ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಶಿಕ್ಷಕರಿಗೆ ಗೌರವದ ಕಾಣಿಕೆ...

Last Updated 7 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

2013ರ ಆಗಸ್ಟ್ 23 ನನ್ನ ಜೀವನದ ವಿಶೇಷ ದಿನ. ಪ್ರತಿ ವರ್ಷವೂ ಸೆಪ್ಟೆಂಬರ್ 5ರ ಶಿಕ್ಷಕರ ದಿನದಂದು ನನ್ನ ಶಿಕ್ಷಕರನ್ನು ಭೇಟಿ ಮಾಡಬೇಕು ಎಂದು ಯೋಚಿಸುತ್ತೇನೆ. ಅವರಿಲ್ಲದೆ ನನ್ನ ಬದುಕಿನಲ್ಲಿ ಏನನ್ನೂ ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ. ನನ್ನ ಪೋಷಕರು ವಿದೇಶದಲ್ಲಿ ಇದ್ದಾಗ, ಪ್ರಾರಂಭದ ಸರ್ಕಾರಿ ಶಾಲಾ ದಿನಗಳು ಸಾಗಿದ್ದು ಶಿವಮೊಗ್ಗದ ಲಿಂಗದಹಳ್ಳಿಯ ತಾಯಿಯ ಮನೆಯಲ್ಲಿ.

ಅವರು ಭಾರತಕ್ಕೆ ಹಿಂದಿರುಗಿದ ಬಳಿಕ ನನ್ನನ್ನು ಇಂಗ್ಲಿಷ್ ಶಾಲೆಯಲ್ಲಿ ಓದಿಸಬೇಕೆಂಬ ಬಯಕೆ ಹೊಂದಿದ್ದರು. ಶಂಕರಪುರಂನಲ್ಲಿ ಬಾಡಿಗೆ ಮನೆ ಮಾಡಿದ ಅಪ್ಪಾಜಿ ನನ್ನನ್ನು ಬಸವನಗುಡಿಯ ‘ದಿ ಹೋಮ್ ಸ್ಕೂಲ್'ಗೆ ಸೇರಿಸಿದರು. ಆ ಶಾಲೆಯಲ್ಲಿ ಪ್ರೌಢಶಿಕ್ಷಣ ಇರಲಿಲ್ಲವಾದ್ದರಿಂದ ಏಳನೇ ತರಗತಿಯವರೆಗೆ ಅಲ್ಲಿ ಓದು ನಡೆಯಿತು. ನನ್ನ ಸಹಪಾಠಿ ರಶ್ಮಿ ದೇಶಪಾಂಡೆ ನನ್ನ ಶಾಲಾದಿನಗಳಲ್ಲಿ ದೀರ್ಘಕಾಲದ ಗೆಳತಿ. ವಿದ್ಯಾರ್ಥಿದೆಸೆಯಲ್ಲಿ ನಮ್ಮ ಶಿಕ್ಷಕರೆಂದರೆ ಅತಿಯಾದ ವ್ಯಾಮೋಹ. ಅದರಲ್ಲೂ ಶಾಂತಾ ಮತ್ತು ಸರೋಜಾ ಮೇಡಂ ಇಬ್ಬರೂ ನಮ್ಮ ಪಾಲಿಗೆ ವಿಶೇಷ ಶಿಕ್ಷಕಿಯರಾಗಿದ್ದರು.

ಹೋಮ್ ಸ್ಕೂಲ್‌ನಿಂದ ಈಸ್ಟ್ ವೆಸ್ಟ್ ಶಾಲೆ, ಬಳಿಕ ನ್ಯಾಷನಲ್ ಕಾಲೇಜ್ ಮತ್ತು ವೃತ್ತಿಪರ ಸಹೋದ್ಯೋಗಿಗಳಾದ ಬಳಿಕವೂ (ರಶ್ಮಿ ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಮಾಡಿದ್ದರು) ನಾವು ನಮ್ಮ ಶಿಕ್ಷಕರ ಕುರಿತು ಯಾವಾಗಲೂ ಮಾತನಾಡುತ್ತಿದ್ದೆವು. ನಾವು ದುಡಿಯಲು ಪ್ರಾರಂಭಿಸಿದಾಗ ನಮ್ಮನ್ನು ಬೌದ್ಧಿಕವಾಗಿ ಬೆಳೆಸಿದ ಆ ಶಿಕ್ಷಕರಿಗೆ ಉಡುಗೊರೆ ನೀಡುವ ಮೂಲಕ ನಮ್ಮ ಕೃತಜ್ಞತೆ ಸಲ್ಲಿಸಬೇಕು ಎಂದು ನಿರ್ಧರಿಸಿದ್ದೆವು. ಅವರಿಗಾಗಿ ಕೆಎಸ್‌ಐಸಿ ಸೀರೆಗಳನ್ನು ಖರೀದಿಸಿದೆವು.

ಆಗ ನಮ್ಮ ಶುಭಾಶಯ ವಸ್ತುರೂಪದಲ್ಲಿತ್ತು. ಕೆಎಸ್‌ಐಸಿ ಸೀರೆಗಳು ದುಬಾರಿಯಾಗಿದ್ದರಿಂದ ಮೊದಲು ಒಂದು ಸೀರೆಯನ್ನು ಶಾಂತಾ ಮಿಸ್ ಅವರಿಗೆ, ನಂತರ ಸರೋಜಾ ಮೇಡಂಗೆ ಕೊಳ್ಳಲು ನಿರ್ಧರಿಸಿದೆವು. 10 ವರ್ಷದ ಹಿಂದೆ ನಾವು ಶಾಂತಾ ಮೇಡಂಗಾಗಿ ಪ್ರಿಯದರ್ಶಿನಿ ರೇಷ್ಮೆ ಸೀರೆ ಕೊಂಡು ಉಡುಗೊರೆ ನೀಡಲು ಶಾಲೆಗೆ ತೆರಳಿದೆವು. ಅವರು ಬಹಳ ಕಾಲದ ಹಿಂದೆಯೇ ನಿವೃತ್ತಿಯಾಗಿದ್ದಾರೆ ಎನ್ನುವುದು ನಮಗೆ ತಿಳಿದೇ ಇರಲಿಲ್ಲ.

