ಬಾರ್ ಮುಂದುಗಡೆ ಎಂಟ್ಹತ್ತು ಪರಿಚಯಸ್ಥರು ಮುಖವ ಇಳೆಬುಟ್ಕಂದು ನಿಂತಿದ್ದರು. ‘ಇದ್ಯಾಕಿರ್ಲಾ ಏಳೊವೊತ್ಗೇ ಬಂದು ಇಲ್ಲಿ ನಿಂತಿದ್ದರಿ!’ ಅಂತ ಕಿಚಾಯಿಸಿದೆ.
‘ಅಲ್ಲ ಕನಣ್ಣೋ, ಇದೇ ಸುಕ್ರಾರ ಸಿದ್ದರಾಮಣ್ಣ ಬಜೆಟ್ ಓದ್ತದಂತೆ. ನಮ್ಮ ಬೇಡಿಕೆಗಳ ಈ ಸರ್ತಿನಾದ್ರೂ ಪೂರೈಸ್ತರಾ ಹ್ಯಂಗೆ ಕೇಳಮು ಅಂತ ಪ್ಲಾನ್ ಹಾಕ್ಯಂಡುದ್ದವಿ’ ಅಂದರು.
‘ಬಲ್ ನನ್ ಮಕ್ಳು ಕನ್ರಯಾ ನೀವು! ಅದೇನು ನಿಮ್ಮ ಬೇಡಿಕೆ ಅಂತ ಹೇಳ್ರಿ’ ಅಂತಂದೆ.
‘ನಾವೇನೂ ಜಾಸ್ತಿ ಕೇಳ್ತಿಲ್ಲ ಕನಣ್ಣಾ. ಸರ್ಕಾರ ಖರ್ಚಿಗೆ ನಮ್ಮ ದುಡ್ನೇ ಕಾಯ್ಕ ಕೂತಿರತದೆ. ಅದುಕ್ಕೆ ಈ ವರ್ಸದಲ್ಲೇ ಮೂರು ಸಾರಿ ರೇಟು ಏರಿಸ್ಯವರೆ. ನಾವೇನನ್ನಾ ತುಟಿಪಿಟಕ್ ಅಂದ್ವಾ? ಇಲ್ಲ’ ಅಂತ ಸುರು ಹಚ್ಕಂಡರು.
‘ಸರಿ ಕನ್ರಪ್ಪಾ ಮುಂದ್ಕೇಳಿ’ ಅಂದೆ.
‘ಅಣೈ, ರೇಟು ಏರಿಸ್ತಾವ್ರೆ ಹೊರತು ನಮಗೇನೂ ಅನುಕೂಲ ಮಾಡಿಲ್ಲ. ನಾವೇನು ಜಾಸ್ತಿ ಕೇಳಕುಲ್ಲ. ಬರ ಪರಿಹಾರಕ್ಕೆ ದುಡ್ಡು ಕೊಟ್ಟಂಗೆ ನಮಗೂ ದರ ಪರಿಹಾರ ಕೊಡಬಕು ಅಂತ ಕೇಳ್ತುದವಿ’ ಅಂದ್ರು.
‘ಸರಿ ಕನ್ರಪ್ಪಾ, ಆಮೇಲೆ’ ಅಂದೆ ಸುಸ್ತಾಗಿ.
‘ಅಣೈ, ಎಲ್ಲ ಬಾರುಗಳಲ್ಲೂ ನಮ್ಮ ಉಪಯೋಗಕ್ಕೆ ಮಾತ್ರ ಚಾಳೀದಾಸ ಕ್ಯಾಂಟೀನ್ ತೆಗೆದು ಸಸ್ತಾ ರೇಟಲ್ಲಿ ಚಾಕಣ, ಕಬಾಬು ಕೊಡಬೇಕು. ಇನ್ನೇನೂ ಜಾಸ್ತಿ ಇಲ್ಲ ಕನಣ್ಣ. ಸೀನಿಯರ್ ಕುಡುಕರಿಗೆ ನಿರಾಧಾರ್ ಕಾರ್ಡು, ಬಿಲ್ಲಲ್ಲಿ ರಿಯಾಯಿತಿ ಕೊಡಬೇಕು’.
‘ಆಮೇಲೆ ಇನ್ನೇನೇನದೆ ಒಟ್ಟಿಗೆ ಹೇಳಿಬುಡ್ರಿ’ ಅಂದೆ.
‘ನೋಡಣ್ಣ, ಕುತ್ತಿಗೆ ಮಟಾ ಕುಡಿದಮ್ಯಾಲೆ ಮನೆಗೋಗಕ್ಕೆ ದಾರಿ ತಿಳಿಯಕುಲ್ಲ. ಬ್ಯಾರೇರ ಮನೆಗೋಗಿ ಮಕ್ಕುಗಿಸಿಕಳಕ್ಕಿಂತ ಎಲ್ಲ ಬಾರುಗಳಲ್ಲೂ ಅಲ್ಲೇ ಮನಿಕಳಕ್ಕೆ ಡಾರ್ಮಿಟರಿ ಥರಾ ಬಾರ್ಮಿಟರಿ ಓಪನ್ ಮಾಡಿಸಬೇಕು. ಬೇಡಿಕೆ ಈಡೇರದಿದ್ರೆ ಪೀಪಾಯಿ ದಂಗೆ ಆಯ್ತದೆ’.