ಬಿಹಾರದಲ್ಲಿ ಲಲ್ಲೂ ನೇತೃತ್ವದ ಸರ್ಕಾರ ಪಟ್ನಾ, ಏ. 3 (ಪಿಟಿಐ)– ಬಿಹಾರ ಜನತಾದಳ ಶಾಸಕಾಂಗ ಪಕ್ಷದ ನಾಯಕರಾಗಿ ಲಲ್ಲೂ ಪ್ರಸಾದ್ ಯಾದವ್ ಅವರು ಇಂದು ಸರ್ವಾನುಮತದಿಂದ ಪುನರಾಯ್ಕೆಯಾದರು.
ರಾಜ್ಯದಲ್ಲಿ ಸರ್ಕಾರ ರಚಿಸುವಂತೆ ಲಲ್ಲೂ ಅವರನ್ನು ರಾಜ್ಯಪಾಲ ಎ.ಆರ್. ಕಿದ್ವಾಯಿ ಆಹ್ವಾನಿಸಿದ್ದು, ನಾಳೆ ಸಂಜೆ 4 ಗಂಟೆಗೆ ಐತಿಹಾಸಿಕ ಗಾಂಧಿ ಮೈದಾನದಲ್ಲಿ ಇರುವ ಲೋಕನಾಯಕ ಜಯಪ್ರಕಾಶ್ ನಾರಾಯಣ ಅವರ ಪ್ರತಿಮೆ ಎದುರು ಲಲ್ಲೂ ಸಂಪುಟ ಅಧಿಕಾರ ವಹಿಸಿಕೊಳ್ಳಲಿದೆ.
ಜೈನ್ ಆಯೋಗದ ಮುಂದೆ ಸರ್ಕಾರ– ಕಾಂಗೈ ಘರ್ಷಣೆ ನವದೆಹಲಿ, ಏ. 3 (ಯುಎನ್ಐ)– ರಾಜೀವ್ ಗಾಂಧಿ ಕಗ್ಗೊಲೆ ಸಂಚಿನ ವಿಚಾರಣೆ ನಡೆಸಿರುವ ಜೈನ್ ಆಯೋಗದ ಮುಂದೆ ಕೇಂದ್ರ ಸರ್ಕಾರ ಮತ್ತು ಎಐಸಿಸಿ ವಕೀಲರ ನಡುವೆ ಬಿಸಿ ವಾಗ್ವಾದ ಏರ್ಪಟ್ಟಿತು.
ಎಐಸಿಸಿ ವಕೀಲರು ಕೇಳಿರುವ ಕೆಲ ಕಡತಗಳನ್ನು ಪತ್ತೆ ಹಚ್ಚಲು ಪ್ರಯತ್ನಿಸಲಾಗುತ್ತಿದೆ. ಅವು ಪ್ರಧಾನಿ ಕಚೇರಿಯಲ್ಲಿ ಪತ್ತೆಯಾಗಿಲ್ಲ. ಹುಡುಕಾಟ ನಡೆದಿದೆ ಎಂದು ಸರ್ಕಾರಿ ವಕೀಲ ಬಿ. ದತ್ತಾ ಅವರು ಆಯೋಗಕ್ಕೆ ತಿಳಿಸಿದ್ದಕ್ಕೆ ಎಐಸಿಸಿ ವಕೀಲ ತೀವ್ರವಾಗಿ ಆಕ್ಷೇಪಿಸಿದರು.