ಇದರ ವೆಚ್ಚ ಮರಳು ಸಿಗುವ ಜಾಗಕ್ಕೂ ಹೊಲಕ್ಕೂ ಇರುವ ದೂರವನ್ನು ಅವಲಂಬಿಸಿದೆ. ಒಮ್ಮೆ ಮುಚ್ಚಿಗೆ ಮಾಡಿದರೆ ದಶಕದ ವರೆಗೂ ಫಲಿತಾಂಶ ಸಿಗುತ್ತಿರುತ್ತದೆ. ಕೆಲವೆಡೆ ನಾಲ್ಕೈದು ವರ್ಷಕ್ಕೊಮ್ಮೆ ‘ಪ್ಯಾಚ್ ವರ್ಕ್’ ಮಾಡಬೇಕಾಗುತ್ತದೆ.
ಯಲಬುರ್ಗ ತಾಲೂಕಿನ ಬಿನ್ನಾಳ, ಎರೆ ಹಂಚಿನಾಳ, ಚಿಕ್ಕೇನಕೊಪ್ಪ, ಸಿದ್ನೇಕೊಪ್ಪ, ಸೋಂಪುರ, ಪಟಪನಹಳ್ಳಿ, ಮಶೇಹಂಚಿನಾಳ, ಬಂಡಿಹಾಳಗಳಲ್ಲೆಲ್ಲಾ ಇಂದು ‘ಉಸುಕು ಹೇರುವುದು; ಬಹು ಜನಪ್ರಿಯ. ಎಷ್ಟರ ಮಟ್ಟಿಗೆ ಅಂದರೆ, ಏಳು ಹಳ್ಳಿಗಳಲ್ಲಿ ಸುಮಾರು ಮೂರೂವರೆ ಸಾವಿರ ಎಕ್ರೆಯೀಗ ಮರಳಿನ ಚಾದರ ಹೊದ್ದುಕೊಂಡಿದೆ.
ಸಂಗಯ್ಯ ಕುಟುಂಬದ ಒಟ್ಟು 87 ಎಕ್ರೆಯಲ್ಲಿ ಈಗ 48 ಎಕ್ರೆಗೂ ಉಸುಕಿನ ಮುಸುಕು ಇದೆ. ಇದು ಘಟ್ಟಘಟ್ಟವಾಗಿ ಮಾಡುತ್ತಾ ಬಂದ ಬರನಿರೋಧಕ ಜಾಣ್ಮೆ.
ನೆರೆಯ ಸಿದ್ನೇಕೊಪ್ಪದ ಶಂಕರಣ್ಣ ಗದಗೀನ್ 20 ವರ್ಷದಿಂದ ಹೊಲಕ್ಕೆ ಉಸುಕಿನ ಚಾದರ ಹೊದೆಸುತ್ತಾ ಬಂದಿದ್ದಾರೆ. ಇವರ 16 ಎಕ್ರೆಯಲ್ಲಿ ಅರ್ಧದಷ್ಟಕ್ಕೆ ಈಗ ‘ಬೆಳೆ ವಿಮೆ’ ಇಳಿಸಿದಂತಾಗಿದೆ. ಐದು ವರ್ಷದ ಹಿಂದೆ ಎರಡೆಕ್ರೆಗೆ ಉಸುಕು ಹರದಲು ₹60,000 ಕೈ ಬಿಟ್ಟಿತ್ತು. ಅನತಿ ದೂರದಲ್ಲಿ ಉಸುಕು ಸಿಕ್ಕಿದ ಕಾರಣ ಕೆಲಸ ಸೋವಿ ಆಯಿತು.
ಸಂಗಯ್ಯ ಈಚೆಗೆ ಉಸುಕು ಖಾಲಿ ಆದ ಜಾಗಕ್ಕೆ ಪ್ಯಾಚ್ ವರ್ಕ್ ಮಾಡಿದ್ದರು. ಅದಕ್ಕೇ ಎಕ್ರೆಗೆ ₹ 80,000 ತಗಲಿತು. ಹೊಸದಾಗಿ ಹಾಕಿಸಬೇಕಾದರೆ ಎಕರೆಗೆ ₹ 1.20 ಲಕ್ಷ ಬೇಕಾದೀತು ಎನ್ನುತ್ತಾರೆ.
‘ಹಿಂದೆ ಉಸುಕು ಹೇರದೆ ಇದ್ದಾಗ ಎರಡು ಬರವರ್ಷಗಳಲ್ಲಿ ಗುಳೆ ಹೋದ ಕಹಿ ನೆನಪು ಇನ್ನೂ ಮಾಸಿಲ್ಲ’ ಎಂದು ಶಂಕರಣ್ಣ ಭಾವುಕರಾಗಿಬಿಟ್ಟರು. “ಉಸುಕಿನ ದಯೆ ಇಲ್ದಿದ್ರೆ ಈ ವರ್ಷನೂ ಇದೇ ಗತಿ ಬಂದಿರೋದು” ಎನ್ನುವಾಗ ಅವರ ಸ್ವರ ನಡುಗುತ್ತದೆ.
ಕಡು ಬರದಲ್ಲೂ ಸೋಲಲು ಬಿಡದ, ಗುಳೆ ಹೋಗಲು ಆಸ್ಪದವೇ ಕೊಡದ ಮರಳು ಮುಚ್ಚಿಗೆಗೆ ವೆಚ್ಚ ಮಾತ್ರ ಜಾಸ್ತಿ. ಇದಕ್ಕೆ ಯಾವ ಬ್ಯಾಂಕೂ ಸಾಲ ಕೊಡುತ್ತಿಲ್ಲ. ಗ್ರಾಮೀಣ ಬ್ಯಾಂಕು ಕೆಲವೆಡೆ ಒಬ್ಬರಿಗೆ ₹ 25,000 ಕೊಡುತ್ತಿದ್ದು ಇದು ಎಲ್ಲಿಗೂ ಸಾಕಾಗೋದಿಲ್ಲ.
ಹೀಗಾಗಿ ಹಳ್ಳಿಗರು ಹಣ ಹೊಂದಿಸಲು ತಮ್ಮದೇ ದಾರಿ ಕಂಡುಕೊಂಡಿದ್ದಾರೆ. ಅದುವೇ ‘ಕೋರ್ ಮಾಡೋದು’. ಊರಿನ ಸಿರಿವಂತರ ಜತೆ ಬಾಯ್ದೆರೆ ಒಡಂಬಡಿಕೆ ಮಾಡಿ ಈ ಕೆಲಸಕ್ಕೆಂದೇ ಸಾಲ ಪಡೆಯುತ್ತಾರೆ. ಸಾಲ ಹಿಂತಿರುಗಿಸುವ ವರೆಗೆ ಅವರಿಗೆ ಬೆಳೆಯಲ್ಲಿ ಸಮಪಾಲು ಕೊಡುತ್ತಿರಬೇಕು. ಹೀಗೆ ಪಾಲು ಮಾಡಿಕೊಡುವುದನ್ನೇ ‘ಕೋರ್ ಮಾಡೋದು’ ಎನ್ನುತ್ತಾರೆ. ‘ಆದ್ರೂ ಅಡ್ಡಿ ಇಲ್ರೀ, ಒಳ್ಳೆ ಮಳೆ ಸಿಕ್ಕಿದರೆ ಎರಡು-ಮೂರು ವರ್ಷಗಳಲ್ಲಿ ಸಾಲದ ರೊಕ್ಕ ಪೂರ್ತಿ ತೀರಿಸಿಬಿಡಬಹುದು’ ಶಂಕರಣ್ಣ ಬೊಟ್ಟು ಮಾಡುತ್ತಾರೆ.
ದೇಶಮಟ್ಟದಲ್ಲೇ ಕರ್ನಾಟಕ ಅಭಿಮಾನದಿಂದ ಎತ್ತಿ ಹೇಳಬಹುದಾದ ಈ ಬರ ನಿರೋಧಕ ಜಾಣ್ಮೆಯನ್ನು ಏಕೆ ಬ್ಯಾಂಕು ಮತ್ತು ಇಲಾಖೆಗಳು ಕಂಡೂ ಕಾಣದಂತಿವೆ?
ಸಂಗಯ್ಯ ಅವರ ಸಂಪರ್ಕ - 9741999202 (ಮಗ ಅಶೋಕರ ನಂಬರ್), ಶಂಕರಣ್ಣ – 9480299845
(ಸುಳಿವು : ದ್ಯಾಮಣ್ಣ ಜಮಖಂಡಿ)