ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಡಿಜಿಟಲ್ ಹಣಕಾಸು: ಇಲ್ಲ ರಕ್ಷಣೆ

ವಂಚನೆಯ ಜಾಲಗಳಿಂದ ಪಾರಾಗಲು ಗ್ರಾಹಕರಿಗೆ ಬೇಕು ಆರ್ಥಿಕ ಸಾಕ್ಷರತೆ
Last Updated 14 ಮಾರ್ಚ್ 2022, 18:45 IST
ಅಕ್ಷರ ಗಾತ್ರ

ಬ್ಯಾಂಕ್ ಮತ್ತು ಹಣಕಾಸು ವ್ಯವಹಾರಗಳಲ್ಲಿ ಡಿಜಿಟಲ್ ತಂತ್ರಜ್ಞಾನದ ಪ್ರವೇಶದಿಂದ ಗ್ರಾಹಕರ ಬದುಕು ಬಹಳ ಸರಳವಾಗಿದೆ. ತಿಂಗಳುಗಟ್ಟಲೆ ಅಲೆದರೂ ಅವರು ಕೇಳುವ ಎಲ್ಲಾ ದಾಖಲೆಗಳನ್ನು ಒದಗಿಸಿದರೂ ಬ್ಯಾಂಕ್‌ನಲ್ಲಿ ಒಂದು ಖಾತೆ ತೆರೆಯುವುದಕ್ಕೆ ಅಥವಾ ಒಂದೆರಡು ಲಕ್ಷ ರೂಪಾಯಿ ಸಾಲ ಪಡೆಯುವುದಕ್ಕೆ ಪರದಾಡುತ್ತಿದ್ದ ಗ್ರಾಹಕರು ಈಗ ಮೊಬೈಲ್ ಮೂಲಕ ಕುಳಿತಲ್ಲೇ ಎಲ್ಲಾ ವ್ಯವಹಾರಗಳನ್ನು ನಿರ್ವಹಿಸಬಹುದಾಗಿದೆ.

ಗ್ರಾಹಕರು ಕೇಳದಿದ್ದರೂ ಅರ್ಜಿ ಸಲ್ಲಿಸದಿದ್ದರೂ ದಾಖಲೆ ನೀಡದಿದ್ದರೂ ಸಾಲ ಮಂಜೂರಾಗಿ ಖಾತೆಗೆ ಹಣ ಜಮಾ ಆಗುತ್ತದೆ. ಆದರೆ ಈ ವಿಶ್ವದಲ್ಲಿ ಯಾವುದೂ ಪುಕ್ಕಟೆಯಾಗಿ ದೊರೆಯುವುದಿಲ್ಲ ಎಂಬುದನ್ನು ಗ್ರಾಹಕರು ಅರ್ಥಮಾಡಿಕೊಳ್ಳುವ ಕಾಲ ಬಂದಿದೆ. ಹಣಕಾಸು ವ್ಯವಹಾರದಲ್ಲಿ ಡಿಜಿಟಲ್ (ಫಿನ್‍ಟೆಕ್) ತಂತ್ರಜ್ಞಾನ ಕೆಲವೊಂದು ಸಮಸ್ಯೆಗಳನ್ನು ತಂದೊಡ್ಡಿದೆ.

ಫಿನ್‍ಟೆಕ್ ಮೂಲಕ ಹಣಕಾಸು ವ್ಯವಹಾರ ಅನೇಕ ವರ್ಷಗಳಿಂದ ನಡೆದು ಬಂದಿದ್ದರೂ ಮೊಬೈಲ್ ಬಂದ ನಂತರ ಅದರ ವ್ಯಾಪ್ತಿ ಮತ್ತು ಪ್ರಮಾಣ ಹೆಚ್ಚಾಗಿದೆ. ಈ ಬೆಳವಣಿಗೆಗೆ ಕೋವಿಡ್-19 ಮತ್ತೊಂದು ಕಾರಣ ವಾಗಿದೆ. ಅಭಿವೃದ್ಧಿ ಹೊಂದುತ್ತಿರುವ ಶೇ 64ರಷ್ಟು ರಾಷ್ಟ್ರಗಳಲ್ಲಿ ಮೊಬೈಲ್ ಮೂಲಕವೇ ಹಣಕಾಸು ವ್ಯವಹಾರ ನಡೆಯುತ್ತಿದ್ದು, ಮುಂದಿನ ವರ್ಷಗಳಲ್ಲಿ ಇದು ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.

