‘ಪಂಚೆನೋ ಲುಂಗಿನೋ ಹೇಗೋ ಅಡ್ಜೆಸ್ಟ್ ಮಾಡ್ಕೊಬಹುದು. ಆದ್ರೆ ಒಣಗಿಸಕ್ಕೆ ಜಾಗನೇ ಇಲ್ಲ. ಟೆರೇಸ್ ಮೇಲಿಟ್ರೆ ಚಿರಿ ಚಿರಿ ಮಳೆಯ ಪಿರಿ ಪಿರಿ... ಕೆಳಗೆ ಮನೆ ಮುಂದೆ ಹಾಕುದ್ರೆ ಬೀದಿ ನಾಯಿಗಳ ಕಾಟ, ಜೊತೆಗೆ ಮುನಿಸಿಪಾಲಿಟಿ ನೀರಿನ ಪೈಪ್ ಒಡುದ್ರೆ ಹಪ್ಪಳ ಇರ್ಲಿ ಅಂಗಳನೇ ಕೊಚ್ಕಂಡ್ ಹೋಗುತ್ತೆ’.
‘ನಿಜ ರೀ, ಹಪ್ಪಳ, ಸಂಡಿಗೆ ಹರವಿ ಹಾಕೋದೇ ಒಂದು ದೊಡ್ ಸಮಸ್ಯೆ ಆಗೋಗಿದೆ. ಅದಕ್ಕೇ ಅದ್ಯಾರೋ ಪುಣ್ಯಾತ್ಗಿತ್ತಿ ಬೆಳಗಾವಿಲಿ ಸುವರ್ಣಸೌಧದ ಮೆಟ್ಟಿಲ ಮೇಲೆ ಶ್ಯಾವಿಗೆ– ಸಂಡಿಗೆ ಒಣ ಹಾಕಿದ್ಲಂತೆ!’
‘ಅದ್ರಲ್ಲಿ ತಪ್ಪೇನಿದೆ? ಶ್ಯಾವಿಗೆ– ಸಂಡಿಗೆ ಅಲ್ದೆ ಜನಪ್ರತಿನಿಧಿಗಳನ್ನ ಒಣಹಾಕಕ್ಕೆ ಆಗುತ್ತಾ? ಅದ್ರಲ್ಲೂ ಒಂದು ಸಮಸ್ಯೆ ಆಗಿದ್ಯಂತೆ’?
‘ಏನಂತೆ?’
‘ಅಯ್ಯೋ, ಸ್ಥಳಮಹಿಮೆ ರೀ! ಆ ಶ್ಯಾವಿಗೆ– ಸಂಡಿಗೆ ಜನಪ್ರತಿನಿಧಿಗಳ ಥರ ಜಿಗುಟಾಗಿ ಪಂಚೆಗೆ ಅಂಟ್ಕೊಂಡ್ ಕೂತಿದೆಯಂತೆ, ಕಿತ್ರೂ ಬರಲ್ಲವಂತೆ. ಸರ್ಕಾರಿ ಜಾಗದಲ್ಲಿ ಸಂಡಿಗೆ ಹಾಕೋದು ದನ ಮೇಯೋಕೇ ಲಾಯಕ್ಕು’ ಎಂದು ನಕ್ಕರು ಅಲಮೇಲಮ್ಮ.