ನವದೆಹಲಿ, ಡಿ.18– ಮಹಾತ್ಮ ಗಾಂಧಿ ಅವರು ಗುಂಡಿಗೆ ಬಲಿಯಾದ ಬಿರ್ಲಾ ಮಂದಿರದ ಮೈದಾನವನ್ನು ಕೇಂದ್ರ ಸರ್ಕಾರ ತನ್ನ ವಶಕ್ಕೆ ತೆಗೆದುಕೊಳ್ಳುವುದೆಂದು ಕಾಮಗಾರಿ ಮತ್ತು ವಸತಿ ಶಾಖಾ ಜಗನ್ನಾಥರಾವ್ ಅವರು ಇಂದು ಲೋಕಸಭೆಯಲ್ಲಿ ಪ್ರಕಟಿಸಿದರು.
ಬರುವ ವಾರ ರಾಜ್ಯದ ನಾಲ್ಕನೆ ಯೋಜನೆ ಬಗ್ಗೆ ಇತ್ಯರ್ಥ
ಬೆಂಗಳೂರು, ಡಿ.18– ರಾಜ್ಯದ ನಾಲ್ಕನೆ ಯೋಜನೆಯ ಗಾತ್ರವನ್ನು ಯೋಜನಾ ಆಯೋಗ ಮುಂದಿನ ವಾರದಲ್ಲಿ ಆಖೈರುಗೊಳಿಸುವ ನಿರೀಕ್ಷೆಯಿದೆ.
ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಈ ವಿಷಯವನ್ನು ಆಯೋಗದೊಂದಿಗೆ ದೆಹಲಿಯಲ್ಲಿ ಡಿ.24 ರಂದು ಚರ್ಚಿಸುವರು.
ಚನ್ನಾರೆಡ್ಡಿ ಅವರಿಂದ ಭ್ರಷ್ಟಾಚಾರ: ಸುಪ್ರೀಂಕೋರ್ಟ್ ತೀರ್ಪು
ನವದೆಹಲಿ, ಡಿ.18– ಸಾರ್ವತ್ರಿಕ ಚುನಾವಣೆಗಳಲ್ಲಿ ಕೋಮು ಭಾವನೆಗಳನ್ನು ಕೆರಳಿಸಿ ಕೇಂದ್ರ ಮಾಜಿ ಉಕ್ಕು ಸಚಿವ ಎಂ. ಚನ್ನಾರೆಡ್ಡಿಯವರು ಆಯ್ಕೆಯಾಗಿದ್ದಾರೆ. ಅವರಿಂದ ಭ್ರಷ್ಟಾಚಾರ ನಡೆದಿದೆ ಎಂದು ಸುಪ್ರೀಂ ನ್ಯಾಯಾಲಯ ಇಂದು ತೀರ್ಪಿತ್ತಿತು.
ತೀನ್ಮೂರ್ತಿಯಲ್ಲಿ ಪ್ರಧಾನಿ ವಾಸ
ನವದೆಹಲಿ, ಡಿ.18– ನೆಹ್ರೂ ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ಪುಸ್ತಕ ಭಂಡಾರಕ್ಕೆ ಸೂಕ್ತ ಸ್ಥಳವನ್ನು ಆರಿಸಿದ ನಂತರ ಪ್ರಧಾನಿ ತೀನ್ಮೂರ್ತಿ ಭವನಕ್ಕೆ ಹೋಗುವರು ಎಂದು ಗೃಹನಿರ್ಮಾಣ ಸಚಿವ ಜಗನ್ನಾಥರಾವ್ ಇಂದು ರಾಜ್ಯಸಭೆಯಲ್ಲಿ ಸ್ಪಷ್ಟಪಡಿಸಿದರು.