ಟ್ರಾಕ್ಸನ್ (Tracxn) ಕಂಪನಿ ನೀಡಿರುವ ವರದಿ ಪ್ರಕಾರ, ಭಾರತದಲ್ಲಿ ಸದ್ಯ 4,680 ಫಿನ್‍ಟೆಕ್ ಕಂಪನಿ ಗಳಿವೆ. ಆರ್‌ಬಿಐ ವರದಿಯಂತೆ, ಬ್ಯಾಂಕುಗಳು 1.12 ಲಕ್ಷ ಕೋಟಿ ರೂಪಾಯಿ ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್‍ಬಿಎಫ್‌ಸಿ) 0.23 ಲಕ್ಷ ಕೋಟಿ ರೂಪಾಯಿಯನ್ನು ಡಿಜಿಟಲ್ ಸಾಧನದ ಮೂಲಕ ವಿತರಿಸಿವೆ. ಸಾಂಪ್ರದಾಯಿಕ ಬ್ಯಾಂಕ್ ವ್ಯವಸ್ಥೆಯಿಂದ ಹೊರಗೆ ಉಳಿದಿದ್ದ ಗ್ರಾಹಕರು ಈಗ ಮುಖ್ಯವಾಹಿನಿಗೆ ಬಂದಿದ್ದಾರೆ. ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳಿಗೆ ಫಿನ್‍ಟೆಕ್ ಮೂಲಕ ಸುಲಭವಾಗಿ ಸಾಲ ಮತ್ತು ಇತರ ಆರ್ಥಿಕ ನೆರವು ದೊರೆಯುತ್ತಿದೆ. ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಯೋಜನೆಗಳನ್ನು ಫಿನ್‍ಟೆಕ್ ಒದಗಿಸುತ್ತದೆ.

