ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಮೊಳಗಲಿ ನ್ಯಾಯದ ಗಂಟೆ

ದೈವಗಳ ಮೌಲ್ಯಮಾಪನ ಮಾಡುವಂತಹ ಪ್ರಜ್ಞಾವಂತಿಕೆ ನಮ್ಮಲ್ಲಿ ಇದೆಯೇ?
Published 19 ಜನವರಿ 2024, 20:38 IST
Last Updated 19 ಜನವರಿ 2024, 20:38 IST
ಅಕ್ಷರ ಗಾತ್ರ

ಪಂಜು ಗಂಗೊಳ್ಳಿ ಅವರ ‘ದೇವರುಗಳ ಮೌಲ್ಯಮಾಪನ ಮತ್ತು ಡಾ. ಖಾನ್ ಎಂಬ ಮುಸ್ಲಿಂ ದೇವತೆ’ ಎನ್ನುವ ಹೃದಯಸ್ಪರ್ಶಿ ಬರಹ ನನ್ನನ್ನು ವಶಪಡಿಸಿಕೊಂಡುಬಿಟ್ಟಿತು. ಛತ್ತೀಸಗಢದ ಬಸ್ತಾರ್ ಜಿಲ್ಲೆಯ ನೂರಾರು ಬುಡಕಟ್ಟು ಸಮುದಾಯಗಳಲ್ಲಿರುವ, ಜಾತಿ, ಧರ್ಮಗಳನ್ನು ಮೀರಿದ ಧಾರ್ಮಿಕತೆ ಹಾಗೂ ದೇವರುಗಳನ್ನು ಮೌಲ್ಯಮಾಪನ ಮಾಡುವ ಪ್ರಜ್ಞಾವಂತಿಕೆಯು ಈ ಭೂಮಿಗೆ ಬೆಳಕು ಎಂಬಂತೆ ನನಗೆ ಕಾಣಿಸತೊಡಗಿತು.

ಆ ಪ್ರಸಂಗ ಹೀಗಿದೆ: ಬಸ್ತಾರ್ ಜಿಲ್ಲೆಯ ಬುಡಕಟ್ಟು ಜನಾಂಗಗಳ ಪ್ರಮುಖ ದೇವತೆ- ಬಂಗಾರಾಂದೇವಿ. ವರ್ಷಕ್ಕೊಮ್ಮೆ ಇಲ್ಲಿ ‘ಭಡೋ ಜಾತ್ರಾ’ ನಡೆಯುತ್ತದೆ. ಅಂದು 240 ಹಳ್ಳಿಗಳ ಬುಡಕಟ್ಟು ಸಮುದಾಯಗಳ ಜನ ತಂತಮ್ಮ ದೇವತಾಮೂರ್ತಿಗಳನ್ನು ಹೊತ್ತುತಂದು ಅವನ್ನು ಬಂಗಾರಾಂದೇವಿಯ ಪದತಲದಲ್ಲಿ ಇರಿಸುತ್ತಾರೆ. ಪೂಜಾರಿಗಳು ಬಂಗಾರಾಂದೇವಿಯ ಸಮ್ಮುಖದಲ್ಲಿ ಈ ದೇವತೆಗಳ ವಿಚಾರಣೆ ನಡೆಸುತ್ತಾರೆ. ಯಾವ ದೇವರು ತಮ್ಮ ಭಕ್ತರ ಸಂಕಟಗಳನ್ನು ನಿವಾರಿಸಲಿಲ್ಲವೋ ಅಂತಹ ದೇವರುಗಳ ದೈವತ್ವವನ್ನು ಅಳಿಸಿಹಾಕಿ, ಆ ದೇವರುಗಳ ಮೂರ್ತರೂಪವಾದ ಮರದ ಆಕೃತಿ, ಕಲ್ಲಿನ ಆಕೃತಿ, ಪೆಟ್ಟಿಗೆಗಳನ್ನು ಬಂಗಾರಾಂದೇವಿ ಗುಡಿಯ ಹಿಂಬದಿಯ ಆವರಣದಲ್ಲಿರುವ ಮೂಲೆಯೊಂದರಲ್ಲಿ ಗುಡ್ಡೆ ಹಾಕುತ್ತಾರೆ. ಈ ಮಾಜಿ ದೇವರುಗಳ ಆಕೃತಿಗಳು ಬಿಸಿಲಲ್ಲಿ ಒಣಗುತ್ತ, ಮಳೆಗೆ ತತ್ತರಿಸುತ್ತ, ಚಳಿಗೆ ನಡುಗುತ್ತ, ಮರಗಳ ಬುಡಕ್ಕೆ ಒರಗಿಕೊಂಡೊ, ಪೊದೆಗಳಲ್ಲಿ ಸಿಕ್ಕಿಹಾಕಿಕೊಂಡೊ ಬಿದ್ದಿರುತ್ತವೆ.

