರು ಚರ್ಚೆಯಲ್ಲಿ ಇದ್ದಾಗ ಟಿವಿ ವಾಹಿನಿ ಏಕಾಏಕಿ ಹಫೀಜ್ ಸಯೀದ್ ಜತೆ ದೂರವಾಣಿ ಸಂಪರ್ಕ ಕಲ್ಪಿಸಿತು.
ಭಾರತಕ್ಕೆ `ಪರಮಾಪ್ತ~ ದೇಶದ ಸ್ಥಾನಮಾನ ನೀಡಿರುವುದು ಸರಿಯಲ್ಲ. ಕಾಶ್ಮೀರ ಸೇರಿದಂತೆ ಆ ದೇಶದ ಜತೆ ಹಲವು ವಿಚಾರಗಳು ಇತ್ಯರ್ಥವಾಗಬೇಕಿವೆ. ಭಾರತದಲ್ಲಿ ಈಗ ನಿರ್ಮಾಣವಾಗುತ್ತಿರುವ ಅಣೆಕಟ್ಟೆಗಳಿಂದ ಪಾಕಿಸ್ತಾನಕ್ಕೆ ಅಪಾಯವಾಗುವ ಸಂಭವವಿದೆ. ಭಾರತದ ಜತೆ ಮಾತುಕತೆಯನ್ನು ವಿರೋಧಿಸುವುದಿಲ್ಲ. ಆದರೆ, ದ್ವಿಪಕ್ಷೀಯ ಸಮಸ್ಯೆ ಪರಿಹರಿಸಲು ಆ ದೇಶ ಗಂಭೀರ ಯತ್ನ ಮಾಡಿದಂತಿಲ್ಲ ಎಂದು ಸಯೀದ್ ಆರೋಪಿಸಿದರು.
ಕೂಡಲೇ ಇದಕ್ಕೆ ಪ್ರತಿಕ್ರಿಯಿಸಿದ ಅಯ್ಯರ್, `ಭಾರತದೊಂದಿಗಿನ ಸಂಬಂಧ ಸುಧಾರಣೆಗೆ ವಿರೋಧಿಸುತ್ತಿರುವ ಸಣ್ಣ ಗುಂಪಿನಲ್ಲಿ ಸಯೀದ್ ಸೇರಿದ್ದಾರೆ. ಪಾಕ್ನ ಜನಸಾಮಾನ್ಯರು ಭಾರತದೊಂದಿಗೆ ಸಂಬಂಧ ಸುಧಾರಿಸಲಿ ಎಂದು ಆಶಿಸುತ್ತಾರೆ. ಸಯೀದ್ ಅಭಿಪ್ರಾಯ ಏನೇ ಇರಲಿ. ನಾವು ಸಂಬಂಧ ಸುಧಾರಿಸಿಕೊಳ್ಳಬಹುದು. ಆತನನ್ನು ಬಂಧಿಸಿ ನಮ್ಮ ಭಯೋತ್ಪಾದನಾ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಬೇಕಿದೆ~ ಎಂದು ಕಟುವಾಗಿ ನುಡಿದರು.