ಇದಾನಸೌದುದ ಹಿಂದುಗಡೆ ಸುಮಾರು ಜನ ಕುಂತು ಮಕದ ಮ್ಯಾಲೆ ಬಟ್ಟೆ ಗುಬುರಾಕ್ಕಂಡು ಗೊಳೋ ಅಂತಿದ್ರು.
‘ಯಾರಣೈ ನೀವೆಲ್ಲಾ, ಯಾಕಿಂಗೆ ಕಣ್ಣಿರಾಕ್ತಿ ದರಿ? ಏನು ನಿಮ್ಮ ಸಂಕಟ?’ ತುರೇಮಣೆ ಕೇಳಿದ್ರು. ‘ನಾವೆಲ್ಲಾ ರಾಜಕೀಯ ಅತ್ಮಹತ್ಯೆ ಮಾಡಿಕ್ಯಂಡು ಅಂತರ ಪಿಸಾಚಿ ಆಗಿರೋರು. ಈಗ ನಮ್ಮ ಕೌಪೀನವೂ ಕಿತ್ತೋಗದೆ!’ ಅಂದ್ರು ಸುಧಾರಕರು.
‘ಕುಮಾರಣ್ಣನ ಸ್ಯಾವುಗೆ ಬುಟ್ಟು ರಾಜಾವುಲಿ ಮುದ್ದೆಗೆ ಬಂದೋ. ಇಲ್ಲೀಗಂಟ ಉಣ್ಣಕಿಕ್ಕದೇ ಈಗ ಸಕ್ಕರೆ ಕೊಟ್ಟವ್ರೆ ಡಯಾಬಿಟೀಸ್ ಇರೋನಿಗೆ!’ ಬೆಂಗಳೂರು ಉಸ್ತುವಾರಿ ಸಿಗದೋರು ಬುಸುಗುಟ್ಟಿದ್ರು.
‘ಆಳ್ತನ ನೋಡಿ ಆಹಾರ ಕೊಟ್ಟಿದ್ರಾ, ಈಗ ಅದ ಕಿತಗಂಡು ಎಣ್ಣೆ ಅಂಗಡಿ ಕೊಟ್ಟವ್ರೆ. ಎಣ್ಣೆ ತಗಂಡು ಬಡವರ ಸೇವೆ ಮಾಡದೆಂಗೆ?’ ಅಂತ ಗಂಗಳ ನೆಕ್ಕಿದ್ರು ಇನ್ನೊಬ್ರು.
‘ನಾವು ಉತ್ತು-ಬಿತ್ತು ಫಸಲು ಬಂದಾಗ ಮೆದೆ ಹಾಕಿ, ಬಗ್ಗಡ ಹೂದು, ಸಾರಿಸಿ ಕಣ ಮಾಡ ಟೇಮಿಗೇ ಹೊಲವ ಬ್ಯಾರೇರಿಗೆ ಖಾತೆ ಮಾಡಬೌದೋ?’ ಅಂದೋರ ಮಕ ಧುಮುಧುಮು ಅಂತಿತ್ತು.
‘ನೋಡ್ರಿ ಸಾ, ಪಾಲಾಕುವಾಗ ನಮ್ಮಂತೋರಿಗೆ ಉಸ್ತುವಾರೀನೂ ಸಿಗನಿಲ್ಲ! ನಾವೂವೆ ಪಕ್ಷಾಂತರಿಗಳಿಗೆ ಸಂಪುಟದೇಲಿ ಮೀಸಲಾತಿ ಬೇಕು ಅಂತ ರೆಸಾರ್ಟಿಗೆ ಪರೇಡ್ ಮಾಡ್ತುದವಿ ಈವತ್ತು’ ಅಂದ್ರು ಇನ್ನೊಬ್ರು ಬೇಜಾರೇಲಿ.
‘ನಾನು ಸಿಎಂ ಮೆಟೀರಿಯಲ್ಲು. ಅಂತಿಂತೋರ ತಾವು ಕೆಲಸ ಮಾಡೋ ಯತ್ನ ಮಾಡಿಲ್ಲ’ ಒಬ್ಬರು ಗುರುಗುಟ್ಟಿದರು. ‘ಸೀನಿಯರ್ ಮಂತ್ರಿಗಳೆಲ್ಲಾ ನಮಗೆ ಜಾಗಬುಡ್ಲಿ!’ ಇನ್ನೊಬ್ರು ಬಾಂಬಾಕಿದ್ರು.
‘ನಿಮ್ಮದು ತೊಳೆಯದ್ರಗೇ ಆಯ್ತಲ್ರೋ! ಎಲ್ಲಾರಿಗೂ ಉಸ್ತುವಾರಿ ಅಂದ್ರೆ ಎಲ್ಲಿಂದ ತರನ್ಲಾ? ಅನುದಾನ ಇಸ್ಕಂಡೋಗ್ರೋ’ ಅಂತ ಕರೀತಿತ್ತು ರಾಜಾವುಲಿ. ನಮ್ಮುನ್ನ ನೋಡಿ ‘ಯಾರಿಗೂ ರವಷ್ಟೂ ಬೇಜಾರಿಲ್ಲ, ಕ್ಯಾಮೆ ಇಲ್ಲುದ್ಕೆ ಅಸಮಾಧಾನ ಅಷ್ಟೀಯೆ!’ ಅಂದ್ರು. ಈ ಲೂಟಿಚಾರ್ಜು ನೋಡಿದ ಯಂಟಪ್ಪಣ್ಣ ‘ತಡೀನಾರೆ ಕನೋ. ಅರ್ಜೆಂಟು’ ಅಂತ ಜಾಗ ಹುಡುಕತೊಡಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.