ಫಿನ್‍ಟೆಕ್‍ನಿಂದ ಗ್ರಾಹಕರಿಗೆ ದೊರೆಯುತ್ತಿರುವ ಸೌಲಭ್ಯಗಳ ಪಟ್ಟಿ ದೊಡ್ಡದಾಗಿದ್ದರೂ ಇದನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ವ್ಯಕ್ತಿಗಳ ಸಂಖ್ಯೆಯೂ ಬಹಳಷ್ಟಿದೆ. ಅನುಚಿತ ವ್ಯಾಪಾರ ಪದ್ಧತಿ, ವೈಯಕ್ತಿಕ ಮಾಹಿತಿ ಸೋರಿಕೆ, ಸಾಲದ ಮೇಲೆ ಅಧಿಕ ಬಡ್ಡಿ, ಗ್ರಾಹಕರ ಕುಂದುಕೊರತೆ ನಿವಾರಿಸಲು ಯಾವುದೇ ವ್ಯವಸ್ಥೆ ಇಲ್ಲದಿರುವಂತಹ ಸಮಸ್ಯೆಗಳು ಉದ್ಭವಿಸಿವೆ. ಸಾಲ ವಸೂಲಾತಿಗೆ ಅನುಸರಿಸುವ ಮಾರ್ಗ ಸಹ ಅಮಾನವೀಯವಾಗಿದೆ. ಕೆಲವು ಕಂಪನಿಗಳು ಗೂಂಡಾಗಳನ್ನು ಬಳಸಿಕೊಂಡು ಗ್ರಾಹಕರನ್ನು ಥಳಿಸಿದ್ದೂ ಇದೆ. ಈ ಕಿರುಕುಳ ತಡೆಯಲಾರದೆ ಗ್ರಾಹಕರು ಆತ್ಮಹತ್ಯೆ ಮಾಡಿಕೊಂಡಿರುವುದೂ ವರದಿಯಾಗಿದೆ. ಮುಖ್ಯವಾಗಿ ಡಿಜಿಟಲ್ ಲೆಂಡಿಂಗ್ ಆ್ಯಪ್ (ಡಿಎಲ್‍ಎ) ಮೂಲಕ ಸಾಲ ವಿತರಣೆಯಲ್ಲಿ ಗ್ರಾಹಕರು ಸಂಕಷ್ಟಗಳಿಗೆ ಗುರಿಯಾಗಿದ್ದಾರೆ. ಇದಕ್ಕೆ ಕಾರಣ ಗ್ರಾಹಕರಲ್ಲಿನ ತಿಳಿವಳಿಕೆ ಕೊರತೆ ಮತ್ತು ಡಿಜಿಟಲ್ ವೇದಿಕೆಗಳ ಮೂಲಕವೇ ಸಾಲ ಒದಗಿಸುವ ವ್ಯವಹಾರವನ್ನು ನಿಯಂತ್ರಿಸಲು ಸಮರ್ಥ ಕಾನೂನು ಇಲ್ಲದಿರುವುದು. ಇದು ಇಡೀ ವಿಶ್ವ ಎದುರಿಸುತ್ತಿರುವ ಸಮಸ್ಯೆ. ಈ ಕಾರಣದಿಂದಲೇ ‘ನ್ಯಾಯೋಚಿತ ಡಿಜಿಟಲ್ ಹಣಕಾಸು’ (ಫೇರ್ ಡಿಜಿಟಲ್ ಫೈನಾನ್ಸ್) ಈ ವರ್ಷದ ವಿಶ್ವ ಗ್ರಾಹಕರ ದಿನದ (ಮಾರ್ಚ್‌ 15) ಘೋಷವಾಕ್ಯವಾಗಿದೆ.

ಆರ್‌ಬಿಐ ಕಳೆದ ನವೆಂಬರ್‌ನಲ್ಲಿ ಪ್ರಕಟಿಸಿರುವ ವರದಿಯ ಪ್ರಕಾರ, ದೇಶದಲ್ಲಿ 81 ಆ್ಯಪ್ ಸ್ಟೋರ್ ಮತ್ತು ಸುಮಾರು 1,100 ಡಿಎಲ್‍ಎ ಇವೆ. ಇದಲ್ಲದೆ 600 ಕಾನೂನುಬಾಹಿರ ಡಿಎಲ್‍ಎಗಳಿದ್ದು ಹೆಚ್ಚಿನವು ಚೀನಾ ದಿಂದ ಕಾರ್ಯನಿರ್ವಹಿಸುತ್ತಿವೆ. ಕಡಿಮೆ ಬಡ್ಡಿ ದರ ಎಂದು ನಂಬಿಸಿ ಗ್ರಾಹಕರಿಗೆ ಕೆಲವು ಮೋಸ ಮಾಡುತ್ತಿವೆ.ಸಾಲ ಮರುಪಾವತಿಸದವರಿಗೆ ‘ಎಫ್‍ಐಆರ್ ದಾಖಲಿಸಿ ದ್ದೇವೆ’ ಎಂಬ ಸುಳ್ಳು ಬೆದರಿಕೆ ಸಂದೇಶವನ್ನೂ ಕಳುಹಿಸಲಾಗುತ್ತದೆ. ಕುಟುಂಬದ ಮಹಿಳೆಯರಿಗೆ ಸಂದೇಶ ಕಳುಹಿಸಿ ಬೆದರಿಸುವುದೂ ಇದೆ. ಡಿಎಲ್‍ಎಗೆ ಸಂಬಂಧಿ ಸಿದ ದೂರುಗಳನ್ನು ದಾಖಲಿಸಲು ಆರ್‌ಬಿಐ ಪ್ರತ್ಯೇಕ ವ್ಯವಸ್ಥೆ ಮಾಡಿದ್ದು, ಜನವರಿ 2020ರಿಂದ ಮಾರ್ಚ್ 2021ರವರೆಗೆ 2,562 ದೂರುಗಳು ದಾಖಲಾಗಿವೆ. ಬಹಳಷ್ಟು ದೂರುಗಳು ಆರ್‌ಬಿಐ ನಿಯಂತ್ರಣದಲ್ಲಿ ಇಲ್ಲದ ಡಿಎಲ್‍ಎ ವಿರುದ್ಧ ದಾಖಲಾಗಿವೆ. ಮಹಾರಾಷ್ಟ್ರ ದಲ್ಲಿರುವ ಡಿಎಲ್‍ಎ ವಿರುದ್ಧ 572 ದೂರುಗಳು ದಾಖಲಾಗಿದ್ದು ಪ್ರಥಮ ಸ್ಥಾನದಲ್ಲಿದೆ. ಕರ್ನಾಟಕ 394 ದೂರುಗಳನ್ನು ಹೊಂದಿದ್ದು ದ್ವಿತೀಯ ಸ್ಥಾನದಲ್ಲಿದೆ.

ಸಾಮಾನ್ಯ ಯೋಜನೆಗಳಿಗಿಂತ ಫಿನ್‍ಟೆಕ್ ಕ್ಷೇತ್ರದ ಕಂಪನಿಗಳು ಒದಗಿಸುವ ಸೇವೆಗಳು ಸಂಕೀರ್ಣವಾಗಿರುತ್ತವೆ. ಅವುಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ ವಿಶೇಷ ಪರಿಣತಿ ಬೇಕಾಗುತ್ತದೆ. ಕೆಲವು ಕಂಪನಿಗಳು ಸರಿಯಾದ ಮಾಹಿತಿ ನೀಡುವುದಿಲ್ಲ. ಗ್ರಾಹಕರು ಸೇವೆಯನ್ನು ಪಡೆ ಯುವ ಸಂದರ್ಭದಲ್ಲಿ ಷರತ್ತುಗಳನ್ನು ಗಮನಿಸದೆ ಸಹಿ ಹಾಕುವುದರಿಂದ ಕಂಪನಿಗಳು ಆ ಷರತ್ತುಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಿಸುವುದೂ ಇದೆ. ಸಾಮಾನ್ಯ ಬ್ಯಾಂಕ್‍ಗಳಲ್ಲಿ ಎಲ್ಲ ಗ್ರಾಹಕರಿಗೆ ಒಂದೇ ನಿಯಮ ಇರುತ್ತದೆ.

