ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪನಿಷತ್ತಿನ ಮಾತು ಹೇಳುವ ಅರ್ಥ ಏನು?

Last Updated 5 ಆಗಸ್ಟ್ 2018, 19:16 IST
ಅಕ್ಷರ ಗಾತ್ರ

ನಾನು ಹಲವು ದಶಕಗಳಿಂದ ಬೇರೆ ಬೇರೆ ದೇಶಗಳಿಗೆ ಭೇಟಿ ನೀಡುತ್ತಿದ್ದೇನೆ. ಬಹುಶಃ, 30ರಿಂದ 40 ದೇಶಗಳಿಗೆ ನಾನು ಭೇಟಿ ನೀಡಿದ್ದೇನೆ. ಆಮಂತ್ರಣ ಇಲ್ಲದೆ ಮನೆಗೆ ಬಂದ ಅತಿಥಿ ಅಥವಾ ಅಪರಿಚಿತನಿಗೆ ಒಂದು ಲೋಟ ನೀರು ಕೊಡುವ ಸಂಪ್ರದಾಯವನ್ನು ನಾನು ಬೇರೆ ಯಾವ ದೇಶದಲ್ಲೂ ಕಂಡಿಲ್ಲ. ಹೀಗೆ ನೀರು ಕೊಡುವಂತೆ ನನಗೆ ನನ್ನ ಅಮ್ಮ ಕಲಿಸಲಿಲ್ಲ. ಆದರೆ, ನಮ್ಮ ಮನೆಗೆ ಯಾರಾದರೂ ಬಂದಾಗಲೆಲ್ಲ ಅಮ್ಮ ಅವರಿಗೆ ನೀರು ಕೊಡುತ್ತಿದ್ದ ಕಾರಣ, ನಾನೂ ಆ ಅಭ್ಯಾಸ ಬೆಳೆಸಿಕೊಂಡೆ.

ನಾಲ್ಕು ದಶಕಗಳ ಹಿಂದಿನ ಸಂದರ್ಭಕ್ಕೆ ಹೋಲಿಸಿದರೆ, ನಮ್ಮ ಮನೆಗಳ ಬಾಗಿಲು ಬಡಿಯುವ ಅಪರಿಚಿತರ ಸಂಖ್ಯೆ ಈಗ ಹೆಚ್ಚು. ಕೊರಿಯರ್‌ ತಲುಪಿಸುವವರು, ಟಿ.ವಿ. ಕೇಬಲ್‌ ರಿಪೇರಿ ಮಾಡುವವರು ಹಾಗೂ ಇಂತಹ ಅನೇಕ ಜನ ಪ್ರತಿದಿನ ಎಂಬಂತೆ ಮನೆಯ ಬಾಗಿಲು ಬಡಿಯುತ್ತಾರೆ. ಅವರು ತಾವು ಹೋದ ಕಡೆಯಲ್ಲೆಲ್ಲ ತಮ್ಮನ್ನು ಅತಿಥಿಯಾಗಿ ಪರಿಗಣಿಸಲಿ ಎಂದು ಬಯಸುವುದಿಲ್ಲ. ಆದರೂ ಅವರು ಬಂದಾಗ, ಕುಳಿತುಕೊಳ್ಳಬೇಕೇ, ಕುಡಿಯಲು ನೀರು ಬೇಕೆ ಎಂದು ನಾನು ವಿಚಾರಿಸುತ್ತೇನೆ. ಏಕೆಂದರೆ ಹಾಗೆ ವಿಚಾರಿಸುವುದು ನನಗೆ ಅಭ್ಯಾಸ ಆಗಿಹೋಗಿದೆ.