ಶಾಲೆಯಲ್ಲಿ ಅವರ ವಿಳಾಸವೂ ಇರಲಿಲ್ಲ. ಅವರ ಮನೆ ಗಾಂಧಿಬಜಾರ್‌ನಲ್ಲಿ ಇತ್ತೆಂಬ ನೆನಪು ಅಸ್ಪಷ್ಟವಾಗಿ ಹಾದುಹೋಯಿತು. ಆ ಹಳೆಯ ಕಟ್ಟಡ ನೆಲಸಮವಾಗಿ ಅದೇ ಜಾಗದಲ್ಲಿ ಹೊಸ ಮನೆ ತಲೆ ಎತ್ತಿತ್ತು. ಆ ಅದ್ಭುತ ಶಿಕ್ಷಕಿ ಎಲ್ಲಿದ್ದಾರೆಂಬುದು ಮನೆ ಮಾಲೀಕರಿಗೂ ತಿಳಿದಿರಲಿಲ್ಲ. ಅವರನ್ನು ಕಂಡುಹಿಡಿಯಲೇಬೇಕೆಂಬ ಹತಾಶೆಯ ಛಲದೊಂದಿಗೆ ಗಾಂಧಿಬಜಾರ್‌ನಿಂದ ಹೊರಟೆವು.

‘ದಿ ಹೋಮ್ ಸ್ಕೂಲ್’ ಅನ್ನು ಪ್ರಾರಂಭಿಸಿದ್ದು ಬಿಷಪ್ ಜಾನ್ ಇ ರಾಬಿನ್ಸನ್ ಅವರ ಪುತ್ರಿ ಶ್ರೀಮತಿ ರಾಬಿನ್ಸನ್. ತಂದೆಯ ಜೊತೆಗೆ ಕಂಟೋನ್ಮೆಂಟ್ ಪ್ರದೇಶದಲ್ಲಿ ವಾಸಿಸುತ್ತಿದ್ದ ಈ ಪುಟ್ಟ ಹುಡುಗಿ ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಯಾವುದೇ ಇಂಗ್ಲಿಷ್ ಶಾಲೆಯಿಲ್ಲ ಎಂಬುದನ್ನು ಅರಿತು, ಹೊಸ ಶಾಲೆ ಸ್ಥಾಪಿಸಲು ಬಸವನಗುಡಿಯನ್ನು ಆಯ್ಕೆ ಮಾಡಿಕೊಂಡರು.

ಮನೆಯಲ್ಲಿ ವಿಸ್ತರಣೆಯಾದ ಶಾಲೆಗೆ ‘ಹೋಮ್ ಸ್ಕೂಲ್’ ಎಂಬ ಹೆಸರನ್ನು ಆಯ್ಕೆ ಮಾಡಿಕೊಂಡರು. ಐದು ಮಕ್ಕಳೊಂದಿಗೆ ಶಾಲೆ ಪ್ರಾರಂಭವಾಯಿತು. ಅವರಲ್ಲಿ ದಿ. ವೆಂಕಟಾಚಲಂ ಒಬ್ಬರು. ಬಸವನಗುಡಿಯ ಬಾಡಿಗೆ ಕಟ್ಟಡದಲ್ಲಿ 83 ವರ್ಷ ಕಾರ್ಯನಿರ್ವಹಿಸಿದ ಶಾಲೆ 2010ರಲ್ಲಿ ಆ ಪ್ರದೇಶದಿಂದ ಬೇರೆಡೆಗೆ ಸ್ಥಳಾಂತರಗೊಂಡಿತು.

(ಮಕ್ಕಳ ಕ್ಷೇತ್ರದಲ್ಲಿ ವೃತ್ತಿನಿರತಳಾದ ನಾನು ಪೋಷಕರು ಮತ್ತು ಶಿಕ್ಷಕರ ಮೇಲೆ ವೈಯಕ್ತಿಕ ಅವಲಂಬನೆಯ ಮೌಲಿಕ ವ್ಯವಸ್ಥೆಯನ್ನು ನಂಬುತ್ತೇನೆ. ನನ್ನನ್ನು ಬೆಳೆಸಿದ ಅವಿಸ್ಮರಣೀಯ ಶಿಕ್ಷಕರಿಗಾಗಿ ಇಂದಿಗೂ ಪುಟ್ಟದೊಂದು ಪ್ರಾರ್ಥನೆ ಸಲ್ಲಿಸುತ್ತೇನೆ). ‘ಹೋಮ್ ಸ್ಕೂಲ್’ನಲ್ಲಿ ವಿಶೇಷವಾಗಿ ಏನಿದೆ? ನಮ್ಮ ಕುಟುಂಬದ ಎಲ್ಲಾ ಮಕ್ಕಳೂ ಇದೇ ಶಾಲೆಯಲ್ಲಿ ಓದಿದ್ದು. ಸಹೋದರ ನವೀನ್, ಸಹೋದರಿ ನಿಶಾ ಮತ್ತು ಮಗ ಆದರ್ಶ.