ಫಿನ್‍ಟೆಕ್‍ ವಲಯದ ಕೆಲವು ಕಂಪನಿಗಳಿಗೆ ಗ್ರಾಹಕ ಸಂಬಂಧಿ ದತ್ತಾಂಶವೇ ಮೂಲ ಸಾಮಗ್ರಿ. ಕಂಪನಿಗಳು ಈ ದತ್ತಾಂಶವನ್ನು ಗ್ರಾಹಕರಿಂದ ನೇರವಾಗಿ ಪಡೆಯುವುದಕ್ಕಿಂತ ಇತರ ಮೂಲಗಳಿಂದ ಸಂಗ್ರಹಿಸುವುದೇ ಹೆಚ್ಚು. ಆದ್ದರಿಂದಲೇ ಗ್ರಾಹಕರಿಂದ ಡಿಎಲ್‍ಎ ಹೆಚ್ಚು ಮಾಹಿತಿ ಯನ್ನಾಗಲಿ ದಾಖಲೆಗಳನ್ನಾಗಲಿ ಪಡೆಯುವುದಿಲ್ಲ. ಗ್ರಾಹಕರ ಬ್ಯಾಂಕ್ ಖಾತೆ, ಮೊಬೈಲ್, ಫೇಸ್‍ಬುಕ್, ಟ್ವಿಟರ್, ವಾಟ್ಸ್‌ಆ್ಯಪ್ ಇತ್ಯಾದಿ ಮೂಲಗಳಿಂದ ಮಾಹಿತಿ ಪಡೆಯುತ್ತವೆ. ಇದು ಗ್ರಾಹಕರಿಗೆ ಗೊತ್ತಾಗುವುದಿಲ್ಲ. ಗ್ರಾಹಕರ ವೈಯಕ್ತಿಕ ಮಾಹಿತಿಯೂ ಸೇರಿದಂತೆ ಇತರ ಮಾಹಿತಿ ಸರಬರಾಜು ಮಾಡುವುದಕ್ಕೆಂದೇ ಡೇಟಾ ಅಗ್ರಿಗೇಟರ್ಸ್ ಇವೆ. ಫಿನ್‍ಟೆಕ್ ಕಂಪನಿಗಳು ಇವುಗಳಿಗೆ ಹಣ ಕೊಟ್ಟು ಮಾಹಿತಿ ಪಡೆಯುತ್ತವೆ.

ಡಿಜಿಟಲ್ ಹಣಕಾಸು ವ್ಯವಹಾರದಲ್ಲಿ ಗ್ರಾಹಕರು ಎದುರಿಸುವ ಸಮಸ್ಯೆಗಳನ್ನು ಪರಿಹರಿಸಲು ಮುಂಜಾಗ್ರತಾ ಕ್ರಮ ಅಗತ್ಯವಾಗಿದೆ. ಸದ್ಯಕ್ಕೆ ಫಿನ್‍ಟೆಕ್ ಕಂಪನಿಗಳ ವ್ಯವಹಾರ ನಿಯಂತ್ರಿಸುವ ಪರಿಣಾಮಕಾರಿ ವ್ಯವಸ್ಥೆ ಇಲ್ಲದ ಕಾರಣ ಸರ್ಕಾರಗಳು ಎಚ್ಚೆತ್ತುಕೊಳ್ಳಬೇಕಿದೆ. ಭಾರತದಲ್ಲಿ ಗ್ರಾಹಕ ಸಂರಕ್ಷಣಾ ಅಧಿನಿಯಮ, ಬ್ಯಾಂಕಿಂಗ್ ಓಂಬುಡ್ಸ್‌ಮನ್‌ ಇತ್ಯಾದಿ ಇದ್ದರೂ ಫಿನ್‍ಟೆಕ್ ಕಂಪನಿ ಗಳು ಒಡ್ಡುತ್ತಿರುವ ಸವಾಲುಗಳನ್ನು ಎದುರಿಸಲಾಗು ತ್ತಿಲ್ಲ. ಇದನ್ನು ನಿಯಂತ್ರಿಸಲು ಒಂದು ಬಲಿಷ್ಠ ಸಂಸ್ಥೆ ಯನ್ನು ಸ್ಥಾಪಿಸಬೇಕೆಂಬ ಅಭಿಪ್ರಾಯ ವಿಶ್ವದಾದ್ಯಂತ ವ್ಯಕ್ತವಾಗಿದೆ. ಈ ಕ್ಷೇತ್ರದಲ್ಲಿ ಪಾರದರ್ಶಕತೆಗೆ ಹೆಚ್ಚು ಒತ್ತು ಕೊಡಬೇಕಾಗಿದೆ. ಫಿನ್‍ಟೆಕ್ ಕಂಪನಿಗಳು ಬಳಸುವ ಭಾಷೆ, ಉಪಯೋಗಿಸುವ ಪದಗಳು ಗ್ರಾಹಕರಿಗೆ ಅರ್ಥವಾಗುವಂತೆ ಇರಬೇಕಾಗುತ್ತದೆ.