ಈ ಪದ್ಧತಿ ಶ್ರೀರಾಮನ ಕಾಲದಲ್ಲೂ ಇತ್ತು ಎಂಬುದು ನನಗೆ ಕೆಲವು ವರ್ಷಗಳ ಹಿಂದೆ ವಾಲ್ಮೀಕಿ ರಾಮಾಯಣ ಓದುತ್ತಿದ್ದಾಗ (ನಾನು ಓದಿದ್ದು ಅರ್ಷಿಯಾ ಸತ್ತಾರ್ ಅವರು ಅನುವಾದಿಸಿದ ವಾಲ್ಮೀಕಿ ರಾಮಾಯಣದ ಆವೃತ್ತಿಯನ್ನು. ಅನುವಾದ ಅದ್ಭುತವಾಗಿದೆ) ಗೊತ್ತಾಗಿ, ಆಶ್ಚರ್ಯ ಆಯಿತು. ಶ್ರೀರಾಮ ಕಾಡಿನಲ್ಲಿ ಯಾವುದಾದರೂ ಋಷಿಯ ಆಶ್ರಮಕ್ಕೆ ಭೇಟಿ ನೀಡಿದಾಗ ಅಥವಾ ಹಳ್ಳಿಯ ಬಡವನ ಮನೆಗೆ ಹೋದಾಗಲೆಲ್ಲ ಕುಡಿಯಲು ನೀರು ಕೊಡುವುದು ಒಂದು ಆಚರಣೆಯೇ ಆಗಿತ್ತು. ಇದು ನಮ್ಮ ಭಾರತೀಯ ಸಂಪ್ರದಾಯ. ಇದರ ಬಗ್ಗೆ ನಮಗೆ ಹೆಮ್ಮೆ ಇರಬೇಕು. ಏಕೆಂದರೆ, ನಾನು ಮೊದಲೇ ಹೇಳಿರುವಂತೆ, ಜಗತ್ತಿನಲ್ಲಿ ಬೇರೆ ಎಲ್ಲಿಯೂ ಇಂಥದ್ದೊಂದು ಸಂಪ್ರದಾಯ ಇದ್ದಂತಿಲ್ಲ.

‘ಅತಿಥಿ ದೇವೋ ಭವ’ ಎಂಬ ಸಾಲು ನಮಗೆ ಚಿರಪರಿಚಿತ. ಇದು ಒಂದು ಉಪನಿಷತ್ತಿನಲ್ಲಿ ಇದೆ. ‘ಮಾತೃ ದೇವೋ ಭವ, ಪಿತೃ ದೇವೋ ಭವ, ಆಚಾರ್ಯ ದೇವೋ ಭವ, ಅತಿಥಿ ದೇವೋ ಭವ’ ಎಂಬುದು ಅಲ್ಲಿನ ಪೂರ್ತಿ ಸಾಲು. ಇದನ್ನು ಸೂರತ್‌ನ ನಮ್ಮ ಶಾಲೆಯಲ್ಲಿ ಹೇಳಿಕೊಟ್ಟಿದ್ದರು. ಈ ಸಾಲಿನ ಅರ್ಥ; ತಾಯಿ, ತಂದೆ, ಗುರು ಮತ್ತು ಅತಿಥಿಯನ್ನು ದೇವರೆಂದು ಭಾವಿಸಬೇಕು ಎಂಬುದು. ‘ನಾವು ಹಿಂದೂಗಳು’ ಎಂದು ಭಾವಿಸಿರುವ ನಮ್ಮವರು, ನಮ್ಮ ಗ್ರಂಥಗಳಲ್ಲಿ ಹೇಳಿರುವ ಈ ಸಾಲುಗಳ ನಿಜ ಅರ್ಥವನ್ನು ಗ್ರಹಿಸಿ, ಹಿಂದೂ ಆಗಿರುವುದರ ನೈಜ ಅರ್ಥ ಏನು ಎಂಬುದನ್ನು ತಿಳಿದುಕೊಳ್ಳಬೇಕು. ಅಸ್ಸಾಂನಲ್ಲಿ ನಡೆಯುತ್ತಿರುವ ‘ಮತದಾನದ ಹಕ್ಕನ್ನು ಹಿಂತೆಗೆದುಕೊಳ್ಳುವ ಪ್ರಕ್ರಿಯೆ’ಯಲ್ಲಿ ಇಂತಹ ಯಾವುದಾದರೂ ಗೌರವ ಅಥವಾ ಕರುಣೆಯ ಭಾವ ಕಾಣಿಸುತ್ತಿದೆಯೇ?

