ಮುಖ್ಯಮಂತ್ರಿ ಕುಡುಗೋಲು ಹಿಡಿಯಲು ನಿರಾಕರಿಸಿದರು. ಆದರೆ ಸಚಿವರು, ವಿಧಾನಪರಿಷತ್ ಸದಸ್ಯರು, ಶಾಸಕರು ಭತ್ತ ಕೊಯ್ಲಿಗೆ ನಿಂತರು. ರೈತರು ಸಾಲಾಗಿ ಭತ್ತ ಕೊಯ್ಲು ಮಾಡಿ ಕಂತೆ ಕಟ್ಟಲು ಒಂದು ಕಡೆ ಸಾಲಾಗಿ ಇಟ್ಟರು. ಆದರೆ ಈ ಜನಪ್ರತಿನಿಧಿಗಳು ಕೊಯ್ಲು ಮಾಡಿದ ಭತ್ತವನ್ನು ಕಾಲ ಕೆಳಗೆ ಹಾಕಿ ತುಳಿದಾಡಿದರು. ಅವರಿಗೆ ಕೊಯ್ಲು ಅಂದರೆ ಕುಯ್ಯುವಷ್ಟೇ ಗೊತ್ತು, ಕೊಯ್ದ ಭತ್ತವನ್ನು ಸಂರಕ್ಷಿಸುವ ಕೃಷಿ ಗೊತ್ತಿಲ್ಲ. ಇದನ್ನು ಕಂಡ ರೈತ ಮಹಿಳೆಯೊಬ್ಬರು ‘ಮಣ್ಣಿನ ಮಕ್ಕಳು ಭತ್ತದ ಕಾಳನ್ನು ಮಣ್ಣು ಪಾಲು ಮಾಡಿದರು’ ಎಂದು ಮೂದಲಿಸಿದರು. ಇನ್ನೊಂದೆಡೆ ಗದ್ದೆಯ ಮಾಲೀಕ ‘ಅಯ್ಯೋ, ನನ್ನ ಗದ್ದೆ ಹಾಳಾಯ್ತು’ ಎಂದು ಗೋಳಿಟ್ಟದ್ದು ಯಾರಿಗೂ ಕೇಳಿಸಲಿಲ್ಲ!