ಸೇವೆಗಳನ್ನು ಮಾರಾಟ ಮಾಡಲು ಬಳಸುವ ಮಾದರಿ ಸಹ ಮುಖ್ಯವಾಗುತ್ತದೆ. ಗ್ರಾಹಕರಿಗೆ ಬೇಡದಿದ್ದರೂ ಪದೇ ಪದೇ ಫೋನ್ ಮೂಲಕ ‘ಸಾಲ ಬೇಕೇ’ ಎಂದು ಕೇಳುವುದು ತಪ್ಪಬೇಕು. ಸಾಲದ ಮೇಲಿನ ಬಡ್ಡಿಯ ಪ್ರಮಾಣವು ತರ್ಕಬದ್ಧವಾಗಿ ನಿಗದಿ ಆಗಬೇಕಾಗಿರು ವುದು ಅವಶ್ಯವಾಗಿ ಆಗಬೇಕಾದ ಕೆಲಸ. ಕೆಲವು ಕಂಪನಿ ಗಳು ಗ್ರಾಹಕರಿಗೆ ನಿವೇಶನ, ಮನೆ ಕೊಳ್ಳಲು, ವಾಹನ ಖರೀದಿ, ಚಿನ್ನ ಬೆಳ್ಳಿ ಖರೀದಿ, ವಿದೇಶಕ್ಕೆ ಹೋಗುವಂತಹ ಕಾರಣಗಳಿಗೆ ಸಾಲ ನೀಡುತ್ತವೆ. ಇದು ಸಾಲದು ಎಂಬಂತೆ ‘ಈಗ ಖರೀದಿಸಿ ನಂತರ ಹಣ ನೀಡಿ’ (ಬೈ ನೌ ಪೇ ಲೇಟರ್) ಎಂಬ ಯೋಜನೆ ಆರಂಭವಾಗಿದೆ. ಇವೆಲ್ಲ ವನ್ನೂ ಸಮರ್ಥವಾಗಿ ನಿಯಂತ್ರಿಸುವ ಸಂಸ್ಥೆ ಬೇಕಿದೆ.

ಮತ್ತೊಂದೆಡೆ ಗ್ರಾಹಕರನ್ನು ಎಚ್ಚರಿಸುವ, ಮುಖ್ಯ ವಾಗಿ ಅವರ ವರ್ತನೆಯನ್ನು ಬದಲಿಸಲು ಶಿಕ್ಷಣ ಹಾಗೂ ಜಾಗೃತಿ ಉಂಟುಮಾಡುವ ಅವಶ್ಯಕತೆ ಇದೆ. ಹಣಕಾಸಿನ ವ್ಯವಹಾರಗಳು ಗೋಜಲಾಗಿ, ಅದರಲ್ಲಿ ಗ್ರಾಹಕರು ಸಿಲುಕಿ ಕೊಳ್ಳಲು ಕಾರಣ ಅವರಲ್ಲಿ ಹೆಚ್ಚುತ್ತಿರುವ ಕೊಳ್ಳುಬಾಕ ಸಂಸ್ಕೃತಿ. ಕಂಡದ್ದೆಲ್ಲಾ ಬೇಕು ಎಂಬ ಧೋರಣೆ ಗ್ರಾಹಕರ ವಿವೇಚನಾ ಶಕ್ತಿಯನ್ನು ಕುಂದಿಸಿದೆ. ಗ್ರಾಹಕರಲ್ಲಿ ಆರ್ಥಿಕ ಸಾಕ್ಷರತೆ ಹೆಚ್ಚಿಸುವುದಕ್ಕೆ ಒತ್ತು ಕೊಡಬೇಕಿದೆ.

ಲೇಖಕ: ಕೇಂದ್ರ ಗ್ರಾಹಕ ಸಂರಕ್ಷಣಾಪರಿಷತ್ತಿನ ಮಾಜಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT