ಪ್ರತಿಭಟನೆ ಅಬ್ಬರದ ಮಧ್ಯೆ ಸಮರೋಪಾದಿ ಕ್ರೀಡಾಗ್ರಾಮ ನಿರ್ಮಾಣ ಬೆಂಗಳೂರು, ಮಾರ್ಚಿ 10– ರಾಷ್ಟ್ರೀಯ ಕ್ರೀಡಾಕೂಟಕ್ಕೆ ಬರುವ ಕ್ರೀಡಾಪಟುಗಳು ಹಾಗೂ ಇತರ ಗಣ್ಯರ ‘ಆತಿಥ್ಯ’ಕ್ಕಾಗಿ ಬೆಂಗಳೂರಿನ ಕೋರಮಂಗಲದ ಕೆರೆಯಂಗಳ ಸಜ್ಜುಗೊಳ್ಳುತ್ತಿದೆ. ಹಲವು ಬಗೆಯ ಅನುಮಾನ– ಅಪಸ್ವರಗಳ ಮಧ್ಯೆಯೂ ಈ ‘ಕ್ರೀಡಾಗ್ರಾಮ’ದ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.
ಈ ಬಹುಮಹಡಿ ಕ್ರೀಡಾ ವಸತಿ ಸಮುಚ್ಚಯ ನಿರ್ಮಾಣ ಕಾರ್ಯದ ಗುತ್ತಿಗೆ ವ್ಯವಹಾರದಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂಬ ಭಾರತೀಯ ಜನತಾ ಪಕ್ಷದ ಮುಖಂಡರ ಪ್ರತಿಭಟನೆಯ ಅಬ್ಬರದಷ್ಟೇ ಜೋರಾಗಿ ನಿರ್ಮಾಣ ಕೆಲಸವೂ ನಡೆದಿದೆ.
ಪಾಲಿಕೆ, ಪುರಸಭೆಗಳಿಗೆ ಆಡಳಿತಾಧಿಕಾರಿ ಸಂಭವ ಬೆಂಗಳೂರು, ಮಾರ್ಚಿ 10– ರಾಜ್ಯದ ಬಹುತೇಕ ನಗರಸಭೆ, ಪುರಸಭೆ ಹಾಗೂ ಮಹಾನಗರ ಪಾಲಿಕೆಗಳ ಅಧಿಕಾರಾವಧಿ ಏಪ್ರಿಲ್ ತಿಂಗಳಿಗೆ ಮುಗಿಯಲಿದ್ದು, ಆಡಳಿತಾಧಿಕಾರಿಗಳನ್ನು ನೇಮಿಸುವ ಸಂಭವವಿದೆ.
ಬೆಂಗಳೂರು ಮಹಾ ನಗರಪಾಲಿಕೆಯನ್ನು ವಿಸರ್ಜಿಸಿ ಏಪ್ರಿಲ್ 1ರಿಂದ ಆಡಳಿತಾಧಿಕಾರಿಯನ್ನು ನೇಮಿಸಲಾಗುವುದು ಎಂದು ಬೆಂಗಳೂರು ನಗರ ಅಭಿವೃದ್ಧಿ ಖಾತೆ ಸಚಿವ ರೋಷನ್ ಬೇಗ್ ಅವರು ಇಂದು ಇಲ್ಲಿ ಹೇಳಿರುವ ಹಿನ್ನೆಲೆಯಲ್ಲಿ, ಉಳಿದ ಎಲ್ಲ ಪುರಸಭೆ ಹಾಗೂ ನಗರ ಪಾಲಿಕೆಗಳಿಗೂ ಇದು ಅನ್ವಯವಾಗುವ ಸೂಚನೆಗಳಿವೆ.
ರಾಜ್ಯದ 170 ಪುರಸಭೆ, 19 ನಗರ ಸಭೆ, 6 ನಗರಪಾಲಿಕೆಗಳ ಅಧಿಕಾರದ ಅವಧಿ ಏಪ್ರಿಲ್ಗೆ ಮುಗಿಯಲಿದೆ.