ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಮೋದಿ ವರ್ಚಸ್ಸು; ಅಷ್ಟೇ ಸಾಕೆ?

ಪಕ್ಷವು ನಿಭಾಯಿಸಬೇಕಾದ ಎಲ್ಲ ಬಗೆಯ ಸಂಕಷ್ಟಗಳಿಗೂ ಅಗ್ರಗಣ್ಯ ನಾಯಕನೇ ಮುಲಾಮು
Published 12 ಮೇ 2023, 19:33 IST
Last Updated 12 ಮೇ 2023, 19:33 IST
ಅಕ್ಷರ ಗಾತ್ರ

ಬೆಂಗಳೂರಿನವರೇ ಆದ ಇತಿಹಾಸಕಾರ ರಾಮಚಂದ್ರ ಗುಹಾ ಅವರ ಒಂದು ಮಹತ್ವದ ಪುಸ್ತಕ ಆರು ವರ್ಷಗಳ ಹಿಂದೆ ಓದುಗರ ಕೈ ಸೇರಿತು. ಅದರ ಶೀರ್ಷಿಕೆ: ‘ಇಂಡಿಯಾ ಆಫ್ಟರ್‌ ಗಾಂಧಿ’ (ಗಾಂಧಿ ನಂತರ ಭಾರತ). ದೇಶ ಸ್ವಾತಂತ್ರ್ಯ ಪಡೆದ ನಂತರದ ಕಾಲಘಟ್ಟವನ್ನು, ಕುಸಿಯುತ್ತಾ ಬಂದ ಅದರ ಸ್ಥಿತಿಗತಿಯನ್ನು ಗುಹಾ ಅವರು ಸುಮಾರು ಒಂದು ಸಾವಿರ ಪುಟಗಳಲ್ಲಿ ಸಂಕ್ಷಿಪ್ತವಾಗಿ ಚಿತ್ರಿಸಿದ್ದಾರೆ. 

‘ಮೋದಿ ನಂತರ ಭಾರತ’ ಎಂಬ ಪುಸ್ತಕ ಬರೆಯಲು ಇನ್ನೂ ಸಮಯವಿದೆ. ಆದರೆ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬೀಳುವ ಈ ದಿನ (ಮೇ 13) ಪ್ರಧಾನಿ ನರೇಂದ್ರ ಮೋದಿ ಅವರನ್ನು ಕುರಿತು ಇನ್ನೊಂದು ಪ್ರಶ್ನೆಯನ್ನು ಕೇಳಬಹುದು: ‘ಮೋದಿ ನಂತರ ಬಿಜೆಪಿ ಭವಿಷ್ಯ ಏನು?’ ಟೊಳ್ಳು ಪ್ರಚಾರದಿಂದ ಹಿಂದೆ ಸರಿದು ವಸ್ತುನಿಷ್ಠವಾಗಿ ವಿಚಾರ ಮಾಡಿದಾಗ, ಈ ಪ್ರಶ್ನೆಗೆ ಸಿಗುವ ಉತ್ತರ ಅವರ ಪಕ್ಷಕ್ಕಾಗಲಿ, ಕಾರ್ಯಕರ್ತರಿಗಾಗಲಿ, ಮತದಾರರಿಗಾಗಲಿ ಭರವಸೆಯನ್ನು ಉಂಟು ಮಾಡುವಂತೆ ಇರುವುದಿಲ್ಲ.

ಕರ್ನಾಟಕದ ಚುನಾವಣೆಯಲ್ಲಿ ಇಂದು ಬಿಜೆಪಿ ಸೋತರೂ ಗೆದ್ದರೂ ಈ ಪ್ರಶ್ನೆ ಉದ್ಭವಿಸುತ್ತದೆ. ಅಕಸ್ಮಾತ್ ಗೆದ್ದರೆ, ಪಕ್ಷ ಹಾಗೂ ಅದರ ಮಾಧ್ಯಮ ಭಜನಾ ಮಂಡಳಿಯು ಸಹಜವಾಗಿ ಅದಕ್ಕೆ ಮೋದಿಯವರೇ ಕಾರಣ ಎಂದು ಡಂಗೂರ ಬಾರಿಸುವುದು ಗ್ಯಾರಂಟಿ. ಅದು ಸ್ವಲ್ಪ ಮಟ್ಟಿಗೆ ನಿಜ ಕೂಡ. ಕೋಟಿಗಟ್ಟಲೆ ಹಣ ಸುರಿದು, ಮೋದಿ ಅವರು ಊರಿಂದ ಊರಿಗೆ ಹಾರಿ, ಕೈ ಬೀಸಿ, ಕೊಂಚ ಅತಿ ವಿನಮ್ರವಾಗಿ ನಮಸ್ಕರಿಸಿ, ನಿಜವೋ ಸುಳ್ಳೋ ಸುಸ್ತಿಲ್ಲದೆ ಅದೇ ರಾಗ ಹಾಡಿ ಮತ ಕೋರಿದ್ದನ್ನು ಕನ್ನಡಿಗರು ನೋಡಿದ್ದಾರೆ, ಓದಿದ್ದಾರೆ, ಕೇಳಿದ್ದಾರೆ.

ಶಾಲೆ, ಕಾಲೇಜು ತರಗತಿಗಳಿಗೆ ಚಕ್ಕರ್‌ ಹೊಡೆಯುವ ಹುಡುಗರು ಹೇಗಾದರೂ ಪಾಸಾಗಬೇಕೆಂದು ಪರೀಕ್ಷೆ ಸಮಯದಲ್ಲಿ ಹೇಗೆ ತಿಣುಕಾಡುತ್ತಾರೋ ಅಂತಹುದೇ ಸ್ಥಿತಿ ಮೋದಿಯವರದ್ದಾಗಿತ್ತು ಎಂದು ಹೇಳಬಹುದು. ಪ್ರವಾಹ ಹಾಗೂ ಕೋವಿಡ್‌ನಿಂದ ತತ್ತರಿಸುತ್ತಿದ್ದ ರಾಜ್ಯಕ್ಕೆ 2020– 21ರ ಎರಡು ವರ್ಷಗಳ ಅವಧಿಯಲ್ಲಿ ಒಂದೇ ಒಂದು ಬಾರಿ ಭೇಟಿ ನೀಡಿದ್ದ ಮೋದಿ, ಪ್ರಸಕ್ತ ಸಾಲಿನಲ್ಲಿ ನಾಲ್ಕೂವರೆ ತಿಂಗಳ ಅವಧಿಯಲ್ಲೇ 11 ಬಾರಿ ಬಂದಿದ್ದಾರೆ, 25 ಜಿಲ್ಲೆಗಳಲ್ಲಿ ಕಾಣಿಸಿಕೊಂಡಿದ್ದಾರೆ, ಹತ್ತು ದಿನಗಳಲ್ಲಿ 19 ರ್‍ಯಾಲಿಗಳು ಮತ್ತು ಐದು ರೋಡ್ ಶೋಗಳನ್ನು ನಡೆಸಿದ್ದಾರೆ.

ಈ ದೃಷ್ಟಿಕೋನದಿಂದ ನೋಡಿದರೆ, 2023ರ ಕರ್ನಾಟಕ ವಿಧಾನಸಭಾ ಚುನಾವಣೆಯು ಮೋದಿ ಅವರು ಏಕಾಂಗಿಯಾಗಿ ಎದುರಿಸಿದ ಕದನ ಕಣವಾಗಿ ಮಾರ್ಪಟ್ಟಿತ್ತು ಎಂದೇ ಹೇಳಬಹುದು. 2024ರ ಲೋಕಸಭಾ ಚುನಾವಣೆಗೆ ಮುನ್ನ ನಡೆದ ಈ ಚುನಾವಣೆಯನ್ನು ಅವರು ಹಾಗೆ ಪರಿಗಣಿಸಬೇಕಾದುದು ಪ್ರಾಯಶಃ ಅನಿವಾರ್ಯ ಕೂಡ ಆಗಿತ್ತು. ಕೇಂದ್ರ ಸರ್ಕಾರದ ನೀತಿಗಳಿಂದ ಗಗನಕ್ಕೆ ಏರಿದ ಅಗತ್ಯ ವಸ್ತುಗಳ ಬೆಲೆ, ಬಿಜೆಪಿ ನೇತೃತ್ವದ ಆಡಳಿತಾರೂಢ ರಾಜ್ಯ ಸರ್ಕಾರದ ಕಳಪೆ ಪ್ರದರ್ಶನ, ಶೇ 40ರಷ್ಟು ಲಂಚದ ಆರೋಪ, ಬಿ.ಎಸ್‌.ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಿ ಲಿಂಗಾಯತರಿಗೆ ರವಾನಿಸಿದ ಸಂದೇಶ, ಚುನಾವಣೆಯಲ್ಲಿ ಹಳಬರನ್ನು ಮೂಲೆಗೆ ತಳ್ಳಿ, ಹೊಸ ಮುಖಗಳನ್ನು ಕಣಕ್ಕಿಳಿಸಿದ ನಂತರದ ಸ್ಥಿತಿ ಎಲ್ಲವನ್ನೂ ನಿಭಾಯಿಸಬೇಕಾದ ಪಕ್ಷಕ್ಕೆ ಮೋದಿಯವರ ವರ್ಚಸ್ಸೇ ಮುಲಾಮು.

ಇಂದಿನ ಫಲಿತಾಂಶದಲ್ಲಿ ಬಿಜೆಪಿಯು 113ರ ಮ್ಯಾಜಿಕ್ ಸಂಖ್ಯೆ ತಲುಪಿದರೆ, ನೆಮ್ಮದಿಯ ನಿಟ್ಟುಸಿರ ನ್ನೇನೋ ಬಿಡಬಹುದು. ಆದರೆ, ಮೋದಿ ಅವರು ಇಲ್ಲದಿದ್ದರೆ ಇಂಥದ್ದೊಂದು ಸಾಧನೆ ಸಾಧ್ಯವಾಗು ತ್ತಿತ್ತೇ, ಮುಂದೆ ಅವರಿಲ್ಲದೆ ಅಂತಹ ಗೆಲುವು ದೊರೆಯಬಹುದೇ ಎಂಬಂತಹ ಪ್ರಶ್ನೆಗಳು ಸಂಘ ಪರಿವಾರದ ರೂವಾರಿಗಳನ್ನು ಕಾಡಬೇಕು. ಈ ಮಟ್ಟದ ಅಸಾಧಾರಣ ಶಕ್ತಿ, ದೃಢ ಮನಸ್ಸು, ಮತದಾರರನ್ನು ಸೆಳೆಯುವ ಸಾಮರ್ಥ್ಯ, ಸ್ವೀಕಾರಾರ್ಹತೆ ಬಿಜೆಪಿಯ ಬೇರೆ ಯಾವುದಾದರೂ ರಾಷ್ಟ್ರೀಯ ಅಥವಾ ರಾಜ್ಯ ನಾಯಕನಿಗೆ ಇದೆಯೇ? ಯೋಚಿಸಬೇಕಾದ ಸಂಗತಿ.

ಭಕ್ತರಿಗಂತೂ ‘ಮೋದಿ ನಂತರ ಬಿಜೆಪಿ’ ಎಂಬ ಪ್ರಶ್ನೆ ಊಹಿಸಲೂ ಅಸಾಧ್ಯ. ಆದರೆ ವಾಟ್ಸ್‌ಆ್ಯಪ್‌ ಲೋಕದಿಂದ ಹೊರಬಂದರೆ, ವಾಸ್ತವ ಅವರ ಮುಂದೆ ತೆರೆದುಕೊಳ್ಳುತ್ತದೆ. ಮೋದಿ ಅವರಿಗೆ ಈಗ 73 ವರ್ಷ ವಯಸ್ಸು. ಇನ್ನೆಷ್ಟು ವರ್ಷ ಅವರು ಹೀಗೆ ಪ್ರತಿ ರಾಜ್ಯದಲ್ಲಿ ಪ್ರತಿ ಚುನಾವಣೆಯಲ್ಲಿ ಪ್ರತಿ ಅಭ್ಯರ್ಥಿಯ ಪರವಾಗಿ ತಮ್ಮ ದೈಹಿಕ ಶಕ್ತಿ ಮತ್ತು ಸಾಮರ್ಥ್ಯವನ್ನು ಪಣಕ್ಕಿಟ್ಟು ಬಿಜೆಪಿಯನ್ನು ಗೆಲ್ಲಿಸಲು ಸಾಧ್ಯ? ಇದಲ್ಲದೆ, ಚುನಾವಣಾ ಆಯೋಗವೇನಾದರೂ ಎಲ್ಲ ರಾಜ್ಯಗಳಲ್ಲೂ ಏಕಕಾಲಕ್ಕೆ ಚುನಾವಣೆ ನಡೆಸಿದರೆ?

ಇನ್ನೊಂದೆಡೆ, ಬಿಜೆಪಿ ಸೋತರೆ ಅಥವಾ 2008ರಲ್ಲಿ ಯಡಿಯೂರಪ್ಪ ಅವರು ತಂದುಕೊಟ್ಟಷ್ಟು ಸೀಟುಗಳೂ (110) ಸಿಗದಿದ್ದರೆ ‘ಮೋದಿ ನಂತರ ಬಿಜೆಪಿ’ ಎಂಬ ಪ್ರಶ್ನೆ ಇನ್ನಷ್ಟು ಎದ್ದು ಕಾಣುತ್ತದೆ. ಮೋದಿ ಇಷ್ಟರಮಟ್ಟಿಗೆ ಬೆವರು ಸುರಿಸಿ, ಪ್ರಚಾರ ನಡೆಸಿ, ಸ್ವಪ್ರಶಂಸೆ ಮಾಡಿಕೊಂಡರೂ ಡಬಲ್ ಎಂಜಿನ್ನಿಗೆ ಇರುವ ಶಕ್ತಿ ಇಷ್ಟೆಯೇ ಎಂಬ ಪ್ರಶ್ನೆ ಎದುರಾಗುತ್ತದೆ. ಮೋದಿಯವರ ಕೈಯಲ್ಲೇ ಇಷ್ಟಾದರೆ, ಇನ್ನು ಬಿಜೆಪಿಯ ಮುಂದಿನ ಪೀಳಿಗೆಯ ನೇತಾರರು ಡಬಲ್ ಎಂಜಿನ್ ಬಳಸಿ ಇನ್ನೆಷ್ಟು ಬಲವಾಗಿ ಎಳೆಯಲು ಸಾಧ್ಯ? ಪಕ್ಷವು ನಾಲ್ಕು ಬಾರಿ ಸರ್ಕಾರ ರಚಿಸಿದ ರಾಜ್ಯದಲ್ಲೇ ಹೀಗಾದರೆ, ಬೇರೆ ರಾಜ್ಯಗಳಲ್ಲಿ ಹೇಗೆ?

ಹಾಗೆ ನೋಡಿದರೆ, ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷವು ಬಿಜೆಪಿಗಿಂತ ಒಂದೇ ಒಂದು ಸ್ಥಾನವನ್ನು ಹೆಚ್ಚು ಗೆದ್ದರೂ ಅದರಿಂದ ಮೋದಿಯವರ ವರ್ಚಸ್ಸಿಗೆ ದೊಡ್ಡ ಧಕ್ಕೆ (ಗಮನಾರ್ಹ ಅಂಶವೆಂದರೆ, 2018ರ ಚುನಾವಣೆಯಲ್ಲಿ ಬಿಜೆಪಿ 104 ಹಾಗೂ ಕಾಂಗ್ರೆಸ್‌ 78 ಸ್ಥಾನಗಳನ್ನು ಪಡೆದಿದ್ದವು). ಪ್ರಧಾನಿಯವರ ಉಪಸ್ಥಿತಿಯನ್ನು, ಅವರ ಸ್ವಯಂಘೋಷಿತ ಸಾಧನೆಗಳನ್ನು ಬಂಡವಾಳವನ್ನಾಗಿ ಇಟ್ಟುಕೊಂಡು ದಕ್ಷಿಣ ಭಾರತದ ಬೇರೆ ರಾಜ್ಯಗಳಲ್ಲಿ ದಾಪುಗಾಲು ಹಾಕಲು ಬಹಳಷ್ಟು ಪ್ರಯತ್ನಿ ಸುತ್ತಿರುವ ಬಿಜೆಪಿ, ಕರ್ನಾಟಕದಲ್ಲಿ ಇಂದು ಸೋತರೆ ಆ ಕನಸಿಗೆ ಹಿನ್ನಡೆಯಾಗುತ್ತದೆ. ಆಗ, ಮೋದಿ ಅವರ ನಂತರ ಚುನಾವಣೆ ಎದುರಿಸುವುದು ಪಕ್ಷಕ್ಕೆ ಇನ್ನಷ್ಟು ಕಷ್ಟವಾಗುವುದು ಖಚಿತ.

ನಾಗ್ಪುರದವರ ಕಲ್ಪನೆಯಲ್ಲಿ ಮೋದಿ ಅವರು ಸಂಘ ಪರಿವಾರದ ರಾಜಕೀಯ ಮುಖವಾಡ ಅಷ್ಟೆ. ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. ಮುಂದೆ ಮೋದಿ ಅವರ ಬದಲು ಯಾರೇ ಬಂದರೂ ಬಿಜೆಪಿ ಇದೇ ಹಾದಿಯಲ್ಲಿ ಸಾಗುತ್ತದೆ. ಒಂಬತ್ತು ವರ್ಷಗಳ ಮೋದಿ ಅವರ ಆಡಳಿತಾವಧಿಯ ನಂತರವೂ ಈ ಮಾತನ್ನು ಯಾರಾದರೂ ನಂಬಿದರೆ ಅವರು ಇನ್ನು ಏನನ್ನು ಬೇಕಾದರೂ ನಂಬಬಹುದು.

‘ಸಬ್‌ ಕಾ ಸಾಥ್ ಸಬ್‌ ಕಾ ವಿಕಾಸ್’ ಎಂದು ಮೋದಿ ಅವರು ಹೇಳಿದರೆ, ದಲಿತರು ಮತ್ತು ಮುಸಲ್ಮಾನರು ಒಂದಿಷ್ಟು ಮಟ್ಟಿಗಾದರೂ ಅದನ್ನು ನಂಬಬಹುದು. ಆದರೆ, ಅದೇ ಮಾತು ಅಮಿತ್ ಶಾ ಅಥವಾ ಯೋಗಿ ಆದಿತ್ಯನಾಥ ಅವರ ಬಾಯಿಯಿಂದ ಬಂದರೆ? ಯಡಿಯೂರಪ್ಪ ಹಾಗೂ ಬಿ.ಎಲ್.ಸಂತೋಷ್ ಅವರ ನಡುವೆ ಸಂಧಾನ ನಡೆಸುವ ಸಾಮರ್ಥ್ಯ ನಿತಿನ್ ಗಡ್ಕರಿ ಅಥವಾ ರಾಜನಾಥ ಸಿಂಗ್‌ ಅವರಿಗೆ ಇದೆಯೇ? ಜಾರಿ ನಿರ್ದೇಶನಾಲಯ (ಇ.ಡಿ), ಆದಾಯ ತೆರಿಗೆ ಇಲಾಖೆ (ಐ.ಟಿ) ಮತ್ತು ಜೆಸಿಬಿ ಇಲ್ಲದೆ ಇವರು ಯಾರಾದರೂ ದೇಶದಾದ್ಯಂತ ನಾಯಕರಾಗಿ ಮಿಂಚಬಲ್ಲರೇ?

ಎಲ್ಲಾ ಮೊಟ್ಟೆಗಳನ್ನು ಒಂದೇ ಬುಟ್ಟಿಯಲ್ಲಿ ಹಾಕಿ, ಬಿಜೆಪಿ ಒಂದು ಅಪೂರ್ವ ಸ್ಥಿತಿಯತ್ತ ತೇಲುತ್ತಿದೆ. ಮುಂಬರುವ ದಿನಗಳಲ್ಲಿ ಅದರ ನಾಯಕತ್ವ ಕೊರತೆಯೇ ವಿರೋಧ ಪಕ್ಷಗಳಿಗೆ ಆಶಾಕಿರಣವಾಗುವ ಲಕ್ಷಣಗಳಿವೆ.

ಬರೋಬ್ಬರಿ ತೊಂಬತ್ತು ವರ್ಷಗಳ ಹಿಂದೆ, ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಜರ್ಮನಿಯಲ್ಲಿ ಅಧಿಕಾರಕ್ಕೆ ಬಂದರು. ತಾವು ಸ್ಥಾಪಿಸಿದ ನ್ಯಾಷನಲ್‌ ಸೋಷಿಯಲಿಸ್ಟ್‌ ಜರ್ಮನ್‌ ವರ್ಕರ್ಸ್‌ ಪಾರ್ಟಿಯು (ಎನ್‌ಎಸ್‌ಡಿಎಪಿ) ಮುಂದಿನ ಒಂದು ಸಾವಿರ ವರ್ಷಗಳ ಕಾಲ ಆಳ್ವಿಕೆ ನಡೆಸುತ್ತದೆ, ಇದು, ದೇಶವನ್ನು ಆಳಿದ ಪ್ರಮುಖ ರೋಮನ್‌ ಮತ್ತು ಜರ್ಮನ್‌ ಸಾಮ್ರಾಜ್ಯಗಳ ನಂತರದ ಮೂರನೇ ಸಾಮ್ರಾಜ್ಯವಾಗಿದೆ (ಥರ್ಡ್ ರೈಖ್‌) ಎಂದು ದುರಹಂಕಾರದಿಂದ ಘೋಷಿಸಿದರು. ಅವರ ಅಂಧ ಭಕ್ತರು ಈ ಮಾತನ್ನು ನಂಬಿದರು. ಅದಾದ ಬರೀ ಹನ್ನೆರಡು ವರ್ಷಗಳಲ್ಲಿ ಹಿಟ್ಲರ್ ಪತನವಾಯಿತು. ಅವರ ಜೊತೆ ಅವರ ಫ್ಯಾಸಿಸ್ಟ್ ಪಕ್ಷವೂ ಮಣ್ಣುಮುಕ್ಕಿತು. ‘ಹಿಟ್ಲರ್ ನಂತರ ಎನ್‌ಎಸ್‌ಡಿಎಪಿ’ ಪುಸ್ತಕ ಪ್ರಕಟವಾಗಲೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT