ರಾಜ್ಯದ ಮನವಿ ತಿರಸ್ಕೃತ: ವಾಸುದೇವನ್ ಕ್ಷಮೆಗೆ ಮತ್ತೆ ಸುಪ್ರೀಂ ಕೋರ್ಟ್ ನಕಾರ
ನವದೆಹಲಿ, ಸೆ. 14– ನ್ಯಾಯಾಲಯ ನಿಂದನೆಗಾಗಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಹಿರಿಯ ಐಎಎಸ್ ಅಧಿಕಾರಿ ಮತ್ತು ರಾಜ್ಯದ ವಸತಿ ಹಾಗೂ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ
ಜೆ. ವಾಸುದೇವನ್ ಅವರಿಗೆ ಕ್ಷಮಾದಾನ ನೀಡುವಂತೆ ಕರ್ನಾಟಕ ಸರ್ಕಾರ ಮಾಡಿಕೊಂಡ ಮನವಿಯನ್ನು ಸುಪ್ರೀಂ ಕೋರ್ಟ್ ಇಂದು ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಿತು.
ಇದರಿಂದಾಗಿ ವಾಸುದೇವನ್ ಅವರು ಒಂದು ತಿಂಗಳು ಸಾದಾ ಸಜೆ ಪೂರ್ಣಗೊಳಿಸುವುದು ಅನಿವಾರ್ಯವಾಗಿದೆ. ಈ ಮುನ್ನ ಇದೇ ರೀತಿ ಕ್ಷಮೆ ಕೋರಿ ಸ್ವತಃ ಅವರೇ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ಸೆ.8ರಂದು ತಳ್ಳಿ ಹಾಕಿ ಶಿಕ್ಷೆ ಕಾಯಂ ಮಾಡಿತ್ತು.
ಪ್ರಧಾನಿ ವ್ಯರ್ಥ ಕಸರತ್ತು ವಾಜಪೇಯಿ ಟೀಕೆ
ಲಖನೌ, ಸೆ. 14 (ಯುಎನ್ಐ)– ಪ್ರಧಾನಿ ಪಿ.ವಿ. ನರಸಿಂಹರಾವ್ ಅವರು ನಡೆಸಿರುವ ಕೇಂದ್ರ ಸಂಪುಟ ಪುನರ್ರಚನೆ ‘ವ್ಯರ್ಥ ಕಸರತ್ತು’ ಎಂದು ಲೋಕಸಭೆಯ ಪ್ರತಿಪಕ್ಷದ ನಾಯಕ ಅಟಲ್ ಬಿಹಾರಿ ವಾಜಪೇಯಿ ಇಂದು ಟೀಕಿಸಿದರು.
‘ಸಂಪುಟ ಪುನರ್ರಚನೆ ಮಾಡಲು ಕಾಂಗೈ ಪಕ್ಷದೊಳಗಿನ ಆಂತರಿಕ ಸಮಸ್ಯೆಗಳೇ ಕಾರಣ ಎನ್ನಬಹುದು. ಲೋಕಸಭೆಯು ತನ್ನ ಅವಧಿ ಮುಗಿಸಲು ಸನಿಹವಾಗುತ್ತಿರುವಾಗ ನಡೆಸಲಾಗಿರುವ ಈ ಸಂಪುಟ ಪುನರ್ರಚನೆಯಿಂದ ನರಸಿಂಹರಾವ್ರಿಗೆ ಹೆಚ್ಚಿನ ಲಾಭವೇನೂ ಆಗದು’ ಎಂದು ವಾಜಪೇಯಿ ಹೇಳಿದರು.