ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಗೆ ಬರುವ ಪ್ರತಿ ಕ್ಯಾನ್ಸರ್ ರೋಗಿಯದ್ದೂ ಒಂದೊಂದು ಕಥೆ ಇರುತ್ತದೆ. ಹೆಚ್ಚಿನವರು ಕ್ಯಾನ್ಸರ್ ಉಲ್ಬಣಗೊಂಡ ಬಳಿಕ ಬರುವುದರಿಂದ ಚಿಕಿತ್ಸೆ ಸವಾಲಿನಿಂದಲೇ ಕೂಡಿರುತ್ತದೆ. ನಾವು ಭಾವುಕರಾದಲ್ಲಿ ರೋಗಿಗಳು ಆತ್ಮಸ್ಥೈರ್ಯ ಕಳೆದುಕೊಳ್ಳುತ್ತಾರೆ. ಹಾಗಾಗಿ, ಎಲ್ಲರನ್ನೂ ಒಂದೇ ರೀತಿಯಲ್ಲಿ ಕಾಣುತ್ತೇವೆ. ಆದರೆ, ಇತ್ತೀಚೆಗೆ ದಾಖಲಾಗಿದ್ದ 22 ವರ್ಷದ ಮಹಿಳೆಯೊಬ್ಬಳ ಪ್ರಕರಣ ವೃತ್ತಿ ಜೀವನದಲ್ಲಿ ಮೊದಲ ಬಾರಿ ನನ್ನನ್ನು ಭಾವುಕಗೊಳಿಸಿತು. ಇದಕ್ಕೆ ಕಾರಣ, ಕ್ಯಾನ್ಸರ್ ಪೀಡಿತ ಆ ಮಹಿಳೆಗೆ ಎರಡು ವಾರಗಳ ನವಜಾತ ಶಿಶುವಿತ್ತು. ತಾಯಿ ಹೊರತುಪಡಿಸಿದರೆ ಆ ಮಹಿಳೆ ಜತೆಗೆ ಯಾರೂ ಇರಲಿಲ್ಲ. ಚಿಕಿತ್ಸೆಗೆ ಕೈಯಲ್ಲಿ ಹಣವೂ ಇರಲಿಲ್ಲ.