‘ಅದೇನು ಧೈರ್ಯ ಈ ಹುಲಿಗಳಿಗೆ?’ ಎಂದಳು ಮಡದಿ. ನನಗೆ ಆಶ್ಚರ್ಯವಾಯಿತು. ‘ಹುಲಿಗಳಿಗೆ ಧೈರ್ಯ ಎಂದರೆ ಏನು? ಮೀನಿಗೆ ಒದ್ದೆ ಎಂದಂತಾಗಲಿಲ್ಲವೇ?’
‘ಅಯ್ಯೋ ಹಾಗಲ್ಲಾರೀ, ಮೊನ್ನೆ ಮೋದೀಜಿ ಬಂಡೀಪುರದಲ್ಲಿ ಹುಲಿ ಸಫಾರಿ ಮಾಡಿದ ರಲ್ಲಾ... 22 ಕಿ.ಮೀ. ಕಾಡಿನಲ್ಲಿ ಸುತ್ತಿದರೂ ಒಂದೂ ಹುಲಿ ಕಣ್ಣಿಗೆ ಬೀಳಲಿಲ್ಲ ಎಂದರೆ ಹೇಗೆ?’
‘ಹುಲಿಗಳಿಗೇನು ಗೊತ್ತಿತ್ತೇ ಪ್ರಧಾನಿ ಬರ್ತಿದಾರೆ ಅಂತ. ಗೊತ್ತಿದ್ದರೆ ಅವೂ ಬರ್ತಿದ್ದವೇನೋ ಹೊರಕ್ಕೆ ಅವರನ್ನು ನೋಡೋದಿಕ್ಕೆ ಹಾರಗಳ ಸಮೇತ’.
‘ಹಿಂದಿನ ಕಾಲದ ರಾಜರು ಶಿಕಾರಿಗೆ ಹೊರಟಂತಿತ್ತು ಮೋದೀಜಿ ಟೈಗರ್ ಸಫಾರಿ. ಆದರೆ ಯಾವ ಹುಲಿನೂ ಕ್ಯಾರೆ ಅನ್ನಲಿಲ್ಲ ನೋಡಿ. ಸೊ ಸ್ಯಾಡ್’ ಎಂದು ಲೊಚಗುಟ್ಟಿದಳು.
ಇದರಲ್ಲೇನಾದರೂ ಷಡ್ಯಂತ್ರ ಇರಬಹುದೇ ಎಂದು ಅನುಮಾನಿಸಿದೆ. ರಾಜಕಾರಣಿಗಳ ಪ್ಲ್ಯಾನ್ ಉಲ್ಟಾ ಆದರೆ ಅದರ ಹಿಂದೆ ಷಡ್ಯಂತ್ರ ಇದ್ದೇ ಇರುತ್ತದೆ ಎಂದು ನಮಗೆ ಚೆನ್ನಾಗಿ ಗೊತ್ತು. ಮಾಡಾಳ್ ವಿರೂಪಾಕ್ಷಪ್ಪನವರ ಬೆಡ್ರೂಂನಲ್ಲಿ ಕೋಟಿ ಕೋಟಿ ನಗದು ಸಿಕ್ಕಿದ್ದರ ಹಿಂದೆಯೂ ಷಡ್ಯಂತ್ರ ಇದೆ ಎಂದು ಅವರೇ ಹೇಳಿಲ್ಲವೆ?
‘ಹುಲಿ ಕಾಣಿಸದೇ ಇರುವುದರ ಹಿಂದೆ ಷಡ್ಯಂತ್ರ ಸಾಧ್ಯವೇನ್ರೀ?’
‘ವೈ ನಾಟ್? ಮೋದೀಜಿ ಬರ್ತಾರೆ ಅಂತ ಅವೆಲ್ಲ ಪಕ್ಕದ ತಮಿಳುನಾಡಿಗೆ ವಲಸೆ ಹೋಗಿರಲಿಕ್ಕೆ ಸಾಕು’ ಎಂದೆ.
‘ಸ್ಟಾಲಿನ್ ಅವರ ಷಡ್ಯಂತ್ರವೇ? ನೊ ವೇ..’
‘ಹೇಗೆ ಹೇಳ್ತೀಯಾ?’
‘ಮೊನ್ನೆ ಅವರಿಬ್ಬರೂ ಕೈಕೈ ಹಿಡಿದು ನಗ್ತಾ ನಗ್ತಾ ಊರು ಸುತ್ತಿದರಂತೆ. ಹಾಗಿರುವಾಗ ಹುಲಿಗಳನ್ನೆಲ್ಲಾ ಅವರು ತಮ್ಮ ಏರಿಯಾಕ್ಕೆ ಕರೆಸಿಕೊಂಡಿರಲಿಕ್ಕೆ ಸಾಧ್ಯವಿಲ್ಲ’.