ಕೃಷ್ಣಾ–ಗೋದಾವರಿ ಜಲ ವಿವಾದಒಂದೇ ಪಂಚಾಯ್ತಿ ಇತ್ಯರ್ಥಪಡಿಸಲೆಂದು ಆಗ್ರಹ
ಬೆಂಗಳೂರು, ಫೆ. 23– ಕೃಷ್ಣಾ–ಗೋದಾವರಿ ಜಲ ವಿವಾದ ಇತ್ಯರ್ಥಕ್ಕೆಎರಡು ಪಂಚಾಯ್ತಿಗಳ ನೇಮಕದ ಸೂಚನೆಯನ್ನು ‘ತೀವ್ರವಾಗಿ ವಿರೋಧಿಸಿದ’ ಮೈಸೂರು ಪ್ರದೇಶ ಕಾಂಗ್ರೆಸ್ ಸಮಿತಿಯು ‘ಸ್ವಲ್ಪವೂ ತಡಮಾಡದೆ ಒಂದೇ ಪಂಚಾಯ್ತಿ ನೇಮಿಸಬೇಕು’ ಎಂದು ಕೇಂದ್ರ ಸರ್ಕಾರವನ್ನು ಆಗ್ರಹಪಡಿಸಿದೆ.
ಎರಡು ಪಂಚಾಯ್ತಿಗಳ ಸೂಚನೆ ದೆಹಲಿಯಿಂದ ಪ್ರಕಟವಾದಂದಿನಿಂದ, ರಾಜ್ಯ ಸರ್ಕಾರ ಅದರ ಬಗ್ಗೆ ತಳೆದ ವಿರೋಧಿ ನಿಲುವನ್ನು ನಿರ್ಣಯವೊಂದನ್ನು ಅಂಗೀಕರಿಸಿ ಸಮರ್ಥಿಸಿದ ಎಂ.ಪಿ.ಸಿ.ಸಿ.ಯ ಸರ್ವ ಸದಸ್ಯರ ಸಭೆಯು ‘ಕೇಂದ್ರದ ಈ ಆಲೋಚನೆ ವಿಷಾದನೀಯ ಹಾಗೂ ವಿಹಿತವಲ್ಲ’ ಎಂದು ಸ್ಪಷ್ಟಪಡಿಸಿದೆ.
ಹಲವರು ಸದಸ್ಯರಿಂದ ಕಟುಟೀಕೆಗೆ ಒಳಗಾದ, ಈ ಪ್ರಶ್ನೆಯ ಸಂಬಂಧದ ಕೇಂದ್ರದ ನಿಲುವು, ರಾಜ್ಯಗಳ ನಡುವೆ ತಾರತಮ್ಯ ತೋರುವ ಅಹಿತಕರ ಪ್ರವೃತ್ತಿಯಾಗಿದೆ ಎಂದು ಖಂಡಿಸಲ್ಪಟ್ಟಿತು. ಶ್ರೀ ಎಸ್.ಬಿ. ಪಾಟೀಲ್ ಅವರು ನಿರ್ಣಯವನ್ನು ಸೂಚಿಸಿದರು. ಶ್ರೀ ಎಂ.ಪಿ. ರಾಜಶೇಖರನ್ ಅವರು ಅನುಮೋದಿಸಿದರು.
**
ಕಾಂಗ್ರೆಸ್ ದುಸ್ಥಿತಿ, ಹೊಸ ರಾಜಕೀಯಧೋರಣೆ ಚರ್ಚೆಗೆ ನಂದಾ ಕರೆ
ನವದೆಹಲಿ, ಫೆ. 23– ಮಧ್ಯಂತರ ಚುನಾವಣೆ ನಡೆದ ನಂತರದ ಕಾಂಗ್ರೆಸ್ ಪಕ್ಷದ ಸ್ಥಿತಿ ಹಾಗೂ ರಾಷ್ಟ್ರದಲ್ಲಿ ಇತ್ತೀಚೆಗೆ ಕಾಣಿಸಿಕೊಂಡ ಹೊಸ ರಾಜಕೀಯ ಧೋರಣೆಯನ್ನು ಕುರಿತು ಚರ್ಚಿಸಲು ಬುಧವಾರದಂದು ಕೆಲವು ಕಾಂಗ್ರೆಸ್ ಸದಸ್ಯರ ಸಭೆಯನ್ನು ಮಾಜಿ ಗೃಹಸಚಿವ ಶ್ರೀ ಜಿ.ಎಲ್. ನಂದಾ ಕರೆದಿದ್ದಾರೆ.
**
ಸಂಯುಕ್ತ ರಂಗದ ಕಾರ್ಯಕ್ರಮರಾಜ್ಯಗಳಿಗೆ ಹೆಚ್ಚಿನ ಅಧಿಕಾರ, ಸ್ವಾಯತ್ತತೆಗೆಬಂಗಾಳ ಹೊಸ ಸರ್ಕಾರದಿಂದ ಯತ್ನ
ಕಲ್ಕತ್ತ, ಫೆ. 23– ರಾಜ್ಯಗಳಿಗೆ ಹೆಚ್ಚಿನ ಸ್ವಾಯತ್ತತೆ ಹಾಗೂ ಅಧಿಕಾರ ದೊರಕಿಸಿಕೊಳ್ಳುವುದಕ್ಕಾಗಿ ಕೇಂದ್ರ–ರಾಜ್ಯ ಬಾಂಧವ್ಯಕ್ಕೆ ಸಂಬಂಧಿಸಿದ ರಾಜ್ಯಂಗದ ವಿಧಿಗಳನ್ನು ಬದಲಾಯಿಸಲು ಪಶ್ಚಿಮ ಬಂಗಾಳದ ಸಂಯುಕ್ತ ರಂಗ ಸರ್ಕಾರ ಯತ್ನಿಸುವುದು.
**
ಜೋರ್ಡಾನ್ ಮೇಲೆ ಇಸ್ರೇಲಿ ವಿಮಾನಗಳಿಂದ ನಿರಂತರ ಬಾಂಬ್ ದಾಳಿ
ಅಮ್ಮಾನ್, ಫೆ. 23– ಇಂದು ಮಧ್ಯಾಹ್ನ ದಕ್ಷಿಣ ಜೋರ್ಡಾನ್ ಪ್ರದೇಶದಲ್ಲಿ ಏಳು ಇಸ್ರೇಲಿ ವಿಮಾನಗಳು 80 ನಿಮಿಷಗಳ ಕಾಲ ಬಾಂಬ್ ದಾಳಿ ನಡೆಸಿದವೆಂದು ಜೋರ್ಡಾನಿನ ಮಿಲಿಟರಿ ವಕ್ತಾರರೊಬ್ಬರು ಇಂದು ಪ್ರಕಟಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.