1971ರಿಂದಲೂ ಭಾರತೀಯ ನಾಗರಿಕರಾಗಿದ್ದೇವೆ ಎಂದು ಸಾಧಿಸಲು ಸಾಧ್ಯವಾಗದ 40 ಲಕ್ಷ ಜನರಲ್ಲಿ ಹಲವರು ವಾಸ್ತವವಾಗಿ ಬಾಂಗ್ಲಾದೇಶದ ಜನ ಎಂಬುದು ಇಲ್ಲಿರುವ ಆರೋಪ.

ದೇಶದ ಮಾಜಿ ರಾಷ್ಟ್ರಪತಿ ಫಕ್ರುದ್ದೀನ್‌ ಅಲಿ ಅಹ್ಮದ್‌ ಅವರ ಸಂಬಂಧಿಕರು ಹಾಗೂ ಅಂಥವರ ವಿಚಾರದಲ್ಲಿ ತುಸು ಕರುಣೆ ವ್ಯಕ್ತವಾಗಿದೆ. ಅವರಿಗೆ ಕೂಡ ತಾವು 1971ರಿಂದ ಭಾರತೀಯ ನಾಗರಿಕರು ಎಂಬುದನ್ನು ತೋರಿಸಲು ಆಗಿಲ್ಲ. ಇವರೆಲ್ಲ ನಿಜವಾಗಿಯೂ ಭಾರತದ ಪ್ರಜೆಗಳು, ಇವರ ಹೆಸರು ಪಟ್ಟಿಯಿಂದ ಬಿಟ್ಟುಹೋಗಿದೆ ಎಂಬ ನಂಬಿಕೆ ಮೂಡಿದೆ.

ನನ್ನ ಕಳಕಳಿ ವ್ಯಕ್ತವಾಗುತ್ತಿರುವುದು ಅವರಲ್ಲಿ ಎಲ್ಲರ ಬಗ್ಗೆ. ಅವರಲ್ಲಿ ಒಬ್ಬ ಬಾಂಗ್ಲಾದೇಶದ ಒಬ್ಬರ ಮಗನೋ, ಮೊಮ್ಮಗನೋ ಆಗಿದ್ದರೆ ಅಥವಾ ಬಾಂಗ್ಲಾದೇಶದಿಂದ ಬಂದ ವಲಸಿಗನೇ ಆಗಿದ್ದರೂ ಏನು ಸಮಸ್ಯೆ? ಅವರನ್ನು ಹಾಗೂ ಅವರಲ್ಲಿ ದುರ್ಬಲರೂ ಬಡವರೂ ಆಗಿರುವವರನ್ನು ಮಾನವೀಯತೆಯಿಂದ ಕಾಣಬೇಕು ಎಂದು ನನಗೆ ನನ್ನ ಸಂಸ್ಕೃತಿ, ನಾನು ಬೆಳೆದುಬಂದ ಪರಿಸರ ಮತ್ತು ನನ್ನ ಧರ್ಮ ಹೇಳಿಕೊಟ್ಟಿದೆ. ರಾಷ್ಟ್ರೀಯ ಪೌರ ನೋಂದಣಿ (ಎನ್‌ಆರ್‌ಸಿ) ಪ್ರಕ್ರಿಯೆಯಲ್ಲಿ ನಾವು ಹಿಂದೂ ಮಾನವೀಯತೆಯನ್ನು ಮತ್ತು ಮನುಷ್ಯತ್ವವನ್ನು ತೋರಿಸುತ್ತಿರುವಂತೆ ನನಗೆ ಕಾಣುತ್ತಿಲ್ಲ. ನನ್ನ ಪ್ರಕಾರ ಈ ಪ್ರಕ್ರಿಯೆಯ ಆಂತರ್ಯದಲ್ಲೇ ಕ್ರೌರ್ಯ ಇರುವಂತಿದೆ. ಬಾಂಗ್ಲಾದೇಶದಲ್ಲಿ ಜನಿಸಿದವರು ಅಥವಾ ಅಲ್ಲಿ ಹುಟ್ಟಿದ ತಂದೆ–ತಾಯಿಯ ಮಕ್ಕಳು ಇಲ್ಲಿ ಏನು ಮಾಡುತ್ತಿದ್ದಾರೆ ಎಂದು ಭಾವಿಸಿದ್ದೇವೆ? ಅವರು ಭಯೋತ್ಪಾದನೆಯಲ್ಲಿ ತೊಡಗಿದ್ದಾರೆ, ನಮ್ಮ ದೇಶಕ್ಕೆ ಅಕ್ರಮವಾಗಿ ನುಸುಳುತ್ತಿದ್ದಾರೆ, ನಮ್ಮಲ್ಲಿ ಇರುವ ಸೌಲಭ್ಯಗಳ ಪ್ರಯೋಜನ ಪಡೆಯುತ್ತಿದ್ದಾರೆ ಎಂಬುದು ನಾವು ತಕ್ಷಣಕ್ಕೆ ಮಾಡುವ ಸಲೀಸು ಆರೋಪ.

ಅಮೆರಿಕದಲ್ಲಿ ಡೊನಾಲ್ಡ್‌ ಟ್ರಂಪ್ ಅವರ ಆಡಳಿತದಲ್ಲಿ ಕೂಡ ಇಂಥದ್ದೇ ಆರೋಪಗಳು ಕೇಳುತ್ತಿವೆ. ‘ಅತ್ಯಂತ ಕೊಳಕಾಗಿರುವ ದೇಶಗಳಿಂದ’ ತಮ್ಮಲ್ಲಿಗೆ ವಲಸಿಗರು ಬರುವುದು ಬೇಡ, ನಾರ್ವೆಯಂತಹ ದೇಶಗಳಿಂದ ಮಾತ್ರ ವಲಸಿಗರು ಬರಬೇಕು ಎಂದು ಟ್ರಂಪ್ ಹೇಳಿದ್ದಾರೆ. ಇದರ ಅರ್ಥ, ಅವರಿಗೆ ಆಫ್ರಿಕಾ ಅಥವಾ ಭಾರತದಿಂದ (ಭಾರತದಿಂದ ವಲಸೆ ಹೋಗಿರುವ ಹಲವರು ಅಮೆರಿಕದ ಎಚ್‌1ಬಿ ವೀಸಾಕ್ಕೆ ಅರ್ಜಿ ಸಲ್ಲಿಸುತ್ತಾರೆ. ಇದು ಅಲ್ಲಿನ ಅರ್ಥ ವ್ಯವಸ್ಥೆಗೂ ಕೊಡುಗೆ ನೀಡುತ್ತಿದೆ) ವಲಸಿಗರು ಬರುವುದು ಬೇಕಾಗಿಲ್ಲ, ಬಿಳಿಯರ ದೇಶಗಳಿಂದ ಮಾತ್ರ ವಲಸಿಗರು ಬಂದರೆ ಸಾಕು. ಅವರ ಸಿಟ್ಟು ಮುಖ್ಯವಾಗಿ ಇರುವುದು ಮೆಕ್ಸಿಕನ್ನರ ವಿರುದ್ಧ. ಮೆಕ್ಸಿಕನ್ನರು ಅಮೆರಿಕಕ್ಕೆ 'ಬಾಚಿಕೊಳ್ಳಲು' (mooch) ಬರುತ್ತಾರೆ ಎಂಬ ನಂಬಿಕೆ ಅವರಲ್ಲಿದೆ. ಸೋಮಾರಿಯಾಗಿದ್ದುಕೊಂಡು, ಪ್ರಭುತ್ವ ಕೊಡುವ ಉಚಿತ ವಸತಿ, ಕಡಿಮೆ ವೆಚ್ಚದ ಸಾರ್ವಜನಿಕ ಸಾರಿಗೆ ಸೇವೆ ಮತ್ತು ನಿರುದ್ಯೋಗ ಸೌಲಭ್ಯಗಳನ್ನು ನೆಚ್ಚಿಕೊಂಡು ಬದುಕುವವ ಎಂಬುದು ಅಮೆರಿಕದಲ್ಲಿ ಈ ಪದಕ್ಕೆ ಇರುವ ಅರ್ಥ.

ನನಗೆ ಅಮೆರಿಕ ಚೆನ್ನಾಗಿ ಗೊತ್ತು. ನನ್ನ ಅನುಭವದ ಪ್ರಕಾರ, ಗುಜರಾತಿನಿಂದ ಅಕ್ರಮವಾಗಿ ಅಲ್ಲಿಗೆ ಹೋದ ಪಟೇಲ ಸಮುದಾಯದವರಂತೆಯೇ ಮೆಕ್ಸಿಕೊದಿಂದ ವಲಸೆ ಬಂದವರು ಅತ್ಯಂತ ಹೆಚ್ಚು ಕಷ್ಟಪಟ್ಟು ದುಡಿಯುವವರ ಸಾಲಿಗೆ ಸೇರುತ್ತಾರೆ. ಪಟೇಲ್ ಮೊಟೆಲ್‌ಗಳು ನಮಗೆ ಗೊತ್ತು. ಹಾಗೆಯೇ, ಅಲ್ಲಿನ ಬಹುತೇಕ ಜನ ಅಲ್ಲಿಗೆ ಸರಿಯಾದ ವೀಸಾ ಇಲ್ಲದೆ ಹೋಗಿ, ಮೊಟೆಲ್‌ಗಳಲ್ಲಿ ಕೋಣೆ ಶುಚಿಗೊಳಿಸುವ ಕೆಲಸದ ಮೂಲಕ ವೃತ್ತಿ ಆರಂಭಿಸಿದವರು ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಮೊಟೆಲ್‌ಗಳಲ್ಲಿ ಕೆಲಸ ಮಾಡುವುದು ಬಹಳ ಕಷ್ಟದ್ದು.

ಬಾಂಗ್ಲಾದೇಶದವರ ವಿಚಾರದಲ್ಲಿಯೂ- ಅಥವಾ ಬಹುಶಃ ಭಾರತೀಯರಾಗಿದ್ದರೂ ಬಾಂಗ್ಲಾದೇಶದವರು ಎಂದು ಭಾವಿಸಲಾದ ವ್ಯಕ್ತಿಗಳ ವಿಚಾರದಲ್ಲಿ- ಇಂಥದ್ದೇ ಆಗುತ್ತಿದೆ. ಭಾರತದ ಬಹುತೇಕ ಎಲ್ಲ ಪ್ರದೇಶಗಳಲ್ಲಿ ರೆಸ್ಟೊರೆಂಟ್‌ಗಳ ಸೇವಾ ಸಿಬ್ಬಂದಿಯನ್ನು ಹಾಗೂ ವಾಚ್‌ಮನ್‌ಗಳನ್ನು ಗಮನಿಸಿದರೆ ಅವರಲ್ಲಿ ಹೆಚ್ಚಿನವರು ಬಂಗಾಳದವರು ಎಂಬುದು ತಿಳಿಯುತ್ತದೆ- ಅದು ಪೂರ್ವ ಬಂಗಾಳ ಆಗಿರಬಹುದು ಅಥವಾ ಪಶ್ಚಿಮ ಬಂಗಾಳ ಆಗಿರಬಹುದು.