ಅಲ್ಲಿ ಪ್ರಾಥಮಿಕದಿಂದ ಶುರುವಾದ ನನ್ನ ಕಲಿಕೆ ಏಳನೇ ತರಗತಿಗೆ ಮುಗಿದಿತ್ತು. ಎರಡು ವರ್ಗಗಳಿದ್ದು ಎರಡರಲ್ಲೂ 25 ವಿದ್ಯಾರ್ಥಿಗಳು ಮಾತ್ರ ಇದ್ದರು. ಶಾಲೆಗೆ ಬೋಧಕರ ಆಯ್ಕೆಯನ್ನು ಎಚ್ಚರಿಕೆಯಿಂದ ಮಾಡಲಾಗುತ್ತಿತ್ತು. ಅವರಲ್ಲಿ ಹೆಚ್ಚಿನವರು ಬೋಧನೆಗೆ ಅತಿ ಬದ್ಧತೆಯುಳ್ಳ ‘ಮಿಸ್’ಗಳಾಗಿರುತ್ತಿದ್ದರು. ಅಸೆಂಬ್ಲಿ ಹಾಲ್‌ನಲ್ಲಿ ಶಾಲಾ ಪ್ರಾರ್ಥನೆಗೆ ಮಿಸ್ ಮಾರ್ಕರ್ ಪಿಯಾನೋ ನುಡಿಸುವ ಮೂಲಕ ದಿನ ಶುರುವಾಗುತ್ತಿತ್ತು.

ಶಾಲಾ ಮಕ್ಕಳನ್ನು ವಿವಿಧ ಮನೆಗಳಲ್ಲಿ ವಿಂಗಡಿಸಲಾಗಿತ್ತು- ಘನತೆ (ನೀಲಿ), ಪ್ರಾಮಾಣಿಕತೆ (ಹಸಿರು), ಧೈರ್ಯ (ಕೆಂಪು) ಮತ್ತು ನಿಷ್ಠೆ (ಹಳದಿ). ವರ್ಷದ ಕೊನೆಯಲ್ಲಿ ಅತ್ಯುತ್ತಮ ಮನೆ ಹೆಚ್ಚಿನ ಅಂಕಗಳನ್ನು ಮತ್ತು ಟ್ರೋಫಿಗಳನ್ನು ಪಡೆದುಕೊಳ್ಳುತ್ತಿತ್ತು. ಹೀಗೆ ನಾಯಕತ್ವ ಗುಣ ಮತ್ತು ಆರೋಗ್ಯಕರ ಸ್ಪರ್ಧೆ ನಮ್ಮೊಳಗೆ ಬೆಳೆಯುತ್ತಿತ್ತು.

ಶಾಲಾ ಆವರಣದಲ್ಲಿ ನಿವೃತ್ತ ಸೇನಾ ದಾದಿ ಶ್ರೀಮತಿ ಸಿಂಘಾರಮ್ ಅವರ ಮನೆಯಿತ್ತು. ಮಕ್ಕಳಿಗೆ ಗಾಯವಾದಾಗ ಮತ್ತು ಸಣ್ಣಪುಟ್ಟ ಸಮಸ್ಯೆಗಳಿದ್ದಾಗ ಅವರು ಚಿಕಿತ್ಸೆ ನೀಡುತ್ತಿದ್ದರು. ಅವರು ನಮ್ಮನ್ನು ತಮ್ಮ ಅಮೃತ ಹಸ್ತದಿಂದ ಆರೈಕೆ ಮಾಡುತ್ತಿದ್ದರು. ಇಂಗ್ಲಿಷ್ ಉಪಾಹಾರ ಸ್ಯಾಂಡ್‌ವಿಚ್‌ಅನ್ನು ಯಥೇಚ್ಛ ನೀಡುತ್ತಿದ್ದರು. ಕ್ಲಿನಿಕ್‌ನ ಹೊರಗೆ ಆಕೆ ಶಾಲಾ ಆವರಣದ ಸ್ವಚ್ಛತೆಯ ಮೇಲ್ವಿಚಾರಕಿಯಾಗಿದ್ದರು. ಈ ವಿಚಾರದಲ್ಲಿ ಅವರದು ಕಟ್ಟುನಿಟ್ಟಿನ ಶಿಸ್ತು.

ಆ ದಿನಗಳಲ್ಲಿ ನಾವು ಕಸವನ್ನು ಎಲ್ಲೆಂದರಲ್ಲಿ ಬಿಸಾಡುವಂತಿರಲಿಲ್ಲ. ಕಸದ ಡಬ್ಬಿ ಬಳಸಬೇಕಿತ್ತು. ಮಕ್ಕಳು ಚಾಕೊಲೇಟ್ ಹಂಚುವ ಮೂಲಕ ಜನ್ಮದಿನ ಆಚರಿಸಿಕೊಳ್ಳುತ್ತಿದ್ದರು. ಹಾಗೆ ಚಾಕೊಲೇಟ್ ತಿಂದ ಬಳಿಕ ಅದರ ರಾ್ಯಾಪರ್‌ಅನ್ನು ಕಸದ ಡಬ್ಬಿ ಕಾಣುವವರೆಗೂ ಸಮವಸ್ತ್ರದ ಜೇಬಿನೊಳಗೆ ಇರಿಸಿಕೊಳ್ಳುತ್ತಿದ್ದೆವು. ಆವರಣದಲ್ಲಿ ಅನೇಕ ಪ್ರಾಣಿ ಪಕ್ಷಿಗಳಿದ್ದವು. ನಾವು ಸರದಿಯಲ್ಲಿ ಅವುಗಳನ್ನು ಉಪಚರಿಸುತ್ತಿದ್ದೆವು.

