–ಡಾ.ನಳಿನಿ ಭಾಸ್ಕರಾನಂದ, ಮಕ್ಕಳ ವೈದ್ಯೆ, ಹೈಟೆಕ್ ಆಸ್ಪತ್ರೆ ಉಡುಪಿ
ಮಣಿಪಾಲ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವಾಗ ಗಂಭೀರ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದ ಮಗುವಿಗೆ ವೆಂಟಿಲೇಟರ್ನಲ್ಲಿ ಚಿಕಿತ್ಸೆ ಕೊಡಬೇಕಾದ ಪರಿಸ್ಥಿತಿ ಎದುರಾಯಿತು. ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದ ಮಗುವನ್ನು ಉಳಿಸಿಕೊಳ್ಳಲು ಸಾಧ್ಯವಿದ್ದ ಎಲ್ಲ ಪ್ರಯತ್ನಗಳನ್ನೂ ಪ್ರಾಮಾಣಿಕವಾಗಿ ಮಾಡಲಾಗುತ್ತಿತ್ತು. ಇಂತಹ ಪರಿಸ್ಥಿತಿಯಲ್ಲೂ ಪೋಷಕರು, ಹಣ ಮಾಡಲು ವೆಂಟಿಲೇಟರ್ನಲ್ಲಿ ಚಿಕಿತ್ಸೆ ಕೊಡುತ್ತಿದ್ದೀರಾ ಎಂದು ಪ್ರಶ್ನಿಸಿದಾಗ ಮನಸ್ಸಿಗೆ ಆಘಾತವಾಯಿತು. ತಾಳ್ಮೆಗೆಡದೆ ಮಗುವಿಗೆ ಚಿಕಿತ್ಸೆ ಮುಂದುವರಿಸಿದೆ. ಮಗು ಬದುಕುಳಿಯಿತು. ಪೋಷಕರು ಮಗುವನ್ನು ಮನೆಗೆ ಕರೆದೊಯ್ಯುವಾಗ ಅವರ ಮುಖದಲ್ಲಿ ಪಶ್ಚಾತ್ತಾಪದ ಭಾವ ಕಾಡುತ್ತಿತ್ತು. ನನ್ನ ಮನಸ್ಸಿನಲ್ಲಿ ವೈದ್ಯ ವೃತ್ತಿಯ ಬಗ್ಗೆ ಸಾರ್ಥಕ ಭಾವ ಆವರಿಸಿತ್ತು.