ಇಲ್ಲೊಂದು ಸೋಜಿಗವಿದೆ: ಬಸ್ತಾರ್‌ನ ಕೇಶಕಾಲ್ ಪರ್ವತದ ತುದಿಯಲ್ಲಿರುವ ಗುಡಿಯ ಮಣ್ಣಿನ ವೇದಿಕೆಯ ಮೇಲೆ ಶಿವಲಿಂಗಾಕೃತಿಯ ಕಪ್ಪುಮರದ ತುಂಡನ್ನು ಪ್ರತಿಷ್ಠಾಪಿಸಲಾಗಿದೆ. ಅಲ್ಲೊಂದು ಹಣತೆ ಬೆಳಗುತ್ತಿರುತ್ತದೆ. ‘ಸುರ್‍ದೊಂಗಾರ್’ ಜಾತ್ರೆ ಸಮಯದಲ್ಲಿ ಗುಡಿಯ ಬಾಗಿಲು ತೆರೆದಾಗ, ಸುತ್ತಲಿನ ಬುಡಕಟ್ಟು ಸಮುದಾಯಗಳ ಸಹಸ್ರಾರು ಜನರು ಆ ದೇವರ ದರ್ಶನ ಪಡೆಯುತ್ತಾರೆ. ಇತರ ದೇವತೆಗಳೂ ಈ ದೇವರ ದರ್ಶನಕ್ಕೆ ಆಗಮಿಸುತ್ತಾರೆ ಎಂಬ ಪ್ರತೀತಿ ಇದೆ. ಆ ದೇವತೆಯ ಹೆಸರು ಡಾ. ಖಾನ್. ಇನ್ನೂರು ವರ್ಷಗಳ ಹಿಂದೆ ಬಸ್ತಾರ್‌ನಲ್ಲಿ ಸಂಭವಿಸಿದ ಕಾಲರಾ, ಸಿಡುಬು ಪಿಡುಗುಗಳು ಜನರ ಪ್ರಾಣಗಳನ್ನು ಬಲಿ ತೆಗೆದುಕೊಳ್ಳತೊಡಗಿದಾಗ ಅಲ್ಲಿಗೆ ಆಗಮಿಸಿದಾತ ಇಸ್ಲಾಂ ಧರ್ಮದ ಡಾ. ಖಾನ್. ಜನರನ್ನು ಸಾವಿನ ದವಡೆಯಿಂದ ಪಾರು ಮಾಡಿದಾತ. ಅಲ್ಲೇ ನೆಲೆನಿಂತು ಜನಸೇವೆಯನ್ನು ಮುಂದುವರಿಸಿದಾತ. ಡಾ. ಖಾನ್ ಕಾಲವಶವಾದ ಮೇಲೆ ಬುಡಕಟ್ಟು ಸಮುದಾಯ ಡಾ. ಖಾನ್‍ ಸಾಹೇಬರನ್ನು ದೇವತೆಯನ್ನಾಗಿಸಿ ಪೂಜಿಸುತ್ತಿದೆ. ಹೀಗೆಲ್ಲಾ ಇದೆ, ಈ ನೆಲದಲ್ಲೆ, ನಮ್ಮಲ್ಲೆ.

ಆದರೆ ನಮ್ಮೊಳಗೆ ದೈವಗಳ ಮೌಲ್ಯಮಾಪನ ಮಾಡುವ ಪ್ರಜ್ಞಾವಂತಿಕೆ ಇದೆಯೇ? ದೇವರುಗಳು ಇರಲಿ, ನಾವೇ ಆಯ್ಕೆ ಮಾಡಿದ ಜನಪ್ರತಿನಿಧಿಗಳ ಮೌಲ್ಯಮಾಪನವನ್ನೂ ನಾವು ಮಾಡುತ್ತಿಲ್ಲ. ಹೀಗಿರುವಾಗ, ನಮ್ಮ ಸಂಕಟಗಳು ಪರಿಹಾರ ಕಾಣುವುದಾದರೂ ಹೇಗೆ? ಈ ಭೂಮಿಗೆ ತಂದೆತಾಯಿಯಾದ ಬುಡಕಟ್ಟು ಸಮುದಾಯಗಳು ತಮ್ಮ ದೈವವನ್ನು ವಿಚಾರಣೆ ಮಾಡಿ, ಅನುಪಯುಕ್ತ ದೈವವನ್ನು ಆಚೆ ಬಿಸಾಡುವಷ್ಟು ಪ್ರಜ್ಞಾವಂತರಾಗಿರುವಾಗ, ಆ ಆದಿವಾಸಿಗಳ ಸಂತಾನವಾದ ನಾವು ಮೂಢಾತ್ಮರಾಗಿಬಿಟ್ಟಿದ್ದೇವೆ. ಆದಿವಾಸಿ ಮೂಲಗಳಿಂದ ಬೇರ್ಪಟ್ಟ ನಾವು ಎಚ್ಚರತಪ್ಪಿದ ಜನಸ್ತೋಮವಾಗಿಬಿಟ್ಟಿದ್ದೇವೆ. ಈಗಲಾದರೂ ನಾವು ಪ್ರಜ್ಞೆ ಪಡೆದುಕೊಂಡು, ನಮ್ಮ ಭವಿಷ್ಯ ರೂಪಿಸಲು ನಾವೇ ಆಯ್ಕೆ ಮಾಡಿಕೊಂಡ, ಹಾಲಿ ಇರುವ ನಮ್ಮ ಸಂಸತ್ ಸದಸ್ಯರನ್ನು ಮತದಾರ ಪ್ರಭುವಿನ ಪದತಲದಲ್ಲಿಟ್ಟು ಮೌಲ್ಯಮಾಪನ ಮಾಡಬೇಕಿದೆ. ನನಗನ್ನಿಸುತ್ತದೆ, ಆಗ ಶೇಕಡ 90ರಷ್ಟು ಸಂಸತ್ ಸದಸ್ಯರನ್ನು ಸಂಸತ್‍ ಭವನದ ಆಚೆಗೆ ಎಸೆಯಬೇಕಾಗಿ ಬರಬಹುದು.

ಈಗಲೇ ಎಚ್ಚರ ವಹಿಸೋಣ- ಮುಂದೆ ಕೆಲವೇ ತಿಂಗಳಲ್ಲಿ 2024ರ ಲೋಕಸಭೆ ಚುನಾವಣೆ ಬರುತ್ತಿದೆ. ಮುಂಬರುವ ಚುನಾವಣೆಯಲ್ಲಾದರೂ ಮೌಲ್ಯಮಾಪನ ಪ್ರಜ್ಞೆ ಗಳಿಸಿಕೊಂಡು ನಾವು- ‘ನಮ್ಮ ಪ್ರಜಾಪ್ರಭುತ್ವದ ಯೋಗಕ್ಷೇಮ, ನ್ಯಾಯಾಂಗ ಹಾಗೂ ಸ್ವಾಯತ್ತ ಸಂಸ್ಥೆಗಳ ಸ್ವಾಯತ್ತತೆಯ ಸ್ಥಿತಿಗತಿ, ಆಳುವವರ ಕಾಲ್ತುಳಿತಕ್ಕೆ ಸಿಲುಕಿದ ರಾಜ್ಯಗಳ ಒಕ್ಕೂಟ ವ್ಯವಸ್ಥೆ, ಸಾಮಾಜಿಕ ನ್ಯಾಯ, ಮಹಿಳಾ ಮೀಸಲಾತಿ, ಸ್ವಾಮಿನಾಥನ್ ವರದಿ ಹಾಗೂ ಶಿಕ್ಷಣ, ಆರೋಗ್ಯ, ಉದ್ಯೋಗಗಳ ಅಧೋಗತಿಯ ಮೌಲ್ಯಮಾಪನ ಮಾಡಬೇಕಾಗಿದೆ. ನಾವು ಕಣ್ತೆರೆದು- ಕೊರೊನಾ ಕಾಲದಲ್ಲೂ ಹೆಚ್ಚಳವಾದ ಪ್ರಧಾನಿ ಪರಮಾಪ್ತ ಬಂಡವಾಳಿಗರ ಸಂಪತ್ತಿನ ಒಳಹೊಕ್ಕು ನೋಡಬೇಕಾಗಿದೆ. ಹಣದುಬ್ಬರ, ಬೆಲೆ ಏರಿಕೆಗೆ ಜನಸಾಮಾನ್ಯರು ಹೊರುವ ತೆರಿಗೆ ಮತ್ತು ಪ್ರಾಕೃತಿಕ ಸಂಪತ್ತು- ಸರ್ವವೂ ಪ್ರಧಾನಿ ಪರಮಾಪ್ತ ಬಂಡವಾಳಿಗರ ಸಂಪತ್ತಿಗೆ ಜಮಾ ಆಗುತ್ತಿದೆ. ಈ ಗೋಲ್‍ಮಾಲ್ ತಡೆಗಟ್ಟಿದರೆ ಮಾತ್ರ ಭಾರತವು ಉಳಿಯುತ್ತದೆ.

ಈಗ ನಾವು ಮಾಡಬೇಕಾಗಿರುವುದು ಇಷ್ಟೆ. 2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಪಕ್ಷಗಳು, ಅಭ್ಯರ್ಥಿಗಳು ಮತ ಯಾಚಿಸಲು ಬಂದಾಗ ನಾವು ಕೇಳಬೇಕು- ‘ನಿಮ್ಮ ನುಡಿ ಮತ್ತು ನಡೆಯನ್ನು ನಾವು ಮೌಲ್ಯಮಾಪನ ಮಾಡುತ್ತೇವೆ, ಮುಂದೆ ನಿಮ್ಮ ಚುನಾವಣಾ ಜುಮ್ಲಾ (ಸುಳ್ಳು) ಸಹಿಸೆವು’ ಎಂದು ಎಚ್ಚರಿಸಿದರೆ, ಈ ದೇಶ ಅಷ್ಟೊಇಷ್ಟೊ ಮುನ್ನಡೆಯಬಹುದು. ಜನಸಾಮಾನ್ಯರ ಸಂಕಷ್ಟಗಳು ಅನುಭವಿಸುವವರಿಗೇ ತಟ್ಟದಂತೆ ಮಾಡಿರುವ ಆಳ್ವಿಕೆಯ ವಂಚನೆಯ ಸಮ್ಮೋಹನಾಸ್ತ್ರ, ದ್ವೇಷಾಸ್ತ್ರ, ಅಸಹನಾಸ್ತ್ರ, ಭ್ರಮಾಸ್ತ್ರಗಳ ಪ್ರಭಾವಗಳಿಂದ ಹೊರಬಂದಾಗ ಮಾತ್ರ ನಮಗೆ ಜನಪ್ರತಿನಿಧಿಗಳ ಮೌಲ್ಯಮಾಪನ ಮಾಡಲು ಸಾಧ್ಯವಾಗುತ್ತದೆ.

ಮೊದಲು ಜನಸ್ತೋಮದ ಮೇಲೆ ಹಾಕಿರುವ ಮಾಯಾಬಲೆಯ ಚಹರೆಯನ್ನು ಗುರುತಿಸಬೇಕಾಗಿದೆ. ಉದಾಹರಣೆಗೆ, ತುಂಬಾ ವ್ಯವಸ್ಥಿತವಾಗಿ ‘ಹಿಂದುತ್ವ’ದ ಕಹಳೆ ಊದಲಾಗುತ್ತಿದೆ. ಈಗ, ‘ಹಿಂದೂ’ ಮೇಲೆ ‘ಹಿಂದುತ್ವ’ ಸವಾರಿ ಮಾಡುತ್ತಿದೆ. ಸ್ಪಷ್ಟತೆಗಾಗಿ ಉದಾಹರಣೆಗೆ- ‘ನಾನು’ ಎಂಬ ಪದವನ್ನು ನಾವು ಬಳಸುತ್ತೇವೆ. ಇದು ನಮ್ಮನಮ್ಮ ಗುರುತಿಗಿರುವ ಪದ. ಆದರೆ ನಾನತ್ವ? ಇದು ಬೇರೆಯವರ ಮೇಲೆ ಸವಾರಿ ಮಾಡುವ ಅತಿರೇಕ. ಹೀಗೆಯೇ ಹಿಂದೂ, ಹಿಂದೂಸ್ಥಾನಿ ಕೂಡ ಗುರುತಿಸುವ ಪದಗಳೇ. ಆದರೆ ಚಾತುರ್ವರ್ಣದ ಹಿಂದುತ್ವ? ಇದು ನಾನತ್ವದಂತೆಯೇ ಅತಿರೇಕ, ಜೊತೆಗೆ ವಿನಾಶಕಾರಿ. ನಾನು, ನನ್ನದು ಮಾತ್ರ ಮುಖ್ಯ ಎಂಬಲ್ಲಿಗೆ ಇದು ಕರೆದೊಯ್ಯುತ್ತದೆ. ಆದರೆ ನಮ್ಮ ಪುರಾಣ, ಚರಿತ್ರೆ, ಮಹಾಕಾವ್ಯಗಳಲ್ಲಿ- ನಾನತ್ವ ಹೆಚ್ಚಾದಾಗ ಅದರ ಗರ್ವಭಂಗವೂ ನಡೆಯುತ್ತಾ ಬಂದಿದೆ.

ಭೀಮನಿಗೆ ತನ್ನ ಬಲದ ಅಹಂ ಹೆಚ್ಚಾದಾಗ ಹನುಮನ ಬಾಲವನ್ನೇ ಅಲುಗಾಡಿಸಲಾಗಲಿಲ್ಲ. ಯಾವುದೇ ಅತಿಯಾದಾಗ ಅದು ಇಳಿಯಲೇಬೇಕಾಗುತ್ತದೆ. ಇದು ಭಾರತದ ಸಮಷ್ಟಿ ಪ್ರಜ್ಞೆಯಲ್ಲೇ ಇದೆ.

ಈಗ ‘ಸನಾತನ’ವನ್ನೂ ಹಬ್ಬಿಸಲಾಗುತ್ತಿದೆ. ಸಮಾಜವನ್ನು ಕದಡಿ ಬಗ್ಗಡ ಮಾಡಲಾಗಿದೆ. ತಿಳಿಯಾಗಲು ಯಾರೂ ಬಿಡುತ್ತಿಲ್ಲ. ಅಷ್ಟಕ್ಕೂ ಸನಾತನ ಅಂದರೆ ಏನು? ಪುರಾತನ ಕಾಲದಿಂದಲೂ ಸಾಗುತ್ತ ವರ್ತಮಾನದಲ್ಲೂ ಇರುವ ಸಂಗತಿಗಳು. ಉದಾಹರಣೆಗೆ- ಕಾರುಣ್ಯ, ಸಹನೆ, ಪ್ರೀತಿ, ಸಹಬಾಳ್ವೆ, ಎಲ್ಲರಿಗೂ ಒಂದೇ ನ್ಯಾಯ, ತನ್ನಂತೆ ಪರರ ಬಗೆಯುವುದು ಎಂಬಂತಹ ಪುರಾತನ ಕಾಲದ ಮೌಲ್ಯಗಳು ಇಂದಿಗೂ ಹಣತೆಯ ಬೆಳಕಿನಂತಿವೆ. ಇವು ಸನಾತನವೆ. ಜೊತೆಗೇ ಚಾತುರ್ವರ್ಣ, ಜಾತಿಭೇದ, ಅಸಹನೆ, ದ್ವೇಷದಂತಹವು ಹಿಂದಿನಿಂದಲೂ ಇಂದಿಗೂ ಬಂದಿವೆ. ಇವೂ ಸನಾತನವೆ. ಆದರೆ ಇವು ಅಪಮೌಲ್ಯಗಳು. ಪಂಜಿನಂತೆ ಧಗಧಗಿಸಿ ಉರಿಯುತ್ತಿರುತ್ತವೆ.

ಇಂದು, ಸನಾತನ ಮೌಲ್ಯಗಳು ಹಾಗೂ ಸನಾತನ ಅಪಮೌಲ್ಯಗಳ ನಡುವೆ ಘರ್ಷಣೆ ನಡೆಯುತ್ತಿದೆ. ಈ ಘರ್ಷಣೆಯಲ್ಲಿ ಮುಳುಗಿದವರು ಜನಪ್ರತಿನಿಧಿಗಳ ಮೌಲ್ಯಮಾಪನ ಮಾಡಲು ಅಗತ್ಯವಾದ ಪ್ರಜ್ಞೆ ಇಲ್ಲದವರಾಗಿರುತ್ತಾರೆ. ಇಷ್ಟೆಲ್ಲಾ ಇದ್ದೂ ಭಾರತದ ಸಮಷ್ಟಿ ಪ್ರಜ್ಞೆಗೆ, ಮುಳುಗುವ ಕಾಲದಲ್ಲಿ ಕೈ ಹಿಡಿದು ಮೇಲೆತ್ತುವ ಸತ್ವವಿದೆ.

ಈಗ, ಭಾರತವನ್ನು ಅಯೋಧ್ಯೆಯ ರಾಮಮಂದಿರದ ಸಂಭ್ರಮ ಆವರಿಸಿಕೊಂಡಿದೆ. ಇಂದು ಶ್ರೀರಾಮನ ವಚನಪಾಲನೆಯ ಮೌಲ್ಯವನ್ನು ಭಾರತ ಸಂಭ್ರಮಿಸಬೇಕಿತ್ತು. ಇದು ಕಾಣುತ್ತಿಲ್ಲ.  ಅಯೋಧ್ಯೆಯ ರಾಮಮಂದಿರಕ್ಕೆ ರಾಜಕಾರಣದ ಸೋಂಕು ತಗುಲಬಾರದಿತ್ತು.

ಶ್ರೀರಾಮನ ಅರಮನೆಯ ಮುಂದೆ ಒಂದು ನ್ಯಾಯದ ಗಂಟೆ ಇತ್ತಂತೆ. ಒಂದು ದಿನ ಒಂದು ಕುದುರೆಯು ನ್ಯಾಯದ ಗಂಟೆಯನ್ನು ಎಳೆದಾಗ, ಶಬ್ದ ಕೇಳಿ ಹೊರಬಂದ ಶ್ರೀರಾಮ, ಹಸಿವಿನಿಂದ ಬಳಲುತ್ತಿದ್ದ ಆ ಕುದುರೆಗೆ ನ್ಯಾಯ ಕೊಡಿಸಿದನಂತೆ. ಭಾರತಕ್ಕೂ ಇಂತಹ ಕಣ್ಣು, ಕಿವಿ, ಹೃದಯ ಇರುವ ನ್ಯಾಯವಂತ ಮನುಷ್ಯ ಆಳ್ವಿಕೆ ನಡೆಸುವುದು ತುರ್ತಾಗಿ ಬೇಕಾಗಿದೆ. ಅಯೋಧ್ಯೆಯ ರಾಮಮಂದಿರದಲ್ಲೂ ಒಂದು ನ್ಯಾಯದ ಗಂಟೆ ಕಟ್ಟಿಸುವಂತಾಗಲಿ, ನೊಂದುಬೆಂದ ಸಕಲಜೀವಿಗಳೂ ನ್ಯಾಯದ ಗಂಟೆ ಬಾರಿಸುವಂತಾಗಲಿ. ಅದು ಡೆಲ್ಲಿ ದರ್ಬಾರಿಗೂ ಕೇಳಿಸಬಹುದೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT