ವೈದ್ಯಕೀಯ ಪ್ರವೇಶಕ್ಕೆ ಸೂಕ್ತ ಕಾಯ್ದೆ ಕೇಂದ್ರಕ್ಕೆ ಗೌಡ ಆಗ್ರಹ
ನವದೆಹಲಿ, ಏ. 14– ರಾಜ್ಯದಲ್ಲಿನ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ನೀಡುವುದರಲ್ಲಿ ಉಂಟಾಗಿರುವ ಗೊಂದಲಾತ್ಮಕ ಸ್ಥಿತಿಯನ್ನು ಇಂದು ಇಲ್ಲಿ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರಿಗೆ ವಿವರಿಸಿದ ಮುಖ್ಯಮಂತ್ರಿ ದೇವೇಗೌಡ ಅವರು ಈ ದಿಸೆಯಲ್ಲಿ ಸೂಕ್ತ ಕಾನೂನು ರೂಪಿಸುವಂತೆ ಮನವಿ ಮಾಡಿದರು.
ಮಣಿಪಾಲ ವೈದ್ಯಕೀಯ ಕಾಲೇಜು ‘ಗೌರವ ವಿಶ್ವವಿದ್ಯಾಲಯ’ ಸ್ಥಾನಮಾನ ಹೊಂದಿರುವ ಹಿನ್ನೆಲೆಯಲ್ಲಿ ಶೇಕಡ 100ರಷ್ಟು ಸ್ಥಾನ ತುಂಬಿಕೊಳ್ಳಲು ಆಡಳಿತ ವರ್ಗಕ್ಕೆ ಸ್ವಾತಂತ್ರ್ಯ ನೀಡಲಾಗಿದೆ. ಕ್ರೈಸ್ತರ ಸಂಸ್ಥೆಗಳಿಗೆ ಶೇಕಡ 75 ಮತ್ತು ಮುಸ್ಲಿಂ ವೈದ್ಯಕೀಯ ಕಾಲೇಜುಗಳ ಆಡಳಿತ ವರ್ಗಕ್ಕೆ ಶೇಕಡ 50ರಷ್ಟು ಸ್ಥಾನ ನೀಡಲಾಗಿದೆ. ಕೆಲವು ಹಿಂದೂ ಮಠಾಧೀಶರು ಹಾಗೂ ಪರಿಶಿಷ್ಟ ವರ್ಗದವರು ನಡೆಸುತ್ತಿರುವ ವೈದ್ಯಕೀಯ ಕಾಲೇಜುಗಳ ಆಡಳಿತ ಮಂಡಲಿಗೆ ಶೇಕಡ 10ರಷ್ಟು ಸ್ಥಾನ ಮಾತ್ರ ಬಿಟ್ಟುಕೊಡಲಾಗಿದೆ ಎಂದು ವಿವರಿಸಿದರು.
ಭಾರತಕ್ಕೆ ಮತ್ತೆ ಏಷ್ಯಾ ಕಪ್
ಷಾರ್ಜಾ, ಏ. 14– ಶ್ರೀಲಂಕಾ ತಂಡವನ್ನು 8 ವಿಕೆಟ್ಗಳಿಂದ ಅನಾಯಾಸವಾಗಿ ಸೋಲಿಸಿದ ಭಾರತ ತಂಡದವರು ಇಂದು ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ಪ್ರಶಸ್ತಿ ಗೆಲ್ಲುವ ಮೂಲಕ ‘ಷಾರ್ಜಾ ಶಾಪ’ದಿಂದ ವಿಮೋಚನೆ ಪಡೆದರು.
ಅಜೇಯ 90 ರನ್ಗಳೊಡನೆ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ನಾಯಕ ಅಜರುದ್ದೀನ್ ಪಂದ್ಯದ ಪುರುಷೋತ್ತಮರಾದರು.