ಶುಕ್ರವಾರದ ದಿನಗಳಂದು ನಡೆಯುತ್ತಿದ್ದ ರೆಡ್‌ಕ್ರಾಸ್ ಚಳವಳಿಯಲ್ಲಿ ಭಾಗವಹಿಸುತ್ತಿದ್ದೆವು. ವರ್ಷವಿಡೀ ಸಂಗ್ರಹಿಸಿದ ಚಿಕ್ಕ ಪ್ರಮಾಣದ ಅನುದಾನ ಮತ್ತು ಬಟ್ಟೆಗಳು ಹಲಸೂರಿನ ರೆಡ್‌ಕ್ರಾಸ್ ಹೋಮ್ ಮೂಲಕ ಯುದ್ಧ ಹೀರೊಗಳಿಗೆ ವಿತರಣೆಯಾಗುತ್ತಿತ್ತು. ಒಮ್ಮೆ ನಾನು ಮತ್ತು ರಶ್ಮಿ ಈ ಹೋಮ್‌ಗೆ ಭೇಟಿ ನೀಡಿದ ಸಮಯದಲ್ಲಿ, ಅಲ್ಲಿ ಅಂಗಾಂಗಗಳು ಛಿದ್ರಗೊಂಡು ಮಲಗಿದ್ದ ಎರಡನೇ ಮಹಾಯುದ್ಧದ ಸೈನಿಕರೊಬ್ಬರ ದಾರುಣ ಸ್ಥಿತಿ ಹೃದಯ ಕಲಕಿತು. ಕುಟುಂಬಕ್ಕೆ ಅವರು ಬೇಡವಾಗಿದ್ದರು. ಒಬ್ಬಂಟಿಯಾಗಿದ್ದರು.

ನಾವು ಶಿಕ್ಷಕಿ ಶಾಂತಾ ಅವರಿಗೆ ಹೇಳಿ ಈ ಸೈನಿಕರಿಗೆ ಮನರಂಜನೆ ನೀಡಬೇಕು ಎಂದು, ಕೂಡಲೇ ಆ ವಿಶಿಷ್ಟ ದಿನಕ್ಕೆ ಸಿದ್ಧತೆ ಪ್ರಾರಂಭಿಸಿದೆವು. ಇಡೀ ಒಂದು ದಿನವನ್ನು ಅವರಿಗೆ ಮನರಂಜನೆ ನೀಡಲು ವಿನಿಯೋಗಿಸಿದೆವು. ನಮ್ಮ ತರಗತಿ ಅತ್ಯುತ್ಸಾಹದಿಂದ ‘ದಿ ಬಿಷಪ್ಸ್ ಕ್ಯಾಂಡಲ್ ಸ್ಟಿಕ್ಸ್’ ಪ್ರದರ್ಶಿಸಿತು. ಮನೆಯಲ್ಲಿ ಮಾಡಿದ ಅಡುಗೆ ಕೊಂಡೊಯ್ದದ್ದು ಮಾತ್ರವಲ್ಲ, ನಮ್ಮ ಪುಟ್ಟ ಕೈಗಳಿಂದ ಆ ಸೈನಿಕರಿಗೆ ತುತ್ತು ತಿನಿಸಿದ್ದೆವು. ಆಗ ಅವರ ಮುಖದಲ್ಲಿ ಹೊಳೆಯುತ್ತಿದ್ದ ಸಂತಸವನ್ನು ಪ್ರಪಂಚದ ಯಾವ ಸಂಪತ್ತೂ ತಂದುಕೊಡಲಾರದು. ಆದರೆ ಆನಂತರ ಆ ಮನೆಗೆ ನಾನು ಮತ್ತೆ ಹೋಗಲೇ ಇಲ್ಲ ಎಂದು ಹೇಳಲು ದುಃಖವಾಗುತ್ತದೆ. ಇಂದಿಗೂ ನಾನು ಮನದೊಳಗೆ ಹೇಳಿಕೊಳ್ಳುತ್ತಿರುತ್ತೇನೆ, ಅಲ್ಲಿಗೆ ಹೋಗಬೇಕು ಎಂದು!

ಪ್ರತಿ ಶನಿವಾರ ಉದಂಕ್‌ರಾಜ್ (ಇತ್ತೀಚಿನವರೆಗೆ ಬಂದೂಕಿನ ಅಂಗಡಿ ನಡೆಸುತ್ತಿದ್ದರು) ಮತ್ತು ಕಾಶಿನಾಥ್ ಜೊತೆಗೂಡಿ ಬಾಲಕರ ಸ್ಕೌಟ್/ಮರಿಸ್ಕೌಟ್ ನಿರ್ವಹಿಸುತ್ತಿದ್ದರೆ, ಶಾಂತಾ, ಸರೋಜಾ, ಫರೀದಾ ಮತ್ತು ಮಲ್ಲಿಕ್ ಬುಲ್‌ಬುಲ್ಸ್/ಗೈಡ್ಸ್‌ಗಳನ್ನು ನಿಭಾಯಿಸುತ್ತಿದ್ದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಚಳವಳಿಯ ವಿಸ್ತರಣೆಯಾದ ಇದರಲ್ಲಿ ಜನರ ಮೇಲೆ ಅನಿಯಮಿತ ಕರುಣೆ ತೋರುವುದು, ಸಂಕಷ್ಟದಲ್ಲಿರುವ ಮನುಷ್ಯ ಮತ್ತು ಪ್ರಾಣಿಗಳಿಗೆ ಸಹಾಯ ಮಾಡುವುದು ಮುಂತಾದ ವಿಷಯಗಳನ್ನು ಕಲಿಸುತ್ತಿದ್ದರು.

1960ರ ನಮ್ಮ ಬ್ಯಾಚ್ ಮಿಸ್ ಶಾಂತಾ ಅವರನ್ನು ತುಂಬಾ ಇಷ್ಟಪಡುತ್ತಿತ್ತು. ಏಕೆಂದರೆ ನಮ್ಮಂದಿಗೆ ಅವರೂ ಏಳನೇ ತರಗತಿ ಶಿಕ್ಷಕಿಯಾಗಿ ಬಡ್ತಿ ಪಡೆದಿದ್ದರು. ನಾವು ಮುಂದೆ ಹೋದಾಗಾಲೂ ಏಳನೇ ತರಗತಿಯಲ್ಲಿಯೇ ಉಳಿದಿದ್ದರು. ಅವರು ನಮ್ಮ ಅತಿ ದೀರ್ಘಕಾಲದ ಕ್ಲಾಸ್ ಟೀಚರ್!

ಎಂಟು ವರ್ಷದ ಹಿಂದೆ ಮಿಸ್ ಶಾಂತಾ ತಮ್ಮ ಸೋದರಳಿಯ ರಜನಿಕಾಂತ್‌ಅವರ ಮಗುವನ್ನು ನನ್ನ ಬಳಿ ಕಳುಹಿಸಿದ್ದರು. ಅವರು ತಮ್ಮನ್ನು ಮಿಸ್ ಶಾಂತಾ ಅವರ ಸೋದರಳಿಯ ಎಂದು ಪರಿಚಯ ಮಾಡಿಕೊಂಡಾಗ ನಾನು ಎಲ್ಲವನ್ನೂ ಮರೆತು ಅವರ ಕುರಿತ ವಿವರಗಳನ್ನು ಕೇಳತೊಡಗಿದೆ. ಅವರಿನ್ನೂ ಜೀವಂತವಾಗಿದ್ದಾರೆ ಎನ್ನುವುದನ್ನು ತಿಳಿದು ತುಂಬಾ ನಿರಾಳವಾದೆ. ಮರುದಿನವೇ ನಾನು ಮತ್ತು ರಶ್ಮಿ ಸೀರೆ ತೆಗೆದುಕೊಂಡು ಅವರ ಮನೆಗೆ ತೆರಳಿದೆವು.

ಅವರು ತಮ್ಮ ಅವಿವಾಹಿತ ಅಣ್ಣನೊಂದಿಗೆ ವಾಸಿಸುತ್ತಿದ್ದು ಅವರ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಿದ್ದಾರೆ. ನಮ್ಮನ್ನು ಭೇಟಿ ಮಾಡಿದ್ದಕ್ಕೆ ಹರ್ಷಗೊಂಡ ಅವರು ನಮ್ಮ ಕಾಣಿಕೆಯನ್ನು ಸ್ವೀಕರಿಸಲು ಒಪ್ಪಲಿಲ್ಲ. ಬಲವಂತ ಮಾಡಿ ಕೊಡಬೇಕಾಯಿತು. ತಮ್ಮ ಸಂತೋಷವೇನಿದ್ದರೂ ಹೋಮ್ ಸ್ಕೂಲ್‌ನ ಮಕ್ಕಳೊಂದಿಗೆ ಎಂದು ತಮ್ಮ ಕಥೆಯನ್ನು ತೆರೆದಿಟ್ಟರು. ತಮ್ಮ ವಯಸ್ಕ ಅಣ್ಣನನ್ನು ನೋಡಿಕೊಳ್ಳುವ ಸಲುವಾಗಿ ಅವಧಿಗೂ ಮುನ್ನವೇ ನಿವೃತ್ತಿ ತೆಗೆದುಕೊಂಡರು. ಅವರು ತ್ಯಾಗದ ಮೂರ್ತ ರೂಪ.

ಪ್ರತಿ ವರ್ಷ ಶಾಲೆಯಲ್ಲಿ ಕ್ರಿಸ್‌ಮಸ್ ಆಚರಣೆ ನಡೆಯುತ್ತಿತ್ತು. ಆಗ ಹಳೆಯ ವಿದ್ಯಾರ್ಥಿಗಳನ್ನೆಲ್ಲಾ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತಿತ್ತು. ಆರಂಭದ ವರ್ಷಗಳಲ್ಲಿ ರೋಡ್ರಿಗಸ್ ಕ್ರಿಸ್‌ಮಸ್ ಕೀರ್ತನೆ ನಡುವೆ ಸಾಂಟಾ ಕ್ಲಾಸನ ವೇಷ ಧರಿಸುತ್ತಿದ್ದರು. ನಮಗೆಲ್ಲಾ ಉಡುಗೊರೆಗಳು ಸಿಗುತ್ತಿದ್ದವು. ಒಮ್ಮೆ ಮಿಸ್ ಸರೋಜಾ ಅವರನ್ನು ನಾವು ಭೇಟಿ ಮಾಡಿದಾಗ, ಅವರನ್ನು ಭೇಟಿ ಮಾಡಬೇಕೆಂದು ಉದ್ದೇಶಿಸಿದ್ದು ಮತ್ತು ಅವರಿಗೆ ಸೀರೆಯನ್ನು ಉಡುಗೊರೆಯಾಗಿ ನೀಡಲು ಬಯಸಿದ್ದನ್ನು ಹೇಳಿಕೊಂಡೆವು.

ಅವರು ತಮ್ಮ ದೂರವಾಣಿ ಸಂಖ್ಯೆಯನ್ನು ನೀಡಿದರು. ಅದನ್ನು ಜೋಪಾನವಾಗಿ ಬರೆದಿಟ್ಟುಕೊಂಡೆ. ಅವರಿಗಾಗಿ ಒಂದು ಸೀರೆ ಖರೀದಿಸಿ, ಭೇಟಿಯ ಸಲುವಾಗಿ ಅವರ ದೂರವಾಣಿ ಸಂಖ್ಯೆಗೆ ಕರೆ ಮಾಡಿದರೆ, ಆ ಕಡೆಯಿಂದ ಬಂದ ಉತ್ತರ ‘ಸಂಖ್ಯೆ ಚಾಲ್ತಿಯಲ್ಲಿ ಇಲ್ಲ’ ಎಂದು. ಕೂಡಲೇ ನಾನು ಹೋಮ್ ಸ್ಕೂಲ್‌ನ ಹೊಸ ಕಟ್ಟಡಕ್ಕೆ ಮತ್ತು ರಶ್ಮಿಗೆ ಕರೆ ಮಾಡಿದೆ. ಯಾರ ಬಳಿಯೂ ಅವರ ಫೋನ್ ನಂಬರ್ ಇರಲಿಲ್ಲ. ಸೀರೆಯ ಪ್ಯಾಕೆಟ್ ಹಿಡಿದುಕೊಂಡು ಅಳತೊಡಗಿದೆ.

ಕಣ್ಣೀರು ಒರೆಸಿಕೊಂಡು ಹೊರ ರೋಗಿಗಳ ವಿಭಾಗದ ದಿನದ ರೌಂಡ್ಸ್ ಸಲುವಾಗಿ ಹೊರಟೆ. ನಾನು ಅತ್ತಿದ್ದನ್ನು ಡಾ. ಅನಿತಾ ಕೂಡಲೇ ಗ್ರಹಿಸಿದರು. ನಾನು ನನ್ನ ಶಿಕ್ಷಕಿಯನ್ನು ಪತ್ತೆಹಚ್ಚಲು ಸಾಧ್ಯವಾಗದ ದುಃಖವನ್ನು ಹಂಚಿಕೊಂಡೆ. ಎರಡು ನಿಮಿಷದಲ್ಲಿ ಆಕೆ ವಿಳಾಸವನ್ನು ನನ್ನ ಕೈಗಿತ್ತರು! ಆಕೆಯ ತಾಯಿ ಗೀತಾ ಮೂರ್ತಿ ಬಿಎಸ್‌ಎನ್‌ಎಲ್‌ನಲ್ಲಿ ಕೆಲಸ ಮಾಡುತ್ತಿದ್ದರಿಂದ ಈ ಕೆಲಸ ಸುಲಭವಾಗಿ ಸಾಧ್ಯವಾಯಿತು. ರಾಘವೇಂದ್ರ ಕಾಲೊನಿಯಲ್ಲಿರುವ ನಮ್ಮ ಶಿಕ್ಷಕಿಯನ್ನು ಹುಡುಕುವ ಸಲುವಾಗಿ ಬೇಗನೆ ಕೆಲಸ ಮುಗಿಸಿದೆವು.

ಕಿರಿದಾದ ಗಲ್ಲಿಯಲ್ಲಿ ಕಾರು ನಿಲ್ಲಿಸಿ ಬೇರೆ ಬೇರೆ ದಿಕ್ಕಿನಲ್ಲಿ ನುಗ್ಗಿದೆವು. ಇದ್ದಕ್ಕಿದ್ದಂತೆ ಮಳೆ ಶುರುವಾಯಿತು. ನನ್ನ ಶಿಕ್ಷಕಿಯ ವಿಳಾಸವನ್ನು ಒಬ್ಬ ಮಹಿಳೆಯ ಬಳಿ ವಿಚಾರಿಸಿದೆ. ಅವರು ಮತ್ತೊಂದು ಓಣಿಯ ಕಡೆ ಕೈತೋರಿಸಿದರು. ಕಣ್ಣೀರು ಸಣ್ಣನೆ ಪಸರುತ್ತಿತ್ತು. ಓಡುತ್ತಲೇ ಹೋದೆ. ಕೊನೆಗೆ ಸರೋಜಾ ಮಿಸ್ ಭಜನೆ ನಡೆಸುತ್ತಿದ್ದ ಸ್ಥಳ ಸಿಕ್ಕಿತು. ಅಲ್ಲಿ ಕಾಮಗಾರಿ ಕೆಲಸ ಮಾಡುತ್ತಿದ್ದವರನ್ನು ವಿಚಾರಿಸಿದಾಗ ಅವರು ಇಲ್ಲಿಯೇ ವಾಸಿಸುತ್ತಿದ್ದರು ಎಂಬುದು ತಿಳಿಯಿತು. ಕಾಲುಗಳು ಜೋಮು ಹಿಡಿದು ಭಾವುಕಳಾಗಿ ಜರ್ಜರಿತಗೊಂಡೆ.

ಮಳೆಯಿಂದ ರಕ್ಷಣೆ ಪಡೆಯಲು ಒಂದು ಛಾವಣಿ ಕೆಳಗೆ ನಿಂತುಕೊಂಡೆ. ಆಗಷ್ಟೇ ಕಾರಿನಿಂದ ಇಳಿದ ವ್ಯಕ್ತಿಯೊಬ್ಬರು ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಾ, ಕಟ್ಟಡ ಕಾಮಗಾರಿ ನಡೆಯುತ್ತಿದ್ದ ಸ್ಥಳದತ್ತ ಸಾಗತೊಡಗಿದರು. ಅವರತ್ತ ಧಾವಿಸಿ, ಮಿಸ್ ಸರೋಜಾ ಇರುವ ಜಾಗದ ಬಗ್ಗೆ ಕೇಳಿದೆ. ಅವರು ತಾನು ಅವರ ಸೋದರಳಿಯ ಪ್ರಶಾಂತ್ ಎಂದು ಪರಿಚಯ ಮಾಡಿಕೊಂಡು, ಅವರು ಇರುವ ಸ್ಥಳದ ಬಗ್ಗೆ ತಿಳಿಸಿದರು. ನನ್ನ ಕಣ್ಣೀರು ನೋಡಿ (ಮಳೆಯಲ್ಲಿ ನೆಂದಿರುವುದರಿಂದ ಕಣ್ಣೀರೆಂದು ತಿಳಿಯುವುದಿಲ್ಲ ಎಂದು ಭಾವಿಸಿದ್ದೆ!) ತಕ್ಷಣವೇ ಅವರನ್ನು ಫೋನ್‌ನಲ್ಲಿ ಸಂಪರ್ಕಿಸಿದರು, ಆದರೆ ನನ್ನಲ್ಲಿ ಮಾತು ಹೊರಡಲಿಲ್ಲ!

ಮನೆಯನ್ನು ಪತ್ತೆಹಚ್ಚಲಾಗದೆ ನಿರಾಸೆಗೊಂಡಿದ್ದ ಅನಿತಾರನ್ನು ಕೂಡಿಕೊಂಡೆ. ನನ್ನ ಕಥೆಯನ್ನು ಹೇಳಿದಾಗ ಆಕೆ ಸಂತೋಷಗೊಂಡರು. ಚಾಮರಾಜಪೇಟೆಯ ರಾಘವೇಂದ್ರ ಕಾಲೊನಿಯಿಂದ ವಿದ್ಯಾಪೀಠ ಸರ್ಕಲ್‌ಗೆ ಉಕ್ಕುತ್ತಿದ್ದ ಭಾವನೆಗಳನ್ನು ಹತ್ತಿಕ್ಕಲಾಗದೆ ಪಯಣಿಸಿದೆ. ಅದೇ ವೇಳೆ ರಶ್ಮಿಗೆ ಕೂಡ ಮಾಹಿತಿ ನೀಡಿದೆ. ನಾವೆಲ್ಲರೂ ಸರೋಜಾ ಮಿಸ್ ಮನೆಯಲ್ಲಿ ಸೇರಿಕೊಂಡೆವು. ಅದು ನಿಜಕ್ಕೂ ಶುಭ ಮುಕ್ತಾಯವಾಗಿತ್ತು! ತಡೆಯಿಲ್ಲದೆ ಮಾತನಾಡುತ್ತಲೇ ಕುಳಿತೆವು.

43 ವರ್ಷದ ಹಳೆಯ ವಿದ್ಯಾರ್ಥಿನಿಯರನ್ನು ಭೇಟಿ ಮಾಡಿದಾಗ 82 ಹರೆಯದ ಶಿಕ್ಷಕಿ ಆನಂದತುಂದಿಲರಾಗಿದ್ದರು. ಅವರು ಮತ್ತೆ ನಮ್ಮಲ್ಲಿ ಸಂತೋಷ ಮತ್ತು ನ್ಯಾಯಪರತೆಯ ಗುಣಗಳನ್ನು ತುಂಬಿಸಿದರು. ಅನಿತಾ ಐದು ದಶಕದ ಈ ಗುರು ಶಿಷ್ಯ ಸಂಬಂಧವನ್ನು ನಂಬಲು ಸಾಧ್ಯವಾಗದಂತೆ ನಿಂತಿದ್ದರು. ನಮ್ಮ ಮುಂದಿನ ಪಯಣ ಮಿಸ್ ಶಾಂತಾ ಅವರತ್ತ. ನಾವು ಅವರ ಮೆಚ್ಚಿನ ವಿದ್ಯಾರ್ಥಿನಿಯರಾಗಿದ್ದರಿಂದ ಅವರ ಸಂಭ್ರಮ ಮತ್ತಷ್ಟು ಹೆಚ್ಚಿತ್ತು. ಅವರ ಮನೆಯಿಂದ ಹೊರಡಲು ನಮಗೆ ಇಷ್ಟವಿರಲಿಲ್ಲವಾದರೂ, ನಮ್ಮ ಬದುಕಿನ ಬದ್ಧತೆಗಳ ಸಲುವಾಗಿ ಹೊರಡಬೇಕಾಯಿತು.

ನಮಗೆ ಉಡುಗೊರೆಯ ಜೊತೆ ಅರಿಶಿಣ ಕುಂಕುಮ ನೀಡಿದರು. ತಮ್ಮ ಪ್ರೀತಿಯ ವಿದ್ಯಾರ್ಥಿನಿಯರಿಗಾಗಿ ಬೆಳ್ಳಿಯ ಉಡುಗೊರೆಗಳನ್ನು ತಂದಿದ್ದರು. ನಾವು ಅದನ್ನು ನಿರಾಕರಿಸಿದಾಗ ನಮ್ಮ ‘ಬೇಡ’ವನ್ನು ಅವರು ಒಪ್ಪಲಿಲ್ಲ. ಅವರು ನಮಗಾಗಿ ಆ ಉಡುಗೊರೆಯನ್ನು ಎಂಟು ವರ್ಷದ ಹಿಂದೆ ಅಕ್ಷಯ ತೃತೀಯ ದಿನದಂದು ಖರೀದಿಸಿ ನಮಗಾಗಿ ನೀಡಲು ಕಾದಿದ್ದರು. ದಯವಿಟ್ಟು ಕ್ಷಮಿಸಿ ಮಿಸ್, ನಿಮ್ಮನ್ನು ಬಂದು ನೋಡಲು ಇಷ್ಟು ದೀರ್ಘ ಸಮಯ ತೆಗೆದುಕೊಂಡಿದ್ದಕ್ಕೆ.

ದಿ. ವೆಂಕಟಾಚಲಂ ಶಾಲೆಯ ಆಡಳಿತವನ್ನು ಹತೋಟಿಯಲ್ಲಿಟ್ಟುಕೊಂಡು ತಮ್ಮ ಇಡೀ ಜೀವಿತಾವಧಿಯನ್ನು ಅನೇಕ ಕಾನೂನು ಸಮರಗಳನ್ನು ನಡೆಸಲು ವಿನಿಯೋಗಿಸಿ ಅದನ್ನು ಹಳೆಯ ಆವರಣದಲ್ಲಿಯೇ ಉಳಿಸಿಕೊಂಡು ಬಂದಿದ್ದರು. ಆದರೆ ಕೊನೆಗೆ ಶೋಚನೀಯವಾಗಿ ಸೋತು 2006ರಲ್ಲಿ ಕೊನೆಯುಸಿರೆಳೆದರು. ಅವರ ಗುರಿ ಈಡೇರಲಿಲ್ಲ.

ಬ್ಯಾಂಕ್ ಉದ್ಯೋಗಿಯಾಗಿದ್ದ ಅವರ ಪತ್ನಿ, ಹಳೆಯ ಜಾಗವನ್ನು ಅದರ ಮಾಲೀಕರಿಗೆ ಬಿಟ್ಟುಕೊಟ್ಟ ಬಳಿಕ ಶಾಲೆಯನ್ನು ಅದರ ಉತ್ಕೃಷ್ಟ ತತ್ವಗಳೊಂದಿಗೆ ಅಲ್ಲಿಯೇ ಸಮಾಧಿ ಮಾಡಿ, ಹೋಮ್‌ಸ್ಕೂಲ್‌ನ ಆತ್ಮವನ್ನು ಹೊಸ ಆವರಣಕ್ಕೆ ಕೊಂಡೊಯ್ಯಲು ನಿರ್ಧರಿಸಿದರು. ತಮ್ಮ ಜೀವಿತಾವಧಿಯ ಉಳಿತಾಯವನ್ನೆಲ್ಲಾ ಅದಕ್ಕಾಗಿ ವಿನಿಯೋಗಿಸಿದ್ದಲ್ಲದೆ, ತಮ್ಮ ಬಳಿಯಿದ್ದ ಏಕೈಕ ಸ್ಥಿರಾಸ್ತಿಯನ್ನು ಹೋಮ್ ಸ್ಕೂಲ್‌ನ ಹೊಸ ಕಟ್ಟಡ ಸ್ಥಾಪನೆಗೆ ಒತ್ತೆಯಿಟ್ಟರು. ನಮ್ಮ ಕುಟುಂಬವೂ ಒಳಗೊಂಡಂತೆ ಅನೇಕ ಹಳೆಯ ವಿದ್ಯಾರ್ಥಿಗಳು ಹೊಸ ಶಾಲೆ ನಿರ್ಮಾಣಕ್ಕೆ ಸಹಾಯ ಮಾಡಿದರು.

1979ರಲ್ಲಿ ನನ್ನ ಸಹೋದರಿ ನಿಶಾ ಬೆನಕಪ್ಪ ತೀರಿಕೊಂಡಾಗ, ಅಪ್ಪಾಜಿ ಆಕೆಯ ನೆನಪಿನಲ್ಲಿ ಶಾಲಾ ಗಂಟೆಯನ್ನು ನೀಡಿದ್ದರು. ಇತ್ತೀಚೆಗೆ ನಡೆದ ಸಂಸ್ಥಾಪಕರ ದಿನದಂದು (ಜುಲೈ 30) ನಾನು ಮುಖ್ಯ ಅತಿಥಿಯಾಗಿ ಆಹ್ವಾನಿತಳಾಗಿದ್ದೆ. ನಿಜಕ್ಕೂ ನನಗೆ ದೊರೆತ ವಿಶೇಷ ಗೌರವವದು. 80ಕ್ಕೂ ಹೆಚ್ಚು ವಯಸ್ಸಿನ, ನಾಲ್ಕು ದಶಕಗಳಿಗೂ ಹೆಚ್ಚ ಕಾಲ ಸೇವೆ ಸಲ್ಲಿಸಿದ ಅವರ ಸಂಬಳ ನಿವೃತ್ತಿ ವೇಳೆಗೆ ಇದ್ದದ್ದು 9 ಸಾವಿರ ರೂಪಾಯಿಗೂ ಕಡಿಮೆ. ಆದರೂ ಅವರು ಸಂತುಷ್ಟ ಜೀವನ ನಡೆಸುತ್ತಿದ್ದಾರೆ.

ಆತ್ಮೀಯ ವಿದ್ಯಾರ್ಥಿಗಳೆ, ನಿಮ್ಮ ಶಿಕ್ಷಕರನ್ನು ಭೇಟಿ ಮಾಡುವುದನ್ನು ತಡಮಾಡಬೇಡಿ. ‘ಗುರುವಂದನೆ’ ಎನ್ನುವುದು ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗೆ ನೀಡಬಹುದಾದ ಅತಿ ದೊಡ್ಡ ಉಡುಗೊರೆ. ಫೋನ್ ಕೈಗೆತ್ತಿಕೊಂಡು ನಿಮ್ಮ ಶಿಕ್ಷಕರಿಗೊಂಡು ಹಲೋ ಹೇಳಿ. ಒಂಟಿತನ, ಅನಾರೋಗ್ಯ ಮತ್ತು ವೃದ್ಧಾಪ್ಯ ಅವರ ಏಕೈಕ ಸಂಗಾತಿಗಳು. ನಾನು ಅವರನ್ನು ಇನ್ನೂ ಹೆಚ್ಚು ಸಮಯ ಭೇಟಿ ಮಾಡಿ ಅವರ ಆಶೀರ್ವಾದ ಪಡೆದುಕೊಳ್ಳಲು ನಿರ್ಧರಿಸಿದ್ದೇನೆ. ಹೋಮ್ ಸ್ಕೂಲ್ ನ ಈಗಿನ ಪ್ರಾಂಶುಪಾಲರಾದ ಶ್ರೀಮತಿ ವೆಂಕಟಾಚಲಂ ಅವರನ್ನು 9880022433, ಸರೋಜಾ ಮಿಸ್ ಅವರನ್ನು 26691497 ಮತ್ತು ಶಾಂತಾ ಮಿಸ್ ಅವರನ್ನು 26711721 ದೂರವಾಣಿ ಸಂಖ್ಯೆಯಲ್ಲಿ ಸಂಪರ್ಕಿಸಬಹುದು.

ನಮ್ಮಂದಿಗೆ ಕುಳಿತಿದ್ದ ಡಾ. ಅನಿತಾ ನಮ್ಮ ಭಾವುಕತೆ ನೋಡಿ ಆಶ್ಚರ್ಯಚಕಿತರಾಗಿದ್ದರು. ‘ಮೇಡಂ, ಅವರ ದೇಹ ಸೊರಗಿದ್ದರೂ ಇನ್ನೂ ಯೌವನದಲ್ಲಿದ್ದಂತೆ ಕಾಣುತ್ತಿದ್ದಾರೆ. ಅವರ ಕುರಿತು ಬರೆಯಿರಿ’ ಎಂದು ಹೇಳಿದರು. ಇದು ನನ್ನ ಶಿಕ್ಷಕರಿಗೆ ಸಲ್ಲಿಸುವ ಗೌರವದ ಕಾಣಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT