<p>ಬಸವಣ್ಣನವರ ಬಹುತೇಕ ವಚನಗಳು ಸಾಹಿತ್ಯಕವಾಗಿಯೂ ಮುಖ್ಯವಾಗುತ್ತವೆ. ಈ ವಚನಗಳು ಪ್ರಾಯೋಗಿಕ ವಿಮರ್ಶೆಯ ಅತ್ಯುತ್ತಮ ಮಾದರಿಗಳು ಕೂಡ. ಪದಬಂಧ ಮತ್ತು ಅರ್ಥಗಂಧಗಳ ಸಾಮಾನ್ಯ ಸಂಬಂಧದ ಅದ್ಭುತ ಸಾಮರಸ್ಯಕ್ಕೆ ಇವು ಉದಾಹರಣೆಗಳು.<br /> <br /> ಶಬ್ದಾರ್ಥ ಸೌಹಾರ್ದದ ಹುಡುಕಾಟ ಕಾವ್ಯ ರಚನೆಯಲ್ಲಿ ಒಂದು ಸಾಮಾನ್ಯ ಪ್ರಕ್ರಿಯೆ. ಬಸವಣ್ಣನವರ ವಚನಗಳಲ್ಲಿ ಪದ ಮತ್ತು ಅರ್ಥ, ಅಂದರೆ ಅಭಿವ್ಯಕ್ತಿ ಮತ್ತು ಅನುಭವ ಒಟ್ಟಿಗೆ ಜನ್ಮ ತಳೆಯುವುದನ್ನು ನೋಡುತ್ತೇವೆ. <br /> <br /> ಅರ್ಥದಾಚೆಯ ಅರ್ಥಕ್ಕೂ ಈ ವಚನಗಳು ಬೆಳೆಯುತ್ತವೆ. ವಚನಗಳು ಸಾಮಾಜಿಕ ಆಂದೋಲನದ ಉಪ ಉತ್ಪತ್ತಿ ಎಂಬುದು ಒಂದು ಸಾಮಾನ್ಯ ಅಭಿಪ್ರಾಯ. ಇದರ ಭಾಗವೇ ಆದ ಬಸವಣ್ಣನವರ ವಚನಗಳು ಸೃಜನಶೀಲ ಪ್ರತಿಭೆಯ ಶಿಖರ ಸ್ಥಿತಿಯವು ಎನ್ನುವುದಕ್ಕೆ ಪ್ರಸ್ತುತ ವಚನ ಒಂದು ನಿದರ್ಶನ:<br /> <br /> ವ್ಯಾಧನೊಂದು ಮೊಲನ ತಂದರೆ<br /> ಸಲುವ ಹಾಗಕ್ಕೆ ಬಿಲಿವರಯ್ಯ<br /> ನೆಲನಾಳ್ದನ ಹೆಣನೆಂದರೆ<br /> ಒಂದಡಕೆಗೆ ಕೊಂಬವರಿಲ್ಲ ನೋಡಯ್ಯ<br /> ಮೊಲನಿಂದ ಕರಕಷ್ಟ ನರನ ಬಾಳುವೆ!<br /> ಸಲೆ ನಂಬೊ ನಮ್ಮ ಕೂಡಲ ಸಂಗಮದೇವನ<br /> <br /> ಬಸವಣ್ಣನವರ ವಚನವೆಂದು ಅಂಕಿತದಿಂದಲೇ ಗೊತ್ತಾಗುತ್ತದೆ. ಬಸವಣ್ಣನವರ ಬಹುಮುಖ್ಯ ವಚನಗಳಲ್ಲಿ ಇದೂ ಒಂದು; ನಿರ್ದಿಷ್ಟ ಜೀವನ ತತ್ತ್ವವನ್ನೂ ಅಸ್ತಿತ್ವದ ಪ್ರಶ್ನೆಯನ್ನೂ ಇದು ಎತ್ತುವುದು.<br /> <br /> ವಚನವನ್ನು ನೋಡಿದರೆ ಒಂದೆರಡು ಸಂಸ್ಕೃತ ಪದಗಳನ್ನು ಬಿಟ್ಟರೆ, ಇಡೀ ರಚನೆ ಅಚ್ಚಗನ್ನಡ ಪದಗಳಿಂದಾದುದೆಂಬುದು ಗೊತ್ತಾಗುತ್ತದೆ. ಹನ್ನೆರಡನೆಯ ಶತಮಾನದ್ದೆಂದು ಮರೆತರೆ ನಿನ್ನೆ ಮೊನ್ನೆಯ ರಚನೆಯಂತೆ, ಆಧುನಿಕ ಕವನದಂತೆ ಭಾಸವಾಗುವುದು. ಆಡುಭಾಷೆಯ ಅನನ್ಯ ಅಭಿವ್ಯಕ್ತಿ ಎಂದರೂ ಆದೀತು.<br /> <br /> ವಚನದ ಕನ್ನಡ ಬಸವಣ್ಣನವರ ಕಾಲದ ಕನ್ನಡವೇ. ಒಂದೂವರೆ ಶತಮಾನ ಹಿಂದಕ್ಕೆ ಹೋದರೆ ಪಂಪರನ್ನಾದಿಗಳ ಕಾವ್ಯಗಳು ಸಿಗುತ್ತವೆ. ಅವರ ಭಾಷೆ ಅವರ ಕಾಲದ ಭಾಷೆಯಲ್ಲ. ಆಶ್ಚರ್ಯವೆನ್ನುವಂತೆ ಮಾರ್ಗ-ದೇಸಿಗಳ ಮಿಲನವನ್ನೂ, ಸಂಸ್ಕೃತ-ಕನ್ನಡ ಸಮನ್ವಯವನ್ನೂ ಅವರ ಕಾವ್ಯಗಳಲ್ಲಿ ಕಾಣುತ್ತೇವೆ.<br /> <br /> ಒಂದು ಕಾವ್ಯಭಾಷೆಯನ್ನು ಸೃಷ್ಟಿಸಿಕೊಂಡಿರುವುದು ಈ ಪರಿಸ್ಥಿತಿಗೆ ಕಾರಣ. ಇದಕ್ಕೂ ಹಿಂದಕ್ಕೆ ಹೋದರೆ ಏಳನೇ ಶತಮಾನದ ಕಪ್ಪೆ ಅರಭಟ್ಟನ ಶಾಸನದ `ಸಾಧುಗೆ ಸಾಧು ಮಾಧುರ್ಯಂಗೆ ಮಾಧುರ್ಯಂ~ ಎಂಬ ತ್ರಿಪದಿ ಸಿಗುತ್ತದೆ. ಇದರ ಭಾಷೆ ಕೂಡ ಆಧುನಿಕವೆನ್ನುವಂತಿದೆ. ಆದ್ದರಿಂದ ಬಸವಣ್ಣನವರ ಭಾಷೆಯೇ ಹತ್ತನೆಯ ಶತಮಾನದಲ್ಲೂ, ಅದಕ್ಕೂ ಹಿಂದೆಯೂ ಇತ್ತೆಂಬುದರಲ್ಲಿ ಅನುಮಾನವಿಲ್ಲ.<br /> <br /> ಬಸವಣ್ಣನವರು ಧಾರ್ಮಿಕವಾಗಿ, ಸಾಮಾಜಿಕವಾಗಿ ಎಷ್ಟು ಪ್ರಮುಖರೆಂಬುದು ಗೊತ್ತೇ ಇದೆ. ಕಾವ್ಯದ ದೃಷ್ಟಿಯಿಂದಲೂ ಅವರು ಮುಖ್ಯರೇ. ಅವರು ಎತ್ತರದ ಕವಿ; ನಮಗೆ ಹತ್ತಿರದ ಕವಿ ಕೂಡ. ಬಸವಣ್ಣನವರು ಸಾಂಸ್ಕೃತಿಕ ವಕ್ತಾರ; ಸಾಮಾಜಿಕ ಬದಲಾವಣೆಯ ನೇತಾರ. ಈ ಎಲ್ಲದರ ರೂವಾರಿಯಾದುದರಿಂದ ಅವರು ಕೇವಲ ಕವಿಯಲ್ಲ; ಕವಿಗಿಂತ ಮಿಗಿಲು.<br /> <br /> ಕವನದ ನೇರ ವಿಶ್ಲೇಷಣೆಗೆ ಬರೋಣ. ವಚನ ಏನು ಹೇಳುತ್ತದೆ, ಹೇಗೆ ಹೇಳುತ್ತದೆ ಎಂಬುದು ಮುಖ್ಯ. ಅನುಭವ ಮತ್ತು ಅಭಿವ್ಯಕ್ತಿಯ ಅಪರೂಪದ ಸಖ್ಯ ಪದ್ಯದ್ದು. ಪ್ರಾಣಿರೂಪಕದಿಂದ ಪ್ರಾರಂಭವಾದರೂ, ಅದೇ ವಸ್ತುವಾಗಿ ಬಿಡುವ ಸೋಜಿಗ. ವಚನದ `ಸತ್ವ~ ಮನುಷ್ಯನ ಪೂರ್ವಾಪರ ಅಸ್ತಿತ್ವಕ್ಕೆ ಸಂಬಂಧಿಸಿದ್ದು.<br /> <br /> ಬದುಕಿನ ಅಸ್ಥಿರತೆ ಮತ್ತು ನಶ್ವರತೆಗಳ ಮೇಲೆ ಕೇಂದ್ರೀಕೃತವಾದುದು. ಮೊಲಕ್ಕೆ ಜೀವವಿದ್ದರೂ ಸತ್ತರೂ ಬೆಲೆ; ಅದಕ್ಕೆ ಅದರ ಹೋಲಿಕೆ. ಮನುಷ್ಯನಿಗೆ- ರಾಜನಾದರೂ- ಜೀವವಿರುವನಕ ಬೆಲೆ; ಆಮೇಲೆ ಅವನು ಬರೀ ಹೆಣ, ಶವ. ಪ್ರಾಣಿಗಿಂತ ಕನಿಷ್ಠ ಮಾನವ. <br /> <br /> `ವ್ಯಾಧ~ ಪದದ ಮೇಲಿನ ಒತ್ತು, `ಮೊಲ~ ಕ್ಕೆ `ಸಲುವ ಹಾಗ~ (ಆ ಕಾಲದ ಹಣದ 1/4 ಭಾಗ)ದ ಬೆಲೆ( `ಬಿಲಿ~ ), `ನೆಲನಾಳ್ದನ~ ಮಾತಿನಲ್ಲಿರುವ ಗಂಭೀರ ವಿಡಂಬನೆ, `ಕೊಂಬವರಿಲ್ಲ~ ಎಂಬುದರಲ್ಲಿನ ವಿಶೇಷ, `ನೋಡಯ್ಯ~ ಎಂಬುದರಲ್ಲಿನ ಅಣಕ/ಸಂಬೋಧನೆ, ಮೊಲಕ್ಕಿಂತ ಕಷ್ಟವಾದ `ನರನಬಾಳುವೆ~ ಎನ್ನುವಲ್ಲಿನ `ವ್ಯಕ್ತಿ ಸಾಮಾನ್ಯೀಕರಣ~ , ಅಧೀರತೆಯ ಸ್ಥಿತಿ, ಅವಲಂಬನೆಯ ಅಗತ್ಯದ ಒತ್ತು- ಇವೆಲ್ಲವೂ ವಚನದ ಅರ್ಥವನ್ನೂ ಅಭಿವ್ಯಕ್ತಿಯನ್ನೂ ಒಮ್ಮೆಲೆ ರೂಪಿಸುತ್ತವೆ. <br /> <br /> ಅಸ್ಥಿರತೆ, ಅಧೀರತೆ, ನಶ್ವರತೆಗಳಿಂದ ಹೊರಬರುವ ಒಂದೇ ಒಂದು ಸಾಧನ `ಕೂಡಲಸಂಗ~ನನ್ನು ನಂಬುವುದು. ಬರಿಯ ನಂಬಿಕೆಯಲ್ಲಿ ಬಸವಣ್ಣನವರಿಗೆ ವಿಶ್ವಾಸವಿಲ್ಲ; ಏಕೆಂದರೆ ` ತೋರಿಕೆ~ ಇದೆಯಲ್ಲ! ಆದ್ದರಿಂದ ` ಸಲೆನಂಬೊ~ ಎಂಬ ಒತ್ತು; `ಸಲೆ~ ಎಂದರೆ ಚೆನ್ನಾಗಿ, ಏಕ ಪ್ರಕಾರವಾಗಿ, ಸರಿಯಾಗಿ ನಂಬುವುದು ಎಂದು ಅರ್ಥ. ಆಗ ಮನುಷ್ಯನ ಜೀವನ ಸಾರ್ಥಕ, ಕಲಾತ್ಮಕ ಎಂಬುದು ಬಸವಣ್ಣನವರ ಅಭಿಪ್ರಾಯ. ಅಂತಿಮವಾಗಿ ಜೀವಧರ್ಮಕ್ಕೆ/ದೇವರಿಗೆ ಶರಣು ಹೋಗಬೇಕೆಂಬುದೇ ವಚನದ ಸಂದೇಶ.<br /> <br /> ವಚನ ಇನ್ನೂ ಹೆಚ್ಚಿನ ಅಂಶಗಳನ್ನು ಇಟ್ಟುಕೊಂಡಿದೆ. ಸಮಕಾಲೀನ ಅಂಶ ಇರಬಹುದೆಂಬ ಶಂಕೆ ಒಂದು. `ನೆಲನಾಳ್ದನ~ ಎಂಬ ಮಾತಿನಲ್ಲಿ `ಬಿಜ್ಜಳನ~ ವಿಷಯವಿರಬಹುದೆ? ಬಸವಣ್ಣ ಮತ್ತು ಬಿಜ್ಜಳರು ವೈಯಕ್ತಿಕ ನೆಲೆಯಲ್ಲಿ ಚೆನ್ನಾಗಿದ್ದರು. ಸಾರ್ವಜನಿಕ ಸಮಸ್ಯೆಯ ನೆಲೆಯಲ್ಲಿ ಅವರಿಬ್ಬರ ನಡುವೆ ಸಂಘರ್ಷಾತ್ಮಕ ಸ್ಥಿತಿ ಇತ್ತು. ಇಂತಹ ಸಾಮ್ರೋಜ್ಯಶಾಹಿ/ಪ್ರಭುತ್ವವಾದಿ ವಿಷಯಕ್ಕೆ ಬಸವಣ್ಣನವರು ಪ್ರತಿಭಟನಾತ್ಮಕ ಧ್ವನಿಗೆ ಹೀಗೆ ಅಭಿವ್ಯಕ್ತಿ ನೀಡಿರಬಹುದೆ?<br /> <br /> ಅಸ್ತಿತ್ವವಾದಿ ತತ್ವ ಎರಡನೆಯದು. ಇಪ್ಪತ್ತನೆಯ ಶತಮಾನದಲ್ಲಿ ಅಸ್ತಿತ್ವವಾದ ಪ್ರಬಲವಾಗಿತ್ತು. ಈ ವಿಚಾರ ಪ್ರಾಚೀನ ಕಾಲದಿಂದಲೂ ಇದ್ದದ್ದೇ. ಮನುಷ್ಯನ ಅಸ್ತಿತ್ವದ ಚರ್ಚೆ ಗಾಢವಾದುದು. ಇದರ ಪ್ರಕಾರ ಮನುಷ್ಯನಿಗೆ ತನ್ನದೆನ್ನುವ ಅಸ್ತಿತ್ವವೇನೂ ಇರುವುದಿಲ್ಲ. ಅವನು ಪ್ರತ್ಯೇಕ ಅಲ್ಲ; ದೈವದ ಭಾಗ- ಅವನು ಏನಿದ್ದರೂ ತನ್ನ ನೆಲೆಯನ್ನು ದೇವರಲ್ಲೇ ಹುಡುಕಿಕೊಳ್ಳಬೇಕು.<br /> <br /> ಅವನಿಗೆ ಮುಕ್ತಿ (ಬಿಡುಗಡೆ) ದೊರೆಯುವುದು ದೇವರನ್ನು ಕೂಡಿಕೊಂಡಾಗಲೇ. ಅಸ್ತಿತ್ವ `ರೂಪ~ಕ್ಕೆ ಸಂಬಂಧಿಸಿರದೆ, `ಸತ್ವ~ಕ್ಕೆ ಸಂಬಂಧಿಸಿದ್ದು. ಮನುಷ್ಯನ ಇರುವಿಕೆಯನ್ನು ಹುಡುಕುತ್ತಾ ಹೋದಂತೆ `ಅಸ್ತಿತ್ವ~ ಹೆಚ್ಚು ಅಸಂಬದ್ಧವಾಗುವುದು. ಅಸ್ತಿತ್ವವಾದದ ಕಲ್ಪನೆ ಸಾವಿನ ಸಂಬಂಧದಲ್ಲಿ ಮಹತ್ವ ಪಡೆಯುವುದು. <br /> <br /> ಸಾಯುವ ಮನುಷ್ಯನನ್ನು ಎಲ್ಲವೂ ತೊರೆಯುವುದು; ಅವನು ಏಕಾಂಗಿ. ಈ ಪರಿಕಲ್ಪನೆಯಲ್ಲಿ ನೋಡಿದಾಗ ವಚನ ತುಂಬ ಅರ್ಥಪೂರ್ಣವೆನಿಸುವುದು. ಅಸ್ತಿತ್ವವಾದದಲ್ಲಿ `ಆಸ್ತಿಕ~, `ನಾಸ್ತಿಕ~ ಎಂದು ಎರಡು ಬಗೆ. ಬಸವಣ್ಣನವರು ಈ ವಚನದಲ್ಲಿ `ಆಸ್ತಿಕ ಅಸ್ತಿತ್ವವಾದ~ವನ್ನು ಪ್ರತಿಪಾದಿಸುತ್ತಿರುವಂತೆ ತೋರುತ್ತದೆ.<br /> <br /> ಆದ್ದರಿಂದ ಬಸವಣ್ಣನವರ ವಚನ ಸಾವಿನ ನೆಲೆಯಲ್ಲಿ ಬದುಕಿನ ಅಸ್ತಿತ್ವವನ್ನು ಯೋಚಿಸುವಂಥದು. ಹಾಗೆ ಮಾಡಿದಾಗ ಬದುಕು ಮತ್ತು ಸಾವಿನ ನಡುವಿನ ಅನುಭವ ಬದಲಾಗುವ ಪರಿಗೆ ವಚನ ಉತ್ತಮ ನಿದರ್ಶನ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಸವಣ್ಣನವರ ಬಹುತೇಕ ವಚನಗಳು ಸಾಹಿತ್ಯಕವಾಗಿಯೂ ಮುಖ್ಯವಾಗುತ್ತವೆ. ಈ ವಚನಗಳು ಪ್ರಾಯೋಗಿಕ ವಿಮರ್ಶೆಯ ಅತ್ಯುತ್ತಮ ಮಾದರಿಗಳು ಕೂಡ. ಪದಬಂಧ ಮತ್ತು ಅರ್ಥಗಂಧಗಳ ಸಾಮಾನ್ಯ ಸಂಬಂಧದ ಅದ್ಭುತ ಸಾಮರಸ್ಯಕ್ಕೆ ಇವು ಉದಾಹರಣೆಗಳು.<br /> <br /> ಶಬ್ದಾರ್ಥ ಸೌಹಾರ್ದದ ಹುಡುಕಾಟ ಕಾವ್ಯ ರಚನೆಯಲ್ಲಿ ಒಂದು ಸಾಮಾನ್ಯ ಪ್ರಕ್ರಿಯೆ. ಬಸವಣ್ಣನವರ ವಚನಗಳಲ್ಲಿ ಪದ ಮತ್ತು ಅರ್ಥ, ಅಂದರೆ ಅಭಿವ್ಯಕ್ತಿ ಮತ್ತು ಅನುಭವ ಒಟ್ಟಿಗೆ ಜನ್ಮ ತಳೆಯುವುದನ್ನು ನೋಡುತ್ತೇವೆ. <br /> <br /> ಅರ್ಥದಾಚೆಯ ಅರ್ಥಕ್ಕೂ ಈ ವಚನಗಳು ಬೆಳೆಯುತ್ತವೆ. ವಚನಗಳು ಸಾಮಾಜಿಕ ಆಂದೋಲನದ ಉಪ ಉತ್ಪತ್ತಿ ಎಂಬುದು ಒಂದು ಸಾಮಾನ್ಯ ಅಭಿಪ್ರಾಯ. ಇದರ ಭಾಗವೇ ಆದ ಬಸವಣ್ಣನವರ ವಚನಗಳು ಸೃಜನಶೀಲ ಪ್ರತಿಭೆಯ ಶಿಖರ ಸ್ಥಿತಿಯವು ಎನ್ನುವುದಕ್ಕೆ ಪ್ರಸ್ತುತ ವಚನ ಒಂದು ನಿದರ್ಶನ:<br /> <br /> ವ್ಯಾಧನೊಂದು ಮೊಲನ ತಂದರೆ<br /> ಸಲುವ ಹಾಗಕ್ಕೆ ಬಿಲಿವರಯ್ಯ<br /> ನೆಲನಾಳ್ದನ ಹೆಣನೆಂದರೆ<br /> ಒಂದಡಕೆಗೆ ಕೊಂಬವರಿಲ್ಲ ನೋಡಯ್ಯ<br /> ಮೊಲನಿಂದ ಕರಕಷ್ಟ ನರನ ಬಾಳುವೆ!<br /> ಸಲೆ ನಂಬೊ ನಮ್ಮ ಕೂಡಲ ಸಂಗಮದೇವನ<br /> <br /> ಬಸವಣ್ಣನವರ ವಚನವೆಂದು ಅಂಕಿತದಿಂದಲೇ ಗೊತ್ತಾಗುತ್ತದೆ. ಬಸವಣ್ಣನವರ ಬಹುಮುಖ್ಯ ವಚನಗಳಲ್ಲಿ ಇದೂ ಒಂದು; ನಿರ್ದಿಷ್ಟ ಜೀವನ ತತ್ತ್ವವನ್ನೂ ಅಸ್ತಿತ್ವದ ಪ್ರಶ್ನೆಯನ್ನೂ ಇದು ಎತ್ತುವುದು.<br /> <br /> ವಚನವನ್ನು ನೋಡಿದರೆ ಒಂದೆರಡು ಸಂಸ್ಕೃತ ಪದಗಳನ್ನು ಬಿಟ್ಟರೆ, ಇಡೀ ರಚನೆ ಅಚ್ಚಗನ್ನಡ ಪದಗಳಿಂದಾದುದೆಂಬುದು ಗೊತ್ತಾಗುತ್ತದೆ. ಹನ್ನೆರಡನೆಯ ಶತಮಾನದ್ದೆಂದು ಮರೆತರೆ ನಿನ್ನೆ ಮೊನ್ನೆಯ ರಚನೆಯಂತೆ, ಆಧುನಿಕ ಕವನದಂತೆ ಭಾಸವಾಗುವುದು. ಆಡುಭಾಷೆಯ ಅನನ್ಯ ಅಭಿವ್ಯಕ್ತಿ ಎಂದರೂ ಆದೀತು.<br /> <br /> ವಚನದ ಕನ್ನಡ ಬಸವಣ್ಣನವರ ಕಾಲದ ಕನ್ನಡವೇ. ಒಂದೂವರೆ ಶತಮಾನ ಹಿಂದಕ್ಕೆ ಹೋದರೆ ಪಂಪರನ್ನಾದಿಗಳ ಕಾವ್ಯಗಳು ಸಿಗುತ್ತವೆ. ಅವರ ಭಾಷೆ ಅವರ ಕಾಲದ ಭಾಷೆಯಲ್ಲ. ಆಶ್ಚರ್ಯವೆನ್ನುವಂತೆ ಮಾರ್ಗ-ದೇಸಿಗಳ ಮಿಲನವನ್ನೂ, ಸಂಸ್ಕೃತ-ಕನ್ನಡ ಸಮನ್ವಯವನ್ನೂ ಅವರ ಕಾವ್ಯಗಳಲ್ಲಿ ಕಾಣುತ್ತೇವೆ.<br /> <br /> ಒಂದು ಕಾವ್ಯಭಾಷೆಯನ್ನು ಸೃಷ್ಟಿಸಿಕೊಂಡಿರುವುದು ಈ ಪರಿಸ್ಥಿತಿಗೆ ಕಾರಣ. ಇದಕ್ಕೂ ಹಿಂದಕ್ಕೆ ಹೋದರೆ ಏಳನೇ ಶತಮಾನದ ಕಪ್ಪೆ ಅರಭಟ್ಟನ ಶಾಸನದ `ಸಾಧುಗೆ ಸಾಧು ಮಾಧುರ್ಯಂಗೆ ಮಾಧುರ್ಯಂ~ ಎಂಬ ತ್ರಿಪದಿ ಸಿಗುತ್ತದೆ. ಇದರ ಭಾಷೆ ಕೂಡ ಆಧುನಿಕವೆನ್ನುವಂತಿದೆ. ಆದ್ದರಿಂದ ಬಸವಣ್ಣನವರ ಭಾಷೆಯೇ ಹತ್ತನೆಯ ಶತಮಾನದಲ್ಲೂ, ಅದಕ್ಕೂ ಹಿಂದೆಯೂ ಇತ್ತೆಂಬುದರಲ್ಲಿ ಅನುಮಾನವಿಲ್ಲ.<br /> <br /> ಬಸವಣ್ಣನವರು ಧಾರ್ಮಿಕವಾಗಿ, ಸಾಮಾಜಿಕವಾಗಿ ಎಷ್ಟು ಪ್ರಮುಖರೆಂಬುದು ಗೊತ್ತೇ ಇದೆ. ಕಾವ್ಯದ ದೃಷ್ಟಿಯಿಂದಲೂ ಅವರು ಮುಖ್ಯರೇ. ಅವರು ಎತ್ತರದ ಕವಿ; ನಮಗೆ ಹತ್ತಿರದ ಕವಿ ಕೂಡ. ಬಸವಣ್ಣನವರು ಸಾಂಸ್ಕೃತಿಕ ವಕ್ತಾರ; ಸಾಮಾಜಿಕ ಬದಲಾವಣೆಯ ನೇತಾರ. ಈ ಎಲ್ಲದರ ರೂವಾರಿಯಾದುದರಿಂದ ಅವರು ಕೇವಲ ಕವಿಯಲ್ಲ; ಕವಿಗಿಂತ ಮಿಗಿಲು.<br /> <br /> ಕವನದ ನೇರ ವಿಶ್ಲೇಷಣೆಗೆ ಬರೋಣ. ವಚನ ಏನು ಹೇಳುತ್ತದೆ, ಹೇಗೆ ಹೇಳುತ್ತದೆ ಎಂಬುದು ಮುಖ್ಯ. ಅನುಭವ ಮತ್ತು ಅಭಿವ್ಯಕ್ತಿಯ ಅಪರೂಪದ ಸಖ್ಯ ಪದ್ಯದ್ದು. ಪ್ರಾಣಿರೂಪಕದಿಂದ ಪ್ರಾರಂಭವಾದರೂ, ಅದೇ ವಸ್ತುವಾಗಿ ಬಿಡುವ ಸೋಜಿಗ. ವಚನದ `ಸತ್ವ~ ಮನುಷ್ಯನ ಪೂರ್ವಾಪರ ಅಸ್ತಿತ್ವಕ್ಕೆ ಸಂಬಂಧಿಸಿದ್ದು.<br /> <br /> ಬದುಕಿನ ಅಸ್ಥಿರತೆ ಮತ್ತು ನಶ್ವರತೆಗಳ ಮೇಲೆ ಕೇಂದ್ರೀಕೃತವಾದುದು. ಮೊಲಕ್ಕೆ ಜೀವವಿದ್ದರೂ ಸತ್ತರೂ ಬೆಲೆ; ಅದಕ್ಕೆ ಅದರ ಹೋಲಿಕೆ. ಮನುಷ್ಯನಿಗೆ- ರಾಜನಾದರೂ- ಜೀವವಿರುವನಕ ಬೆಲೆ; ಆಮೇಲೆ ಅವನು ಬರೀ ಹೆಣ, ಶವ. ಪ್ರಾಣಿಗಿಂತ ಕನಿಷ್ಠ ಮಾನವ. <br /> <br /> `ವ್ಯಾಧ~ ಪದದ ಮೇಲಿನ ಒತ್ತು, `ಮೊಲ~ ಕ್ಕೆ `ಸಲುವ ಹಾಗ~ (ಆ ಕಾಲದ ಹಣದ 1/4 ಭಾಗ)ದ ಬೆಲೆ( `ಬಿಲಿ~ ), `ನೆಲನಾಳ್ದನ~ ಮಾತಿನಲ್ಲಿರುವ ಗಂಭೀರ ವಿಡಂಬನೆ, `ಕೊಂಬವರಿಲ್ಲ~ ಎಂಬುದರಲ್ಲಿನ ವಿಶೇಷ, `ನೋಡಯ್ಯ~ ಎಂಬುದರಲ್ಲಿನ ಅಣಕ/ಸಂಬೋಧನೆ, ಮೊಲಕ್ಕಿಂತ ಕಷ್ಟವಾದ `ನರನಬಾಳುವೆ~ ಎನ್ನುವಲ್ಲಿನ `ವ್ಯಕ್ತಿ ಸಾಮಾನ್ಯೀಕರಣ~ , ಅಧೀರತೆಯ ಸ್ಥಿತಿ, ಅವಲಂಬನೆಯ ಅಗತ್ಯದ ಒತ್ತು- ಇವೆಲ್ಲವೂ ವಚನದ ಅರ್ಥವನ್ನೂ ಅಭಿವ್ಯಕ್ತಿಯನ್ನೂ ಒಮ್ಮೆಲೆ ರೂಪಿಸುತ್ತವೆ. <br /> <br /> ಅಸ್ಥಿರತೆ, ಅಧೀರತೆ, ನಶ್ವರತೆಗಳಿಂದ ಹೊರಬರುವ ಒಂದೇ ಒಂದು ಸಾಧನ `ಕೂಡಲಸಂಗ~ನನ್ನು ನಂಬುವುದು. ಬರಿಯ ನಂಬಿಕೆಯಲ್ಲಿ ಬಸವಣ್ಣನವರಿಗೆ ವಿಶ್ವಾಸವಿಲ್ಲ; ಏಕೆಂದರೆ ` ತೋರಿಕೆ~ ಇದೆಯಲ್ಲ! ಆದ್ದರಿಂದ ` ಸಲೆನಂಬೊ~ ಎಂಬ ಒತ್ತು; `ಸಲೆ~ ಎಂದರೆ ಚೆನ್ನಾಗಿ, ಏಕ ಪ್ರಕಾರವಾಗಿ, ಸರಿಯಾಗಿ ನಂಬುವುದು ಎಂದು ಅರ್ಥ. ಆಗ ಮನುಷ್ಯನ ಜೀವನ ಸಾರ್ಥಕ, ಕಲಾತ್ಮಕ ಎಂಬುದು ಬಸವಣ್ಣನವರ ಅಭಿಪ್ರಾಯ. ಅಂತಿಮವಾಗಿ ಜೀವಧರ್ಮಕ್ಕೆ/ದೇವರಿಗೆ ಶರಣು ಹೋಗಬೇಕೆಂಬುದೇ ವಚನದ ಸಂದೇಶ.<br /> <br /> ವಚನ ಇನ್ನೂ ಹೆಚ್ಚಿನ ಅಂಶಗಳನ್ನು ಇಟ್ಟುಕೊಂಡಿದೆ. ಸಮಕಾಲೀನ ಅಂಶ ಇರಬಹುದೆಂಬ ಶಂಕೆ ಒಂದು. `ನೆಲನಾಳ್ದನ~ ಎಂಬ ಮಾತಿನಲ್ಲಿ `ಬಿಜ್ಜಳನ~ ವಿಷಯವಿರಬಹುದೆ? ಬಸವಣ್ಣ ಮತ್ತು ಬಿಜ್ಜಳರು ವೈಯಕ್ತಿಕ ನೆಲೆಯಲ್ಲಿ ಚೆನ್ನಾಗಿದ್ದರು. ಸಾರ್ವಜನಿಕ ಸಮಸ್ಯೆಯ ನೆಲೆಯಲ್ಲಿ ಅವರಿಬ್ಬರ ನಡುವೆ ಸಂಘರ್ಷಾತ್ಮಕ ಸ್ಥಿತಿ ಇತ್ತು. ಇಂತಹ ಸಾಮ್ರೋಜ್ಯಶಾಹಿ/ಪ್ರಭುತ್ವವಾದಿ ವಿಷಯಕ್ಕೆ ಬಸವಣ್ಣನವರು ಪ್ರತಿಭಟನಾತ್ಮಕ ಧ್ವನಿಗೆ ಹೀಗೆ ಅಭಿವ್ಯಕ್ತಿ ನೀಡಿರಬಹುದೆ?<br /> <br /> ಅಸ್ತಿತ್ವವಾದಿ ತತ್ವ ಎರಡನೆಯದು. ಇಪ್ಪತ್ತನೆಯ ಶತಮಾನದಲ್ಲಿ ಅಸ್ತಿತ್ವವಾದ ಪ್ರಬಲವಾಗಿತ್ತು. ಈ ವಿಚಾರ ಪ್ರಾಚೀನ ಕಾಲದಿಂದಲೂ ಇದ್ದದ್ದೇ. ಮನುಷ್ಯನ ಅಸ್ತಿತ್ವದ ಚರ್ಚೆ ಗಾಢವಾದುದು. ಇದರ ಪ್ರಕಾರ ಮನುಷ್ಯನಿಗೆ ತನ್ನದೆನ್ನುವ ಅಸ್ತಿತ್ವವೇನೂ ಇರುವುದಿಲ್ಲ. ಅವನು ಪ್ರತ್ಯೇಕ ಅಲ್ಲ; ದೈವದ ಭಾಗ- ಅವನು ಏನಿದ್ದರೂ ತನ್ನ ನೆಲೆಯನ್ನು ದೇವರಲ್ಲೇ ಹುಡುಕಿಕೊಳ್ಳಬೇಕು.<br /> <br /> ಅವನಿಗೆ ಮುಕ್ತಿ (ಬಿಡುಗಡೆ) ದೊರೆಯುವುದು ದೇವರನ್ನು ಕೂಡಿಕೊಂಡಾಗಲೇ. ಅಸ್ತಿತ್ವ `ರೂಪ~ಕ್ಕೆ ಸಂಬಂಧಿಸಿರದೆ, `ಸತ್ವ~ಕ್ಕೆ ಸಂಬಂಧಿಸಿದ್ದು. ಮನುಷ್ಯನ ಇರುವಿಕೆಯನ್ನು ಹುಡುಕುತ್ತಾ ಹೋದಂತೆ `ಅಸ್ತಿತ್ವ~ ಹೆಚ್ಚು ಅಸಂಬದ್ಧವಾಗುವುದು. ಅಸ್ತಿತ್ವವಾದದ ಕಲ್ಪನೆ ಸಾವಿನ ಸಂಬಂಧದಲ್ಲಿ ಮಹತ್ವ ಪಡೆಯುವುದು. <br /> <br /> ಸಾಯುವ ಮನುಷ್ಯನನ್ನು ಎಲ್ಲವೂ ತೊರೆಯುವುದು; ಅವನು ಏಕಾಂಗಿ. ಈ ಪರಿಕಲ್ಪನೆಯಲ್ಲಿ ನೋಡಿದಾಗ ವಚನ ತುಂಬ ಅರ್ಥಪೂರ್ಣವೆನಿಸುವುದು. ಅಸ್ತಿತ್ವವಾದದಲ್ಲಿ `ಆಸ್ತಿಕ~, `ನಾಸ್ತಿಕ~ ಎಂದು ಎರಡು ಬಗೆ. ಬಸವಣ್ಣನವರು ಈ ವಚನದಲ್ಲಿ `ಆಸ್ತಿಕ ಅಸ್ತಿತ್ವವಾದ~ವನ್ನು ಪ್ರತಿಪಾದಿಸುತ್ತಿರುವಂತೆ ತೋರುತ್ತದೆ.<br /> <br /> ಆದ್ದರಿಂದ ಬಸವಣ್ಣನವರ ವಚನ ಸಾವಿನ ನೆಲೆಯಲ್ಲಿ ಬದುಕಿನ ಅಸ್ತಿತ್ವವನ್ನು ಯೋಚಿಸುವಂಥದು. ಹಾಗೆ ಮಾಡಿದಾಗ ಬದುಕು ಮತ್ತು ಸಾವಿನ ನಡುವಿನ ಅನುಭವ ಬದಲಾಗುವ ಪರಿಗೆ ವಚನ ಉತ್ತಮ ನಿದರ್ಶನ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>