ಇಟಲಿಯಲ್ಲಿ ಕೂಡ ಬಾಂಗ್ಲಾದೇಶದ ಅಕ್ರಮ ವಲಸಿಗರು ಎಲ್ಲೆಡೆ ಕಂಡುಬರುತ್ತಾರೆ. ಅವರು ಉದ್ಯಮಶೀಲ ಮನೋಭಾವ ಹಾಗೂ ಕಷ್ಟಪಟ್ಟು ದುಡಿಯುವ ಇಚ್ಛೆ ಇರುವವರು ಎಂಬುದರಲ್ಲಿ ಪ್ರಶ್ನೆಯೇ ಇಲ್ಲ. ವಾಸಿಸಲು ಅದು ಒಳ್ಳೆಯ ಸ್ಥಳ ಎಂದು ಅನಿಸಿರುವ ಕಾರಣ ಅವರು ಅಲ್ಲಿಗೆ ಹೋಗಿದ್ದಾರೆ. ತಮ್ಮ ದೇಶಕ್ಕಿಂತಲೂ ಹೆಚ್ಚಾಗಿ ನಮ್ಮ ದೇಶವನ್ನು ಇಷ್ಟಪಡುವವರ ಮೇಲೆ ಉಗುಳುವ ಕೆಲಸವನ್ನು ನಾವೇಕೆ ಮಾಡಬೇಕು?

ಅಮೆರಿಕ ಅಥವಾ ಯುರೋಪಿನಲ್ಲಿ ಇರುವಂತಹ ಸಬ್ಸಿಡಿ ಸಹಿತವಾದ ಅಥವಾ ಉಚಿತವಾದ ಸರ್ಕಾರಿ ವಸತಿ ವ್ಯವಸ್ಥೆ ನಮ್ಮಲ್ಲಿ ಇಲ್ಲ, ಅಲ್ಲಿ ನಿರುದ್ಯೋಗಿಗಳಿಗೆ ಇರುವಂತಹ ಸೌಲಭ್ಯಗಳು ಕೂಡ ನಮ್ಮಲ್ಲಿ ಇಲ್ಲ, ಸಾರ್ವಜನಿಕ ಆರೋಗ್ಯ ಸೇವೆಗಳು ನಮ್ಮಲ್ಲಿ ಉತ್ತಮವಾಗಿಲ್ಲ. ಇದು ನಿಮಗೆ ಗೊತ್ತಿದೆ. ಈ ಬಗ್ಗೆ ನಾನು ಹೇಳಬೇಕಾಗಿಲ್ಲ. ಬಡವರಿಗೆ ಭಾರತದಲ್ಲಿ ಬದುಕುವುದು ಕಷ್ಟದ ವಿಷಯ. ಈ ಜನರನ್ನು ವಿದೇಶಿಯರು ಎಂದು ಘೋಷಿಸುವ ಹಾಗೂ ಅವರನ್ನು ಏನು ಮಾಡಬೇಕು ಎಂಬುದನ್ನು ತೀರ್ಮಾನಿಸುವ ಪ್ರಕ್ರಿಯೆಯಲ್ಲಿ ಮುಂದಿನ ಹಂತ ಏನು ಎನ್ನುವುದನ್ನು ಚರ್ಚಿಸುವಾಗ ನಾವು ಇದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು.

ನಮ್ಮ ಸಂಸ್ಕೃತಿ, ಸಂಪ್ರದಾಯ ಮತ್ತು ಧರ್ಮದ ವಿಷಯದಲ್ಲಿ ಅಭಿಮಾನ ಹೊಂದಿರುವ ನಮ್ಮ ಆಡಳಿತಾರೂಢರು ಹಾಗೂ ನಾವು 'ಅತಿಥಿ ದೇವೋ ಭವ' ಎನ್ನುವ ಸಾಲನ್ನು ಹೇಗೆ ವ್ಯಾಖ್ಯಾನಿಸಬೇಕು ಎಂಬ ಬಗ್ಗೆ ಪ್ರಶ್ನಿಸಿಕೊಳ್ಳಬೇಕು.

(ಲೇಖಕ: ಅಂಕಣಕಾರ ಹಾಗೂ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT