ಅವನೊಬ್ಬ ಭಾರಿ ಶ್ರೀಮಂತ. ಶ್ರೀಮಂತಿಕೆ ಏನೇನು ವಸ್ತುಗಳನ್ನು ತೋರಿಸಬಹುದೋ ಎಲ್ಲವೂ ಅವನ ಬಳಿಯಲ್ಲಿದ್ದವು. ಅನೇಕ ಅರಮನೆಗಳಂಥ ಮನೆಗಳು, ನೂರಾರು ಕಾರುಗಳು, ಅತ್ಯಂತ ಶ್ರೀಮಂತ ಕ್ಲಬ್ಗಳ ಸದಸ್ಯತ್ವ ಅವನಲ್ಲಿ ಇದ್ದವು. ಅವನು ವಾಸವಾಗಿದ್ದುದು ದೇಶದ ರಾಜಧಾನಿಯ ಅತ್ಯಂತ ಸಿರಿವಂತರ ಬಡಾವಣೆಯಲ್ಲಿ. ಅಲ್ಲಿಯೂ ಇವನದೇ ದೊಡ್ಡ ಮನೆ.
ಸುಮಾರು ಐದು ಎಕರೆಯಷ್ಟು ಜಮೀನಿನಲ್ಲಿ ನಲವತ್ತು ಕೊಠಡಿಗಳಿದ್ದ ಅರಮನೆ ಅದು. ಅದರ ಮುಂದೆ ವಿಶಾಲವಾದ ಹೂದೋಟ, ಅದರಲ್ಲಿ ಬಣ್ಣ ಬಣ್ಣದ ನೀರಿನ ಕಾರಂಜಿಗಳು. ರಾತ್ರಿಯಿಡೀ ಹೂದೋಟಗಳನ್ನು ಬೆಳಗಿಸುವ ಕಾಲುದೀಪಗಳು. ಈ ಮನೆಯನ್ನು ಸರಿಯಾಗಿ ಇಡುವುದಕ್ಕೆ ನೂರಾರು ಸೇವಕರು, ಅಡಿಗೆಯವರು. ಹೀಗೆ ಸಕಲ ಸೌಭಾಗ್ಯಗಳು ಆತನಿಗಿದ್ದವು. ಅವನಿಗೆ ಇವೆಲ್ಲ ಚಿಕ್ಕವಯಸ್ಸಿನಲ್ಲಿಯೇ ದೊರೆತಿದ್ದವು. ಅವನಿಗೊಬ್ಬನೇ ಮಗ. ಆತನಿಗೆ ಸುಮಾರು ಹತ್ತು ವರ್ಷ.
ಈ ಹುಡುಗನ ಮನಸ್ಸು ಬಲುಸೂಕ್ಷ್ಮ. ಸದಾ ಆತ ಹೊಸ ವಿಷಯಗಳನ್ನು, ಹೊಸ ರೀತಿಯಲ್ಲಿ ಗಮನಿಸುವನು. ಒಂದು ಬಾರಿ ತಂದೆ ಯೋಚಿಸಿದ. ನನ್ನ ಮಗ ಸದಾಕಾಲ ಶ್ರೀಮಂತಿಕೆಯಲ್ಲೇ ಹುಟ್ಟಿ ಬೆಳೆದವನು. ಅವನಿಗೆ ಬಡತನ ಎಂದರೆ ಹೇಗಿರುತ್ತದೆ ಎಂಬುದನ್ನು ತೋರಿಸಿದರೆ ಶ್ರೀಮಂತಿಕೆಯ ಬೆಲೆ ಅರ್ಥವಾಗುತ್ತದೆ. ಅದರೊಂದಿಗೆ ತನ್ನ ತಂದೆಯ ಸಾಧನೆಯೂ ಅರಿವಾಗುತ್ತದೆ. ಹೀಗೆ ಯೋಚಿಸಿ ಮಗನನ್ನು ಕರೆದುಕೊಂಡು ಅತ್ಯಂತ ಹಿಂದುಳಿದ ಬುಡಕಟ್ಟು ಜನಾಂಗದವರು ವಾಸಿಸುತ್ತಿದ್ದ ಅರಣ್ಯಪ್ರದೇಶಕ್ಕೆ ಹೋದ. ಅಲ್ಲಿಯ ಜನರಿಗೆ ಮನೆ ಎಂಬುದೇ ಇಲ್ಲ. ಗುಡಿಸಲು ಇದ್ದರೆ ಇತ್ತು, ಇಲ್ಲದಿದ್ದರೆ ಆಕಾಶವೇ ಮನೆ. ಅವರಲ್ಲಿ ಹಿರಿಯರ ಹತ್ತಿರ ಮಾತನಾಡಿ ತನ್ನ ಮಗನನ್ನು ಒಂದು ವಾರ ಇಟ್ಟುಕೊಳ್ಳುವಂತೆ ಕೇಳಿ ಮಗನನ್ನು ಅಲ್ಲಿಯೇ ಬಿಟ್ಟು ಬಂದ.
ಒಂದು ವಾರದ ನಂತರ ಮಗನನ್ನು ಕರೆತಂದ. ಮಗ ಎಲ್ಲಿ ಬೇಜಾರಿನಲ್ಲಿ ಇರುತ್ತಾನೋ ಎಂದು ಚಿಂತಿಸಿದ್ದ ತಂದೆಗೆ ಆಶ್ಚರ್ಯ. ಮಗ ಗೆಲುವಾಗಿಯೇ ಇದ್ದ. ಮಗನನ್ನು ಕೇಳಿದ, ‘ಮಗೂ ಒಂದು ವಾರ ಅಲ್ಲಿದ್ದದ್ದು ನಿನಗೆ ಹೇಗೆನಿಸಿತು?’. ‘ತುಂಬ ಅದ್ಭುತವಾಗಿತ್ತಪ್ಪ’. ‘ಬಡತನ ಹೇಗಿರುತ್ತದೆ, ಬಡವರು ಹೇಗೆ ಬದುಕುತ್ತಾರೆ ತಿಳಿಯತಲ್ಲವೇ?’, ‘ಹೌದಪ್ಪ, ನಾವು ಎಷ್ಟು ಬಡವರು ಎಂಬುದು ತಿಳಿಯಿತು’ ಎಂದ ಮಗ. ‘ನಾವು ಬಡವರೇ? ಅವರು ಬಡವರಲ್ಲವೇ?‘ ಆಶ್ಚರ್ಯದಿಂದ ಕೇಳಿದ ತಂದೆ. ‘ಅಪ್ಪಾ, ನಾವೇ ಬಡವರು, ನಮ್ಮ ಮನೆ ಕಾಯಲು ನಾಲ್ಕು ನಾಯಿಗಳಿವೆ, ಆದರೆ ಅವರ ಮನೆಯ ಮುಂದೆ ನೂರಾರು ನಾಯಿಗಳು.
ನಮ್ಮ ಮನೆಗೆ ಗೋಡೆಗಳ ಬಂಧನವಿದೆ, ಅವರ ಮನೆಗೆ ಗೋಡೆಗಳೇ ಇಲ್ಲ. ನಮ್ಮ ಮನೆ ತೋಟದಲ್ಲಿ ನೀರಿನ ಕಾರಂಜಿ ಇದೆ, ಅವರ ಮನೆಯ ಮುಂದೆ ನದಿಯೇ ಇದೆ. ನಮ್ಮ ಬಂಗಲೆಯ ತೋಟವನ್ನು ಬೆಳಗಿಸಲು ನೂರಾರು ವಿದ್ಯುತ್ ದೀಪಗಳಿವೆ, ಅವರ ತೋಟ ಬೆಳಗಿಸಲು ಅಸಂಖ್ಯೆ ತಾರೆಗಳಿವೆ. ಎಲ್ಲಕ್ಕಿಂತ ಮುಖ್ಯವಾಗಿ ನಮಗೆ ಅದು ಬೇಕು, ಇದು ಬೇಕು ಎಂಬ ಆಸೆಗಳಿವೆ. ಆದರೆ, ಅವರಿಗೆ ಆಸೆಗಳ ಆಸೆಯೇ ಇಲ್ಲ. ಅವರು ತುಂಬ ನಿರಾಳವಾಗಿದ್ದಾರೆ, ನಮಗಿಂತ ಹೆಚ್ಚು ಸುಖಿಗಳಾಗಿದ್ದಾರೆ. ಆದ್ದರಿಂದ ನಮಗಿಂತ ಅವರೇ ಶ್ರೀಮಂತರು’ ಎಂದ ಮಗ. ಅಪ್ಪ ಮಗನ ಮಾತಿಗೆ ಬೆರಗಾದ.
‘ಅಪ್ಪ, ನಾವು ಎಷ್ಟು ಬಡವರು ಎಂದು ತಿಳಿಸಿದ್ದಕ್ಕೆ ನಿನಗೆ ಧನ್ಯವಾದಗಳು’ ಎಂದು ನುಡಿದ ಮಗ. ನಾವು ನೋಡುವ ದೃಷ್ಟಿ ವಸ್ತುಸ್ಥಿತಿಯನ್ನು ಬದಲಿಸುತ್ತದೆ. ನಮ್ಮಲ್ಲಿ ಸಂತೋಷ, ತೃಪ್ತಿ, ಹಾಸ್ಯ ಮನೋಭಾವ, ಆತ್ಮಗೌರವವಿದ್ದರೆ ಅದಕ್ಕಿಂತ ಶ್ರೀಮಂತಿಕೆ ಬೇರೆಯಿಲ್ಲ. ಯಾಕೆಂದರೆ ಇವು ಯಾವುದನ್ನು ಹಣ ಕೊಂಡುಕೊಳ್ಳಲಾರದು. ನಿಮ್ಮಲ್ಲಿ ಸಾಕಷ್ಟು ಹಣವಿದ್ದು ತೃಪ್ತಿ, ಸಂತೋಷಗಳಿಲ್ಲದಿದ್ದರೆ ನಿಮಗಿಂತ ಬಡವರು ಮತ್ತಾರೂ ಇಲ್ಲ. ಅಮೂಲ್ಯ ಎಂದರೆ ಯಾವುದಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲವೋ ಅದು. ನಮ್ಮ ಜೀವನ ಅಮೂಲ್ಯವಾಗುವುದು ಯಾವಾಗ ಗೊತ್ತೇ? ಎಂದು ಪ್ರಪಂಚದ ಯಾವ ಶಕ್ತಿಯೂ, ಆಸೆಯೂ, ಧನವೂ ನಮ್ಮ ಆತ್ಮಗೌರವವನ್ನು ಕೊಂಡುಕೊಳ್ಳಲು ಅಸಮರ್ಥವಾಗುತ್ತದೆಯೋ ಅಂದೇ ನಮ್ಮ ಬದುಕು ಅಮೂಲ್ಯವಾಗುತ್ತದೆ, ಅಪಾರ ಶ್ರೀಮಂತವಾಗುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.