ಬೆಂಗಳೂರು, ಡಿ. 12– ಮುಖ್ಯಮಂತ್ರಿಯಾಗಿ ಭಾನುವಾರ ಅಧಿಕಾರ ವಹಿಸಿಕೊಂಡ ಎಚ್.ಡಿ. ದೇವೇಗೌಡ ಅವರು ಗುರುವಾರ (ಡಿಸೆಂಬರ್ 15) ಸಂಪುಟ ವಿಸ್ತರಿಸುವ ಹಿನ್ನೆಲೆಯಲ್ಲಿ ಶಾಸಕರೊಂದಿಗೆ ಸಮಾಲೋಚನೆ ಆರಂಭಿಸಿದ್ದಾರೆ.
ಆಂಧ್ರ ಪ್ರದೇಶದಲ್ಲಿ ಇಂದು ಅಧಿಕಾರಗ್ರಹಣ ಮಾಡುತ್ತಿರುವ ಎನ್.ಟಿ.ರಾಮರಾವ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಬೇಕಾಗಿದ್ದರೂ ಪಕ್ಷದ ವರಿಷ್ಠರು ತೆರಳಿರುವುದರಿಂದ ಗೌಡರು ಮಂತ್ರಿಮಂಡಲ ರಚನೆಯಲ್ಲಿ ತೊಡಗಿದ್ದಾರೆ.
ಆಂಧ್ರ: ಪಾನ ನಿಷೇಧ ಜಾರಿಗೆ ಕ್ರಮ
ಹೈದರಾಬಾದ್, ಡಿ. 12– (ಪಿಟಿಐ, ಯುಎನ್ಐ)– ಮೂರನೇ ಬಾರಿಗೆ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ ತೆಲುಗು ದೇಶಂ ನಾಯಕ ಎನ್.ಟಿ. ರಾಮರಾವ್ ಚುನಾವಣೆಗೂ ಮುನ್ನ ನೀಡಿದ್ದ ಆಶ್ವಾಸನೆಯಂತೆ ರಾಜ್ಯದಲ್ಲಿ ಕೂಡಲೇ ಸಂಪೂರ್ಣ ಪಾನ ನಿಷೇಧ ಜಾರಿಗೊಳಿಸುವುದಾಗಿ ಘೋಷಿಸಿದ್ದಾರೆ.
ಇಲ್ಲಿನ ಲಾಲ್ ಬಹದ್ದೂರ್ ಕ್ರೀಡಾಂಗಣದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಅವರು, ಸಭಿಕರನ್ನುದ್ದೇಶಿಸಿ ಮಾತನಾಡಿದರು.
ಕುಪ್ಪಳಿ ಸುತ್ತ ಕುವೆಂಪು ಸ್ಮಾರಕ ಜೈವಿಕ ಧಾಮ
ಮೈಸೂರು, ಡಿ. 12 – ದಿವಂಗತ ಕುವೆಂಪು ಅವರ ಪ್ರಕೃತಿ ಪ್ರೇಮವನ್ನು ಅರ್ಥ ಮಾಡಿಕೊಂಡು ಈ ದಿಕ್ಕಿನಲ್ಲಿ ಅವರಿಗೆ ಸಲ್ಲಿಸಬಹುದಾದ ಅತ್ಯುತ್ತಮ ಗೌರವವಾಗಿ ಕರ್ನಾಟಕ ಸರ್ಕಾರ ಕುಪ್ಪಳಿ ಸುತ್ತಮುತ್ತಲಿನ ಮೂರು ಸಾವಿರಕ್ಕೂ ಅಧಿಕ ಎಕರೆ ಅರಣ್ಯ ಪ್ರದೇಶವನ್ನು ‘ಕುವೆಂಪು ಸ್ಮಾರಕ ಜೈವಿಕ ಧಾಮ’ ಎಂದು ಘೋಷಿಸಿದೆ.
ಈ ಬಗ್ಗೆ ರಾಜ್ಯಪಾಲರು ಸುಗ್ರೀವಾಜ್ಞೆಯೊಂದನ್ನು ಹೊರಡಿಸಿದ್ದಾರೆ.